ನಾವು ಜತೆಗೂಡಿದರೆ ಪರಿಸ್ಥಿತಿಯನ್ನು ಬದಲಿಸಬಹುದು: ಕಾಶ್ಮೀರದ ಬಗ್ಗೆ ಮೆಹಬೂಬ ಮುಫ್ತಿ ಹೇಳಿಕೆ
ಶ್ರೀನಗರ, ಅಕ್ಟೋಬರ್ 14: ಸುದೀರ್ಘ ಕಾಲದ ಬಂಧನದ ಬಳಿಕ ಮಂಗಳವಾರ ರಾತ್ರಿ ಬಿಡುಗಡೆಯಾದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರನ್ನು ನ್ಯಾಷನಲ್ ಕಾನ್ಫರೆನ್ಸ್ ಮುಖಂಡರಾದ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ ಅವರು ಬುಧವಾರ ಭೇಟಿ ಮಾಡಿದರು.
ಮೆಹಬೂಬ ಮುಫ್ತಿ ನಿವಾಸಕ್ಕೆ ಭೇಟಿ ನೀಡಿದ ನಾಯಕರು, ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ಎಲ್ಲ ಪ್ರಮುಖ ಪ್ರಾದೇಶಿಕ ರಾಜಕೀಯ ಪಕ್ಷಗಳ ಸಭೆಗೆ ಅವರನ್ನು ಆಹ್ವಾನಿಸಿದರು.
ಕಳೆದ ವರ್ಷದ ಆಗಸ್ಟ್ 5ರಂದು ಬಂಧನಕ್ಕೆ ಒಳಗಾಗಿದ್ದ ಮೆಹಬೂಬ ಮುಫ್ತಿ ಅವರನ್ನು ಭೇಟಿ ಮಾಡಲು ಅವರ ಗುಪ್ಕರ್ ನಿವಾಸಕ್ಕೆ ಪಿಡಿಪಿ ಮುಖಂಡರು ಮತ್ತು ಬೆಂಬಲಿಗರು ಕಣಿವೆಯ ವಿವಿಧ ಭಾಗಗಳಿಂದ ತೆರಳಿದ್ದರು.

'ಬಂಧನದಿಂದ ಬಿಡುಗಡೆಯಾದ ಮೆಹಬೂಬ ಮುಫ್ತಿ ಸಾಹಿಬಾ ಅವರ ಯೋಗ ಕ್ಷೇಮ ವಿಚಾರಿಸಲು ನಾನು ಮತ್ತು ನನ್ನ ತಂದೆ ಅವರನ್ನು ಭೇಟಿ ಮಾಡಿದ್ದೆವು. ಗುರುವಾರ ಮಧ್ಯಾಹ್ನ ಆಯೋಜಿಸಿರುವ ಗುಪ್ಕರ್ ಡಿಕ್ಲೇರೇಷನ್ ಸಭೆಗೆ ಪಾಲ್ಗೊಳ್ಳುವಂತೆ ಮಾಡಿದ ಆಹ್ವಾನವನ್ನು ಅವರು ಒಪ್ಪಿಕೊಂಡಿದ್ದಾರೆ' ಎಂದು ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ.
'ನೀವಿಬ್ಬರೂ ಮನೆಗೆ ಭೇಟಿ ನೀಡಿದ ಸಂಗತಿ ಖುಷಿ ನೀಡಿತು. ಫಾರೂಕ್ ಸಾಹೇಬ್ ಅವರ ಮಾತುಗಳು ನನ್ನಲ್ಲಿ ಧೈರ್ಯ ತುಂಬಿದವು. ನಾವೆಲ್ಲರೂ ಸೇರಿ ಒಳಿತಿಗಾಗಿ ಸನ್ನಿವೇಶದವನ್ನು ಬದಲಿಸಬಹುದು ಎನ್ನುವ ಖಾತರಿ ನನಗಿದೆ' ಎಂದು ಒಮರ್ ಅಬ್ದುಲ್ಲಾ ಅವರಿಗೆ ಮುಫ್ತಿ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications