ಬೆಂಕಿಯೊಂದಿಗೆ ಸರಸವಾಡಬೇಡಿ : ಮೋದಿಗೆ ಮೆಹಬೂಬಾ ಚಾಲೆಂಜ್!
Recommended Video

ಶ್ರೀನಗರ, ಫೆಬ್ರವರಿ 25 : "ಬೆಂಕಿಯೊಂದಿಗೆ ಸರಸವಾಡಬೇಡಿ. ಸಂವಿಧಾನದ ಅನುಚ್ಛೇದ 35ಎ ಜೊತೆ ಆಟವಾಡಬೇಡಿ. ಇಲ್ಲದಿದ್ದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ 1947ರ ನಂತರ ನೀವು ಏನು ಕಂಡಿಲ್ಲವೋ ಅದನ್ನು ಕಾಣುತ್ತೀರಿ!"
ಹೀಗೆಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಮತ್ತು ಭಾರತದ ಸಾರ್ವಭೌಮತ್ವಕ್ಕೆ ನೇರಾನೇರ ಸವಾಲು ಹಾಕಿದವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ನಾಯಕಿ ಮೆಹಬೂಬಾ ಮಫ್ತಿ.
ಹಿಂದೆಂದೂ ಕಂಡಿರದ ಘಟನೆಗಳನ್ನು ಕಾಣುತ್ತೀರಿ ಎಂದು ಧಮ್ಕಿ ಹಾಕಿರುವುದು ಮಾತ್ರವಲ್ಲ, ಅನುಚ್ಛೇದ 35ಎ ಅಲ್ಲಿನ ಜನತೆಗೆ ನೀಡಿರುವ ವಿಶೇಷ ಅಧಿಕಾರವನ್ನು ಕಸಿದುಕೊಂಡರೆ, ಭಾರತದ ತ್ರಿವರ್ಣ ಧ್ವಜದ ಬದಲಾಗಿ ಜಮ್ಮು ಮತ್ತು ಕಾಶ್ಮೀರದ ಜನರು ಬೇರೆ ಯಾವ ದೇಶದ ಬಾವುಟವನ್ನು ಕೈಗೆತ್ತಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ದೇಶವಿದ್ರೋಹಿ ಹೇಳಿಕೆಯನ್ನು ನೀಡಿದ್ದಾರೆ. ಹಾಗಿದ್ರೆ, ಇವರೇನು ಪಾಕಿಸ್ತಾನದ ಧ್ವಜ ಜನರು ಹಿಡಿಯುತ್ತಾರೆಂದು ಹೇಳುತ್ತಿದ್ದಾರಾ?
ಸಂವಿಧಾನದ ಈ ಅನುಚ್ಛೇದ, ಜಮ್ಮು ಮತ್ತು ಕಾಶ್ಮೀರದ ಶಾಸಕಾಂಗಕ್ಕೆ 'ಶಾಶ್ವತ ನಿವಾಸಿ' ವ್ಯಾಖ್ಯೆಯನ್ನು ಬರೆಯುವ ಮತ್ತು ಅಲ್ಲಿನ ಶಾಶ್ವತ ನಿವಾಸಿಗಳಿಗೆ ವಿಶೇಷ ಅಧಿಕಾರ ಮತ್ತು ಸವಲತ್ತುಗಳನ್ನು ನೀಡುವ ಅಧಿಕಾರ ನೀಡುತ್ತದೆ. ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ, ಈ ವಿಶೇಷ ಅಧಿಕಾರ ಮತ್ತು ಸವಲತ್ತುಗಳನ್ನು ಕಿತ್ತುಕೊಳ್ಳಬೇಕೆಂಬ ದನಿ ಬಲವಾಗಿ ಕೇಳಿಬರುತ್ತಿದೆ.

ಪ್ರತ್ಯೇಕತಾವಾದಿಗೆಳಿಗೆ ನೀಡಿದ ಭದ್ರತೆ ವಾಪಸ್
ಈಗಾಗಲೆ ಭಾರತ ಸರಕಾರ, ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ, ಅಧಿಕಾರಿಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿದೆ. ಹಲವಾರು ಪ್ರತ್ಯೇಕತಾವಾದಿಗಳನ್ನು ಬಂಧಿಸಲಾಗಿದೆ. ಇದರಿಂದ ತಮ್ಮ ಮೇಲೆ ಉಗ್ರರ ದಾಳಿಯಾಗಬಹುದು ಎಂದು ಪ್ರತ್ಯೇಕತಾವಾದಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಆದರೆ, ಪ್ರತ್ಯೇಕತಾವಾದಿಗಳನ್ನು ಸದೆಬಡಿಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ.

ತಮ್ಮ ಅಸಲಿಯತ್ತು ಕಡೆಗೂ ತೋರಿದ್ದಾರೆ
ಜಮ್ಮು ಮತ್ತು ಕಾಶ್ಮೀರದ ಮೇಲೆ ಭಾರತದ ಸೈನಿಕರು ನಡೆಸುತ್ತಿರುವ ದಬ್ಬಾಳಿಕೆಯಿಂದಾಗಿಯೇ ಪುಲ್ವಾಮಾದಂಥ ಘಟನೆ ನಡೆದಿದೆ ಎಂದಿದ್ದ ಮೆಹಬೂಬಾ ಮಫ್ತಿ ಅವರು ಈ ರೀತಿ ಹೇಳಿಕೆ ನೀಡಿ, ಕೇಂದ್ರ ಸರಕಾರಕ್ಕೆ ಓಪನ್ ಚಾಲೆಂಜ್ ನೀಡಿರುವುದು ಮಾತ್ರವಲ್ಲ, ಭಾರತದ ಮೇಲೆಯೇ ಜಮ್ಮು ಮತ್ತು ಕಾಶ್ಮೀರದ ಜನತೆ ದಂಗೆಯೇಳುವಂತೆ ಅವರನ್ನು ಕೆಣಕುತ್ತಿದ್ದಾರೆ. ಅವರು ತಮ್ಮ ಅಸಲಿಯತ್ತೇನೆಂದು ಕಡೆಗೂ ತೋರಿಸಿದ್ದಾರೆ. ನಿಮ್ಮಂಥವರೇ ಕಾಶ್ಮೀರದಲ್ಲಿ ಅಧಿಕಾರ ಸ್ಥಾಪಿಸಲೆಂದು ಕೊಲೆಗಳನ್ನು ಮಾಡಿಸುತ್ತಿದ್ದೀರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೋದಿ ಒಬ್ಬೊಬ್ಬರನ್ನೇ ಬೆತ್ತಲು ಮಾಡುತ್ತಿದ್ದಾರೆ
ಇಂಥ ಮಾತುಗಳು ಹೊರಬರಲೇಬೇಕಿದ್ದವು. ಮೋದಿಜೀ ನಿಮಗೆ ಹ್ಯಾಟ್ಸಾಫ್. ನೀವು ಒಬ್ಬೊಬ್ಬರನ್ನೇ ಬೆತ್ತಲು ಮಾಡುತ್ತಿದ್ದೀರಿ. ಇಲ್ಲಿಯವರೆಗೆ ಅವರು (ಮೆಹಬೂಬಾ ಮಫ್ತಿ) ತಾವು ಭಾರತೀಯರೆಂದು ಸೋಗು ಹಾಕುತ್ತಿದ್ದರು. ಆದರೆ, ಈಗ ಸತ್ಯಾಂಶವೇನೆಂದು ಹೊರಗೆ ಬಂದಿದೆ. ಕಾಶ್ಮೀರಕ್ಕೆ 10 ಲಕ್ಷ ನಿವೃತ್ತ ಯೋಧರನ್ನು ಗನ್ ಕೊಟ್ಟು ಕಳಿಸಿ. ಆಗ, ನಮ್ಮ ವಿರುದ್ಧ ಯಾರು ಧಮ್ಕಿ ಹಾಕುತ್ತಾರೆಂದು ನೋಡೋಣ. ಸಂವಿಧಾನದ ಅನುಚ್ಛೇದ 35ಎ ತೊಡೆದು ಹಾಕಲೇಬೇಕು ಎಂದು ಟ್ವಿಟ್ಟಿಗರೊಬ್ಬರು ಹೇಳಿದ್ದಾರೆ.

ಭಾರತದ ಐಕ್ಯತೆ ಮತ್ತು ಸ್ವಾಭಿಮಾನಕ್ಕೆ ಸವಾಲು
ಮೆಹಬೂಬಾ ಮಫ್ತಿ ಅವರು ಭಾರತದ ಐಕ್ಯತೆ ಮತ್ತು ಸ್ವಾಭಿಮಾನಕ್ಕೆ ನೇರವಾಗಿಯೇ ಸವಾಲು ಹಾಕಿದ್ದಾರೆ. ಧಮ್ಕಿ ಹಾಕುತ್ತಿರುವುದು ಮಾತ್ರವಲ್ಲ, ಕೇಂದ್ರ ಸರಕಾರವನ್ನು ಬ್ಲಾಕ್ ಮೇಲ್ ಮಾಡಲು ಯತ್ನಿಸುತ್ತಿದ್ದಾರೆ. ದೇಶದ್ರೋಹದ ಆರೋಪದ ಮೇಲೆ ಅವರನ್ನು ಕೂಡಲೆ ಬಂಧಿಸಬೇಕು. ದೇಶದ್ರೋಹಕ್ಕೆ ಶಿಕ್ಷೆಯೇನೆಂದು ಗೊತ್ತೆ? ನರೇಂದ್ರ ಮೋದಿಯವರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಿರುವ ಅನುಚ್ಛೇದ 35ಎ ಮತ್ತು ವಿಶೇಷ ಸ್ಥಾನಮಾನ ನೀಡಿರುವ ಅನುಚ್ಛೇದ 370ನ್ನು ರದ್ದುಗೊಳಿಸಬೇಕು ಟ್ವಿಟ್ಟಿಗರು ಆಗ್ರಹಿಸುತ್ತಿದ್ದಾರೆ.

ಭಾರತದ ಸೇನೆ ತಕ್ಕ ಉತ್ತರ ನೀಡಲಿದೆ
ಏನು ತಮಾಷೆ ಮಾಡ್ತಿದ್ದೀರಾ? ಒಂದು ಸತಿ ಅನುಚ್ಛೇದ 35ಎ ಹೋದರೆ ಎರಡೂ ಕುಟುಂಬಗಳ (ಮೆಹಬೂಬಾ ಮಫ್ತಿ ಮತ್ತು ಫಾರೂಕ್ ಅಬ್ದುಲ್ಲಾ) ಅವರ ರಾಜಕೀಯ ಜೀವನ ಕೊನೆಯಾದಂತೆಯೆ. ಯಾರಾದರೂ ಪಾಕಿಸ್ತಾನದ ಧ್ವಜವನ್ನು ಕೈಗೆತ್ತಿಕೊಂಡರೆ, ವಿಶ್ವದ ಎರಡನೇ ಅತೀದೊಡ್ಡ ಸೇನೆಯಿಂದ ತಕ್ಕ ಉತ್ತರ ಪಡೆಯಲಿದೆ, ಅಷ್ಟೇ. ಇವರು ಆಡುತ್ತಿರುವುದು ಭಯೋತ್ಪಾದಕರಾಡುವ ಮಾತೇ ಹೊರತು ಮಾಜಿ ಮುಖ್ಯಮಂತ್ರಿ ಆಡುವ ಮಾತಲ್ಲ. 130 ಕೋಟಿ ಭಾರತೀಯರಲ್ಲಿ ವಿಶ್ವಾಸವಿದೆ, ಕಾಶ್ಮೀರದಲ್ಲಿ ಭಾರತದ ತ್ವಿವರ್ಣ ಧ್ವಜವೇ ಅತೀ ಎತ್ತರದಲ್ಲಿ ಹಾರಾಡಲಿದೆ. ಅದೇನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ಮತ್ತೊಬ್ಬರು ಮೆಹಬೂಬಾ ಮಫ್ತಿಗೇ ಸವಾಲು ಹಾಕಿದ್ದಾರೆ.












Click it and Unblock the Notifications