ಶಿವಮೊಗ್ಗ; ಮತದಾನಕ್ಕೆ ಸಿದ್ಧತೆ, ಒಟ್ಟು 1782 ಮತಗಟ್ಟೆಗಳು
ಶಿವಮೊಗ್ಗ, ಮೇ 09; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಬುಧವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿದ್ದು, 74 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ, ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್ ಮತದಾನದ ಸಿದ್ದತೆ ಕುರಿತು ಮಾಹಿತಿ ನೀಡಿದ್ದಾರೆ. ವಿಧಾನಸಭಾ ಚುನಾವಣೆಯ ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 728886 ಪುರುಷ, 743713 ಮಹಿಳಾ, 32 ಇತರೆ ಹಾಗೂ 696 ಸೇವಾ ಮತದಾರರು ಸೇರಿ ಒಟ್ಟು 1473327 ಮತದಾರರಿದ್ದಾರೆ ಎಂದರು.

ಜಿಲ್ಲೆಯಲ್ಲಿ ಶಿವಮೊಗ್ಗ ಗ್ರಾಮಾಂತರದಲ್ಲಿ 11, ಭದ್ರಾವತಿಯಲ್ಲಿ 14, ಶಿವಮೊಗ್ಗ ನಗರದಲ್ಲಿ 15, ತೀರ್ಥಹಳ್ಳಿಯಲ್ಲಿ 5, ಶಿಕಾರಿಪುರದಲ್ಲಿ 10, ಸೊರಬದಲ್ಲಿ 10 ಮತ್ತು ಸಾಗರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ 1775 + 7 ಪೂರಕ ಸೇರಿದಂತೆ ಒಟ್ಟು 1782 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.
ಸಿಬ್ಬಂದಿಗಳ ನೇಮಕ; ಶಿವಮೊಗ್ಗ ಜಿಲ್ಲೆಯಲ್ಲಿ ಮತದಾನಕ್ಕೆ ಸಂಬಂಧಿದಂತೆ 2050 ಪಿಆರ್ಓ, 2050 ಎಪಿಆರ್ಓ, 4100 ಪಿಓ ಸೇರಿದಂತೆ ಒಟ್ಟು 8200 ಮತಗಟ್ಟೆ ಅಧಿಕಾರಿ/ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 83 ಮೈಕ್ರೋ ಅಬ್ಸರ್ವರ್ಸ್ಗಳನ್ನು ನೇಮಕ ಮಾಡಲಾಗಿದೆ.

ಮತದಾನಕ್ಕೆ ಸಿಬ್ಬಂದಿಗಳನ್ನು ಕರೆದೊಯ್ಯಲು ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಗ್ರಾಮಾಂತರಕ್ಕೆ 16, ಭದ್ರಾವತಿಗೆ 40, ಶಿವಮೊಗ್ಗ ನಗರಕ್ಕೆ 15, ತೀರ್ಥಹಳ್ಳಿಗೆ 45, ಶಿಕಾರಿಪುರಕ್ಕೆ 43, ಸೊರಬಕ್ಕೆ 36, ಸಾಗರಕ್ಕೆ 31 ಮತ್ತು ಹೊಸನಗರಕ್ಕೆ 14 ಸೇರಿದಂತೆ ಒಟ್ಟು 240 ಬಸ್ ವ್ಯವಸ್ಥೆ ಮಾಡಲಾಗಿದೆ.
ಮೇ 9ರ ಮಂಗಳವಾರ ಮಸ್ಟರಿಂಗ್ ಕಾರ್ಯ ನಡೆಯಲಿದೆ. ಬುಧವಾರ ಮತದಾನವಾದ ಬಳಿಕ ಮತಯಂತ್ರಗಳು ಮತ್ತು ದಾಖಲೆಗಳನ್ನು ಮತ ಎಣಿಕೆ ಕೇಂದ್ರವಾದ ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಇಡಲಾಗುತ್ತದೆ. ಇಲ್ಲಿಯೇ ಮತ ಎಣಿಕೆ ಪ್ರಕ್ರಿಯೆ ಮೇ 13ರ ಶನಿವಾರ ನಡೆಯಲಿದೆ.
ಮನೆಯಿಂದಲೇ ಮತದಾನ; ಕೇಂದ್ರ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ 80 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರು ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ನೀಡಿತ್ತು. ಏಪ್ರಿಲ್ 29ರಿಂದ ಮೇ 6ರ ತನಕ ಈ ಪ್ರಕ್ರಿಯೆ ನಡೆದಿದೆ. ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಲ್ಪಟ್ಟ ಒಟ್ಟು 2374 ಮತದಾರರ ಪೈಕಿ ಮೂಲಕ 2237 ಜನರು ಮತದಾನ ಮಾಡಿದ್ದಾರೆ.
ಸ್ವೀಪ್ ಎಕ್ಸ್ಪ್ರೆಸ್ ಬಸ್ ಸಂಚಾರ; ಶಿವಮೊಗ್ಗ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮಕ್ಕಾಗಿ 'ಸ್ವೀಪ್ ಎಕ್ಸ್ಪ್ರೆಸ್ ಬಸ್' ಸೇವೆ ಆರಂಭಿಸಲಾಗಿದೆ. ಜನರಲ್ಲಿ ಇವಿಎಂ/ ವಿವಿಪ್ಯಾಟ್ ಸೇರಿದಂತೆ ಮತದಾನ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸುವುದು ಹಾಗೂ ಮತದಾನ ಪ್ರಮಾಣ ಹೆಚ್ಚಿಸುವುದು ಬಸ್ ಸಂಚಾರದ ಉದ್ದೇಶವಾಗಿದೆ.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಈ ಹಿಂದೆ ಉತ್ತಮವಾಗಿ ಮತದಾನ ಆಗಿತ್ತು. ಆದರೆ ನಗರ ಪ್ರದೇಶದಲ್ಲಿ ಕಡಿಮೆ ಮತದಾನ ಆಗಿದ್ದು, ಕಳೆದ ಬಾರಿಗಿಂತ ಶೇ 10ರಷ್ಟಾದರೂ ಮತದಾನ ಪ್ರಮಾಣ ಹೆಚ್ಚಬೇಕು ಎಂದು ಜಿಲ್ಲಾಡಳಿತ ಈ ಬಸ್ ಸಂಚಾರ ಆರಂಭಿಸಿದೆ. ಮಂಗಳವಾರ ಸಂಜೆಯ ತನಕ ಈ ಬಸ್ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಂಚಾರ ನಡೆಸಿ ಮತದಾನದ ಜಾಗೃತಿ ಮೂಡಿಸಲಿದೆ.












Click it and Unblock the Notifications