ರಾಜ್ಯ ರಾಜಕೀಯಕ್ಕೆ ಬರುವ ಕುರಿತು ಬಿ. ವೈ. ರಾಘವೇಂದ್ರ ಮಾತು!
ಶಿರಸಿ, ಅಕ್ಟೋಬರ್ 11; "ವರಿಷ್ಠರು ಮತ್ತು ಸಂಘಟನೆ ಒಪ್ಪಿದರೆ ರಾಜ್ಯ ರಾಜಕಾರಣ ಪ್ರವೇಶಿಸುತ್ತೇನೆ" ಎಂದು ಶಿವಮೊಗ್ಗದ ಬಿಜೆಪಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ಹೇಳಿದರು.
ಸೋಮವಾರ ಶಿರಸಿ ನಗರದ ಗೋಪಾಲಕೃಷ್ಣ ದೇವಾಲಯದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಮಾಡಲು ಬಿ. ವೈ. ರಾಘವೇಂದ್ರ ಆಗಮಿಸಿದ್ದರು. ಆಗ ಮಾಧ್ಯಮದವರು ಮುಂಬರುವ ವಿಧಾನಸಭೆ ಚುನಾವಣೆಗೆ ಶಿಕಾರಿಪುರದಿಂದ ಸ್ಪರ್ಧಿಸುತ್ತೀರಾ? ಎಂದು ಪ್ರಶ್ನಿಸಿದರು.
ಆಗ ಉತ್ತರ ನೀಡಿದ ಬಿ. ವೈ. ರಾಘವೇಂದ್ರ, "ಯಡಿಯೂರಪ್ಪ ಹಾಗೂ ನಮ್ಮನ್ನು ಬಿಜೆಪಿ ಪಕ್ಷ ಬೆಳೆಸಿದೆ. ಪಕ್ಷ ಎಂದಿಗೂ ನಮಗೆ ತಾಯಿ ಇದ್ದಂತೆ. ಯಡಿಯೂರಪ್ಪ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಪಕ್ಷ ಸಂಘಟನೆ ಮಾಡಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ" ಎಂದರು.
"ಪಕ್ಷ ಮತ್ತು ವರಿಷ್ಠರು ಒಪ್ಪಿಗೆ ನೀಡಿ ಸೂಚಿಸಿದರೆ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ" ಎಂದು ಬಿ. ವೈ. ರಾಘವೇಂದ್ರ ಸ್ಪಷ್ಟಪಡಿಸಿದರು. ಈ ಮೂಲಕ ರಾಜ್ಯ ರಾಜಕೀಯದಲ್ಲಿಯೂ ತಮಗೆ ಆಸಕ್ತಿ ಇದೆ ಎಂಬ ಪರೋಕ್ಷ ಸುಳಿವನ್ನು ನೀಡಿದರು.
ಸಹಜ ಪ್ರಕ್ರಿಯೆ; ಐಟಿ ದಾಳಿ ಕುರಿತು ಮಾತನಾಡಿದ ಬಿ. ವೈ. ರಾಘವೇಂದ್ರ, "ಡಿ. ಕೆ. ಶಿವಕುಮಾರ್ ಆರೋಪ ಸತ್ಯಕ್ಕೆ ದೂರವಾಗಿದೆ. ಯಡಿಯೂರಪ್ಪ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದ್ದು ರಾಜಕೀಯ ಷಡ್ಯಂತ್ರವಲ್ಲ. ಅದು ತನಿಖಾ ದಳದ ಸಹಜ ಪ್ರಕ್ರಿಯೆ" ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿ. ವೈ. ವಿಜಯೇಂದ್ರ ಮತ್ತು ಬಿ. ವೈ. ರಾಘವೇಂದ್ರ ರಾಜಕೀಯ ಭವಿಷ್ಯದ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿವೆ. ಪ್ರಸ್ತುತ ಶಿವಮೊಗ್ಗ ಸಂಸದರಾಗಿರುವ ಬಿ. ವೈ. ರಾಘವೇಂದ್ರ ರಾಷ್ಟ್ರ ರಾಜಕೀಯದಲ್ಲಿದ್ದಾರೆ. ಸಂಸದರಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ.
ಬಿ. ಎಸ್. ಯಡಿಯೂರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದಾಗ ಶಿಕಾರಿಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ಬಿ. ವೈ. ರಾಘವೇಂದ್ರ ಶಾಸಕರಾಗಿದ್ದರು. ಬಳಿಕ ಮತ್ತೆ ಶಿವಮೊಗ್ಗದಿಂದ ಅವರು ಸಂಸದರಾಗಿ ಆಯ್ಕೆಯಾಗಿದ್ದಾರೆ.
ಯಡಿಯೂರಪ್ಪ ಮತ್ತೊಬ್ಬ ಪುತ್ರ ಬಿ. ವೈ. ವಿಜಯೇಂದ್ರ ರಾಜ್ಯ ರಾಜಕೀಯದಲ್ಲಿದ್ದಾರೆ. ಶಾಸಕರು, ವಿಧಾನ ಪರಿಷತ್ ಸದಸ್ಯರಲ್ಲ. ಆದರೆ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಈಗ ಬಿ. ವೈ. ರಾಘವೇಂದ್ರ ಸಹ ರಾಜ್ಯ ರಾಜಕೀಯಕ್ಕೆ ಬರಲಿದ್ದಾರೆಯೇ? ಕಾದು ನೋಡಬೇಕಿದೆ.
ಲೋಕಸಭೆ ಚುನಾವಣೆ; ಶಿವಮೊಗ್ಗದ 2009ರ ಲೋಕಸಭಾ ಚುನಾವಣೆ ಭಾರೀ ಕುತೂಹಲ ಕೆರಳಿಸಿತ್ತು. ಎಸ್. ಬಂಗಾರಪ್ಪ ಮತ್ತು ಬಿ. ವೈ. ರಾಘವೇಂದ್ರ ಎದುರಾಳಿಗಳಾಗಿದ್ದರು. ಬಿ. ವೈ. ರಾಘವೇಂದ್ರ ಚುನಾವಣೆಯಲ್ಲಿ 4,82,783 ಮತಗಳನ್ನು ಪಡೆದು 4,29,890 ಮತಗಳನ್ನು ಪಡೆದ ಎಸ್. ಬಂಗಾರಪ್ಪ ಸೋಲಿಸಿ ಲೋಕಸಭೆ ಪ್ರವೇಶಿಸಿದ್ದರು.
2014ರ ಲೋಕಸಭೆ ಚುನಾವಣೆಯಲ್ಲಿ ಬಿ. ಎಸ್. ಯಡಿಯೂರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾದರು. ಆದ್ದರಿಂದ, ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಶಿಕಾರಿಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿ. ವೈ. ರಾಘವೇಂದ್ರ ಶಾಸಕರಾಗಿ ಆಯ್ಕೆಯಾದರು.
2019ರ ಲೋಕಸಭೆ ಚುನಾವಣೆಯಲ್ಲಿ ಪುನಃ ಬಿ. ವೈ. ರಾಘವೇಂದ್ರ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದರು. 7,29,872 ಮತಗಳನ್ನು ಪಡೆದು, ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿದ್ದ ಮಧು ಬಂಗಾರಪ್ಪ ಸೋಲಿಸಿ ಪುನಃ ಲೋಕಸಭೆ ಪ್ರವೇಶಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದಾಗ ಬಿ. ವೈ. ರಾಘವೇಂದ್ರ ಕೇಂದ್ರದಲ್ಲಿ ಸಚಿವರಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಯಡಿಯೂರಪ್ಪ ವರಿಷ್ಠರ ಮುಂದೆ ರಾಘವೇಂದ್ರಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು.












Click it and Unblock the Notifications