ಅಯೋಧ್ಯೆ ಭೂಮಿಪೂಜೆ ಸಂದರ್ಭ ಮನೆಗಳಲ್ಲೇ ಶ್ರೀರಾಮ ನಾಮ ಪಠಿಸಿ: ಪೇಜಾವರ ಶ್ರೀ
ಉಡುಪಿ, ಆಗಸ್ಟ್ 02: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಇದೇ ತಿಂಗಳ ಐದನೇ ತಾರೀಕಿನಂದು ಐತಿಹಾಸಿಕ ಭೂಮಿಪೂಜೆ ನಡೆಯಲಿದೆ. ಅಂದು ಕೋಟ್ಯಂತರ ಆಸ್ತಿಕರ ಬಹುಕಾಲದ ಕನಸು ನನಸಾಗಲಿದೆ ಎಂದು ರಾಮಜನ್ಮ ಭೂಮಿ ಟ್ರಸ್ಟ್ ನ ಟ್ರಸ್ಟಿಯಾಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಉಡುಪಿ ಜಿಲ್ಲೆಯ ನೀಲಾವರದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀಗಳು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಐದನೇ ತಾರೀಕಿನಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಒಂದು ಐತಿಹಾಸಿಕ ಭೂಮಿಪೂಜೆಯನ್ನು ನೆರವೇರಿಸಲಿದ್ದಾರೆ. ಕೊರೊನಾದಿಂದಾಗಿ ನಮಗೆಲ್ಲ ದೈಹಿಕವಾಗಿ ಭಾಗವಹಿಸಲು ಸಾಧ್ಯ ಆಗದು. ಆದರೆ, ಈ ಕಾರ್ಯಕ್ರಮದ ನೇರಪ್ರಸಾರವನ್ನು ನಾವು ಇದ್ದ ಸ್ಥಳದಿಂದಲೇ ವಿಕ್ಷಣೆ ಮಾಡಿ ಭಾಗವಹಿಸೋಣ ಎಂದರು.
ಈ ಸಂಧರ್ಭದಲ್ಲಿ ನಮ್ಮ ನಮ್ಮ ಮನೆಗಳಲ್ಲಿ ಭಜನೆ, ಜಪ ತಪಗಳನ್ನು ಆಚರಿಸಿ ಶ್ರೀರಾಮನಾಮ ಜಪವನ್ನು ಪಠಿಸಿ ನಮ್ಮ ಮನೆಯ ಮೇಲ್ಗಡೆ ಭಗವಾಧ್ವಜವನ್ನು ಹಾರಿಸುವ ಮೂಲಕ ಈ ಕಾರ್ಯಕ್ರಮದಲ್ಲಿ ದೇಶದ ಬಂಧುಗಳೆಲ್ಲರೂ ಭಾಗವಹಿಸೋಣ ಎಂದು ಕರೆ ನೀಡಿದರು.

ರಾಮ ಮಂದಿರ ನಿರ್ಮಾಣದಲ್ಲಿ ದೇಶದ ಎಲ್ಲಾ ಭಕ್ತರ ಪಾಲು ಇರಬೇಕು ಎಂಬ ಕಾರಣಕ್ಕಾಗಿ ಪ್ರತಿಯೊಬ್ಬರು 10 ರುಪಾಯಿಗಳನ್ನು ಹಾಗೂ ಪ್ರತಿ ಮನೆಯಿಂದ 101 ರುಪಾಯಿಗಳನ್ನು ಸಂಗ್ರಹಿಸಿ ನೀಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications