ಅಂತೂ-ಇಂತೂ ನಮ್ಮೂರಿಗೆ ರೈಲು ಬಂತು ಎಂದ ಕಣಿವೆ ಮಂದಿ!
ಶ್ರೀನಗರ, ನವೆಂಬರ್.11: ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಅಂತಾರಲ್ವಾ. ಇಲ್ಲಿ ಆಗಿದ್ದೂ ಕೂಡಾ ಅದೇ. ಕೇಂದ್ರ ಸರ್ಕಾರವೇನೋ ಜಮ್ಮು-ಕಾಶ್ಮೀರಕ್ಕಿದ್ದ 370 ವಿಶೇಷ ಸ್ಥಾನಮಾನವನವ್ನು ತೆರವುಗೊಳಿಸಿತ್ತು. ಆದರೆ, ಅಲ್ಲಿಂದ ಮುಂದೆ ಆಗಿದ್ದೇ ಬೇರೆ.
ಒಂದಲ್ಲ, ಎರಡಲ್ಲ, ಈ ಜನರು ರೈಲಿನ ಮುಖ ನೋಡೋದಕ್ಕೆ ಮೂರು ತಿಂಗಳೇ ಬೇಕಾಯಿತು. ಹಾಗಂತಾ ಇವರು ರೈಲನ್ನೇ ನೋಡಿಗರ ಮಂದಿಯಂತೂ ಮೊದಲೇ ಅಲ್ಲ. ಹಾಗಿದ್ದರೂ ಕೂಡಾ ಈ ಜನರಿಗೆ ಕಳದೆ ಮೂರು ತಿಂಗಳಿನಿಂದ ರೈಲಿನ ಮುಖ ನೋಡೋದಕ್ಕೂ ಆಗಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಸ್ವಲ್ಪ ತಿಳಿಗೊಂಡಿದೆ.
ಇದು ಭಾರತಾಂಬೆಯ ಮುಕುಟಮಣಿ ಜಮ್ಮು-ಕಾಶ್ಮೀರದ ಎರಡು ನಗರಗಳ ಕಥೆ. ಕೇಂದ್ರ ಸರ್ಕಾರ 370 ವಿಶೇಷ ಸ್ಥಾನಮಾನ ಕಾಯ್ದೆ ತೆರವುಗೊಳಿಸಿದ್ದೇ ತೆರವುಗೊಳಿಸಿದ್ದು. ಈ ಎರಡು ನಗರಗಳ ನಡುವೆ ಬಸ್ ಹಾಗೂ ರೈಲು ಸಂಚಾರವೆಲ್ಲ ಬಂದ್ ಆಗಿತ್ತು. ಅದಾಗಿ ಮೂರು ತಿಂಗಳ ನಂತರ ಈಗ ಮತ್ತೆ ರೈಲು ಸಂಚಾರ ಶುರುವಾಗಿದೆ.

ಶ್ರೀನಗರ-ಬಾರಾಮುಲ್ಲಾ ನಡುವೆ ಚುಕುಬುಕು
ಶ್ರೀನಗರದಿಂದ ಬಾರಾಮುಲ್ಲಾ ನಡುವಿನ ರೈಲ್ವೆ ಸಂಚಾರ ಇಂದಿನಿಂದ ಶುರುವಾಗಿದೆ. 100 ದಿನಕ್ಕೂ ಹೆಚ್ಚು ದಿನಗಳ ಕಾಲ ರೈಲ್ವೆ ಸಂಚಾರಕ್ಕೆ ಈ ಮಾರ್ಗದಲ್ಲಿ ಬ್ರೇಕ್ ಬಿದ್ದಿತ್ತು. ಆದರೆ, ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಕೊಂಚ ಸುಧಾರಣೆ ಕಂಡಿದೆ. ಹೀಗಾಗಿ ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ಮೂರು ದಿನಗಳಲ್ಲಿ ಎಲ್ಲವೂ ಸುಗಮ
ಇತ್ತೀಚಿಗಷ್ಟೇ ಜಮ್ಮು-ಕಾಶ್ಮೀರದ ಶ್ರೀನಗರ ಹಾಗೂ ಬಾರಾಮುಲ್ಲಾ ನಡುವೆ ರೈಲ್ವೆ ಸಂಚಾರಕ್ಕೆ ತೀರ್ಮಾನ ಕೈಗೊಳ್ಳಲಾಗಿತ್ತು. ಕಳೆದ ವಾರ ಎರಡು ಮಾರ್ಗಗಳ ನಡುವಿನ ಹಳಿಗಳ ಪರೀಕ್ಷೆಗೆ ಕಾಶ್ಮೀರದ ವಿಭಾಗದ ರೈಲ್ವೆ ಆಯುಕ್ತ ಬಶೀರ್ ಅಹ್ಮದ್ ಖಾನ್ ಸೂಚನೆ ನೀಡಿದ್ದರು. ಮೂರು ದಿನಗಳಲ್ಲಿ ಎರಡು ಮಾರ್ಗಗಳ ನಡುವಿನ ಹಳಿಗಳ ಪರೀಕ್ಷಾ ಪ್ರಕ್ರಿಯೆಯೂ ಮುಗಿದಿತ್ತು.

ಎರಡು ರೈಲುಗಳ ಓಡಾಟಕ್ಕೆ ಹಸಿರು ನಿಶಾನೆ
ನವೆಂಬರ್.11ರ ಸೋಮವಾರ ಶ್ರೀನಗರ ಹಾಗೂ ಬಾರಾಮುಲ್ಲಾ ನಡುವೆ ಪ್ರಾಯೋಗಿಕವಾಗಿ ರೈಲ್ವೆ ಸಂಚಾರವನ್ನು ಆರಂಭಿಸಲಾಗಿತ್ತು. ಇಂದಿನಿಂದ ಎರಡು ನಗರಗಳ ನಡುವೆ ರೈಲು ಸಂಚಾರಮುಕ್ತವಾಗಲಿದ್ದು, ಆರಂಭದಲ್ಲಿ ಎರಡು ರೈಲುಗಳು ಸಂಚಾರ ನಡೆಸಲಿವೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಇಷ್ಟು ದಿನಗಳೇ ಬೇಕಾಯಿತು ರೈಲ್ವೆ ಸಂಚಾರಕ್ಕೆ!
ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರ ಹಾಗೂ ಬಾರಾಮುಲ್ಲಾ ನಡುವಿನ ರೈಲ್ವೆ ಸಂಚಾರ ಮತ್ತೆ ಆರಂಭಗೊಳ್ಳಲಿದೆ. ಕಳೆದ ಆಗಸ್ಟ್.05ರಂದು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ 370 ವಿಶೇಷ ಸ್ಥಾನಮಾನವನ್ನು ತೆರವುಗೊಳಿಸಿತ್ತು. ಅಂದಿನಿಂದ ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಜಮ್ಮು-ಕಾಶ್ಮೀರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂರು ತಿಂಗಳವರೆಗೂ ರೈಲ್ವೆ ಸಂಚಾರವನ್ನು ಇಷ್ಟು ಅವಧಿಗೆ ಸ್ಥಗಿತಗೊಳಿಸಲಾಗಿತ್ತು.












Click it and Unblock the Notifications