ಆರು ಮಂದಿ ಜೀವ ಉಳಿಸಿದ ಸಚಿವ ರತ್ನಾಕರ್ ಸಿಬ್ಬಂದಿ
ಶಿವಮೊಗ್ಗ, ಸೆ.14 : ಸಚಿವರ ಕಾರನ್ನು ಹಿಂದಿಕ್ಕುವ ರಭಸದಲ್ಲಿ ಕಾರು ಸಮೇತ ಕೆರೆಗೆ ಬಿದ್ದಿದ್ದ ಆರು ಮಂದಿಯನ್ನು ಸಚಿವ ಕಿಮ್ಮನೆ ರತ್ನಾಕರ್ ಅವರ ಬೆಂಗಾವಲು ಪಡೆ ಸಿಬ್ಬಂದಿ ರಕ್ಷಿಸಿರುವ ಘಟನೆ ತೀರ್ಥಹಳ್ಳಿ ತಾಲೂಕು ಬೇಗುವಳ್ಳಿಯಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ ಕಾರ್ಕಳಕ್ಕೆ ಹೋಗಿದ್ದ ಭದ್ರಾವತಿ ಹೊಸಮನೆ ಬಡಾವಣೆಯ ಉದಯಕುಮಾರ್ ತಮ್ಮ ತಂದೆ, ತಾಯಿ, ಪತ್ನಿ ಸುಮಾ, ಇಬ್ಬರು ಮಕ್ಕಳು ಮತ್ತು ಸಹೋದರನೊಂದಿಗೆ ಊರಿಗೆ ವಾಪಸ್ ಬರುತ್ತಿದ್ದರು.

ಕಚೇರಿ ಹಾಗೂ ಮಕ್ಕಳಿಗೆ ಶಾಲೆಗೆ ತಡವಾಗುತ್ತದೆ ಎಂದು ವೇಗವಾಗಿ ಕಾರು ಓಡಿಸುತ್ತಿದ್ದರು. ಬೇಗುವಳ್ಳಿ ಬಳಿ ಬಂದಾಗ ಮುಂದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಕಾರು ಇವರಿಗೆ ಸಿಕ್ಕಿದೆ.
ಸಚಿವರ ಕಾರನ್ನು ಹಿಂದಿಕ್ಕುವ ಭರದಲ್ಲಿ ಕಾರಿನ ವೇಗವನ್ನು ಉದಯ್ ಕುಮಾರ್ ಜಾಸ್ತಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ, ರಸ್ತೆಯ ಪಕ್ಕದಲ್ಲಿದ್ದ ಕರೆಗೆ ಬಿದ್ದಿದೆ. ತಕ್ಷಣ ಸಚಿವರು ಕಾರು ನಿಲ್ಲಿಸಲು ಸೂಚಿಸಿದ್ದಾರೆ.
ಅಷ್ಟರಲ್ಲೇ ಕಾರು ನೀರಿನಲ್ಲಿ ಮುಳುಗಿ ಹೋಗುತ್ತಿತ್ತು. ಕಾರಿನಲ್ಲಿದ್ದವರು ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ತಕ್ಷಣ ಸಚಿವರ ಕಾರು ಚಾಲಕ ಚಂದ್ರು ಕೆರೆಗೆ ಹಾರಿ, ಕಾರಿನಲ್ಲಿದ್ದವರನ್ನು ರಕ್ಷಿಸುವ ಕಾರ್ಯ ಕೈಗೊಂಡರು. ಸಚಿವರ ಎಸ್ಕಾರ್ಟ್ ಸಿಬ್ಬಂದಿ ಸಹ ಕಾರಿನಲ್ಲಿದ್ದವರ ರಕ್ಷಣೆಗೆ ಸಹಾಯ ಮಾಡಿದರು. ಆದ್ದರಿಂದ ಕಾರಿನಲ್ಲಿದ್ದ ಆರು ಜನರು ಪ್ರಾಣಾಪಾಯದಿಂದ ಪಾರಾದರು.
ಸಚಿವರ ಕಾರು ಚಾಲಕ ಚಂದ್ರು ಮತ್ತು ಎಸ್ಕಾರ್ಟ್ ವಾಹನ ಚಾಲಕ ಕೃಷ್ಣಮೂರ್ತಿ ಅವರ ಸಮಯ ಪ್ರಜ್ಞೆಯಿಂದಾಗಿ ಆಗಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಕಾರಿನಲ್ಲಿದ್ದ ಒಂದು ಮಗು ಮಾತ್ರ ನೀರು ಕುಡಿದು ಪ್ರಜ್ಞಾಹೀನವಾಗಿತ್ತು.
ತಕ್ಷಣ 108 ಆಂಬ್ಯುಲೆನ್ಸ್ ಮೂಲಕ ಕಾರಿನಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸುಮಾರು 15 ರಿಂದ 20 ಅಡಿ ಆಳವಿದ್ದ ಕೆರೆಯಲ್ಲಿ ತಮ್ಮ ಜೀವದ ಹಂಗು ತೊರೆದು ಇಡೀ ಕುಟುಂಬವನ್ನು ರಕ್ಷಿಸಿದವರಿಗೆ ಉದಯಕುಮಾರ್ ಅವರ ಕುಟುಂಬದವರು ಕೃತಜ್ಞತೆ ಸಲ್ಲಿಸಿದ್ದಾರೆ.












Click it and Unblock the Notifications