ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡ ಮೆಟ್ರೋ ಮ್ಯಾನ್ ಶ್ರೀಧರನ್
ತಿರುವನಂತಪುರಂ, ಫೆ. 26: ಮೆಟ್ರೋ ಮ್ಯಾನ್ ಎಂದೇ ಖ್ಯಾತರಾಗಿರುವ ಇ ಶ್ರೀಧರನ್ ಅವರು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವ ಆರ್ ಕೆ ಸಿಂಗ್, ಪ್ರಹ್ಲಾದ್ ಜೋಶಿ ಅವರು ಶ್ರೀಧರನ್ ಅವರನ್ನು ಸ್ವಾಗತಿಸಿದ್ದಾರೆ.
ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು, ಸಾಲದ ಸುಳಿಯಿಂದ ರಾಜ್ಯ ಹೊರ ಬರಲು ಬೇಕಾದ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು ಎಂದು ಶ್ರೀಧರನ್ ಹೇಳಿದ್ದಾರೆ.
ಎಡಪಕ್ಷದಿಂದ ಬಿಜೆಪಿಗೆ 98 ಮಂದಿ
ಶ್ರೀಧರನ್ ಸೇರ್ಪಡೆ ಬೆನ್ನಲ್ಲೇ ಎಡಪಕ್ಷದಿಂದ ಸುಮಾರು 98 ಸದಸ್ಯರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಸ್ಥಳೀಯ ಘಟಕಗಳಲ್ಲಿ ಬಲ ಹೆಚ್ಚಳಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಈ ಬಗ್ಗೆ ಹೆಚಿನ ಮಾಹಿತಿ ನೀಡಿದ ಬಿಜೆಪಿ ಮುಖಂಡ ವಿವಿ ರಾಜೇಶ್, ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ. ಸ್ಥಳೀಯ ಕಮ್ಯೂನಿಸ್ಟ್ ಪಾರ್ಟಿ ಕಚೇರಿಯನ್ನು ಬಿಜೆಪಿ ಕಚೇರಿಯಾಗಿ ಶೀಘ್ರದಲ್ಲೇ ಬದಲಾಯಿಸಲಾಗುವುದು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಮುಕುಲ್ ಪ್ರಭಾಕರನ್ ಅವರ ನೇತೃತ್ವದಲ್ಲಿ 98 ಮಂದಿ ಸಿಪಿಐ (ಎಂ) ಸದಸ್ಯರು ಬಿಜೆಪಿಗೆ ಸೇರಿದ್ದಾರೆ.
ಪ್ರತಿಯೊಬ್ಬ ಮಲಯಾಳಿಗಳ ಮೇಲೆ 1.2 ಲಕ್ಷ ಸಾಲದ ಹೊರೆ ಇದೆಯೆಂದರೆ ಸರ್ಕಾರ ಯಾವ ರೀತಿ ದಿವಾಳಯಾಗಿದೆ ಎಂಬುದನ್ನು ಯೋಚಿಸಿ, ಇದಕ್ಕೆ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರುವುದು ಮುಖ್ಯವಾಗಿದೆ ಎಂದರು.
ಎಲ್ ಡಿ ಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಲವು ವರ್ಷಗಳಿಂದ ಆಡಳಿತ ನಡೆಸುತ್ತಿದ್ದು ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಬಿಜೆಪಿ ಬಯಸಿದರೆ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದರು ಹೇಳಿದರು. ಸಿಎಂ ಆಗಲು ಕೂಡಾ ಸಿದ್ಧ, ನನ್ನ ಕನಸಿನ ಕೇರಳಕ್ಕಾಗಿ ನಾನು ರೂಪಿಸಿರುವ ಯೋಜನೆಗಳು ಸಾಕಾರಗೊಳ್ಳಬೇಕಾದರೆ ಉನ್ನತ ಹುದ್ದೆಯಲ್ಲಿರಬೇಕಾಗುತ್ತದೆ. ನನ್ನ ವೃತ್ತಿಗೆ ಸಂಬಂಸಿದ ನಿಗದಿತ ಕಾರ್ಯಕ್ರಮಗಳೆಲ್ಲವೂ ಈ ತಿಂಗಳು ಮುಕ್ತಾಯವಾಗಲಿದ್ದು, ರಾಜಕೀಯದ ಹಾದಿಯ ಮೂಲಕ ಕೇರಳದ ಅಭಿವೃದ್ಧಿಗಾಗಿ ಪುನರ್ ನಿರ್ಮಾಣಕ್ಕಾಗಿ ಶ್ರಮಿಸಲು ಬಯಸಿದ್ದೇನೆ ಎಂದು ಹೇಳಿದರು.












Click it and Unblock the Notifications