ಶಿವಮೊಗ್ಗ: ಮಂಗನ ಕಾಯಿಲೆ ಕುರಿತು ಐಸಿಎಂಆರ್ ಸಮೀಕ್ಷೆ
ಶಿವಮೊಗ್ಗ, ಏಪ್ರಿಲ್ 20: ಶಿವಮೊಗ್ಗ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಮಂಗನ ಕಾಯಿಲೆ ಆತಂಕ ಶುರುವಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಇಷ್ಟೊಂದು ಸಂಶೋಧನೆಗಳು ನಡೆದರೂ ಸಹ ಕ್ಯಾಸನೂರು ಫಾರೆಸ್ಟ್ ಡಿಸೀಜ್ (ಕೆಎಫ್ಡಿ) ಅಥವ ಮಂಗನ ಕಾಯಿಲೆ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಇದರಿಂದಾಗಿ ಹಲವಾರು ಜನರು ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ.
ಈಗ ಕ್ಯಾಸನೂರು ಫಾರೆಸ್ಟ್ ಡಿಸೀಜ್ (ಕೆಎಫ್ಡಿ) ಬಗ್ಗೆ ಐಸಿಎಂಆರ್ ಸಮೀಕ್ಷೆಯನ್ನು ನಡೆಸಲಿದೆ. ಕೆಎಫ್ಡಿ ರೋಗದ ಹರಡುವಿಕೆ ಪ್ರಮಾಣ ಅರ್ಥ ಮಾಡಿಕೊಂಡು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯು ಶಿವಮೊಗ್ಗ ಜಿಲ್ಲೆಯಲ್ಲಿ ಸೀರೋ ಸರ್ವೇ ನಡೆಸಿದೆ.

ಕೆಎಫ್ಡಿಯನ್ನು ಸಾಮಾನ್ಯವಾಗಿ ಮಂಗನ ಕಾಯಿಲೆ ಎಂದು ಕರೆಯಲಾಗುತ್ತದೆ. ಈ ರೋಗವು ಪಶ್ಚಿಮಘಟ್ಟದ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಈ ರೋಗವು ಕೇವಲ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಕಂಡುಬಂದಿದ್ದರೆ, ಈಗ ಇದು ಕರ್ನಾಟಕದ ಇತರ ಜಿಲ್ಲೆಗಳಲ್ಲಿಯೂ ಹಾಗೂ ಪಕ್ಕದ ರಾಜ್ಯಗಳಲ್ಲಿಯೂ ಹರಡಿದೆ.
ಈ ರೋಗದ ಹರಡುವಿಕೆ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಐಸಿಎಂಆರ್ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ವಿಭಾಗವು ಪಶ್ಚಿಮ ಘಟ್ಟದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳ ಹಾಗೂ ವಯಸ್ಕರಲ್ಲಿ ಕೆಎಫ್ಡಿ ಸೀರೋ ಸರ್ವೇ (ರಕ್ತಸಾರ ಸಮೀಕ್ಷೆ) ನಡೆಸುತ್ತಿದೆ. ಈ ಸರ್ವೇಯನ್ನು ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ತಮಿಳುನಾಡು ಸೇರಿದಂತೆ 5 ರಾಜ್ಯಗಳಲ್ಲಿ ನಡೆಸಲಾಗುತ್ತದೆ.
ಕರ್ನಾಟಕದಲ್ಲಿ ಈ ಸಮೀಕ್ಷೆಯನ್ನು ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ವೈದ್ಯಕೀಯ ವಿಭಾಗ ಹಾಗೂ ರಾಜ್ಯ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಅಧ್ಯಯನಕ್ಕಾಗಿ ಕರ್ನಾಟಕದ ಎಂಟು ಜಿಲ್ಲೆಗಳ 51 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಇವುಗಳಲ್ಲಿ ಹಿಂದೆ ಕೆಎಫ್ಡಿ ಪ್ರಕರಣಗಳು ಕಂಡುಬಂದ 20 ಗ್ರಾಮಗಳನ್ನು ವಿಶೇಷವಾಗಿ ಆಯ್ಕೆ ಮಾಡಲಾಗಿದೆ.
ಸಮೀಕ್ಷೆ ಯೋಜನೆಯಂತೆ, ಎನ್ಐಇ ಚೆನ್ನೈ ತಂಡ ಉತ್ತರ ಕನ್ನಡ ಜಿಲ್ಲೆಯ 10 ಗ್ರಾಮಗಳು, ಉಡುಪಿ ಜಿಲ್ಲೆಯ 6, ಶಿವಮೊಗ್ಗದ 7, ಕೊಡಗಿನ 8, ಹಾಸನದ 1, ದಕ್ಷಿಣ ಕನ್ನಡದ 14, ಚಿಕ್ಕಮಗಳೂರಿನ 4 ಹಾಗೂ ಬೆಳಗಾವಿಯ 1 ಗ್ರಾಮಗಳಲ್ಲಿ ಸಿರೋ ಸರ್ವೇ ನಡೆಸಲಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಮಾರ್ಚ್ 22 ರಿಂದ ಏಪ್ರಿಲ್ 15 ರ ತನಕ ಈ ಸಮೀಕ್ಷೆಯನ್ನು ನಡೆಸಲಾಗಿದೆ.
ಪ್ರತಿ ಗ್ರಾಮದಲ್ಲಿ 6 ರಿಂದ 18 ವರ್ಷದೊಳಗಿನ 14 ಮಕ್ಕಳಿಂದ ಹಾಗೂ 18 ರಿಂದ 50 ವರ್ಷದೊಳಗಿನ 22 ಜನ ವಯಸ್ಕರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಈ 36 ಜನರನ್ನು ಸದರಿ ಗ್ರಾಮಗಳಲ್ಲಿ ರ್ಯಾಂಡಮ್ ಆಗಿ ಆಯ್ಕೆ ಮಾಡಲಾಗುತ್ತದೆ. ಸಂಗ್ರಹಿಸಿದ ರಕ್ತದ ಮಾದರಿಗಳನ್ನು ನಿಯಮಿತವಾಗಿ ಪುಣೆಯ ಐಸಿಎಮ್ಆರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರೋಲಾಜಿಗೆ ಕಳುಹಿಸಿ, ಕೆಎಫ್ಡಿ ವೈರಸ್ ವಿರೋಧಿ ಪ್ರತಿಕಾಯಗಳನ್ನು ಪರೀಕ್ಷಿಸಲಾಗುತ್ತದೆ.
ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳು ಹಾಗೂ ವಯಸ್ಕರ ಪೈಕಿ ಎಷ್ಟು ಮಂದಿ ಈಗಾಗಲೇ ಕೆಎಫ್ಡಿ ಸೋಂಕು ಹೊಂದಿದ್ದಾರೆ ಮತ್ತು ಎಷ್ಟು ಮಂದಿ ಈ ಸೋಂಕಿಗೆ ಅತಿ ಸಂಭಾವ್ಯರಾಗಿ ಉಳಿದಿದ್ದಾರೆ ಎಂಬುದನ್ನು ತಿಳಿಯುವುದಕ್ಕಾಗಿ ಐಸಿಎಂಆರ್-ಎನ್ಐಇ ಈ ಸಂಶೋಧನೆ ನಡೆಸುತ್ತಿದೆ.
ಈ ಸೀರೋ ಸರ್ವೇ ಮೂಲಕ ವೈರಸ್ ಹೆಚ್ಚು ಹರಡಿರುವ ಭೌಗೋಳಿಕ ಪ್ರದೇಶಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಹಾಗೂ ವೈರಸ್ನ ಸಂಚಾರ ನಡೆಯುತ್ತಿರುವ ಪ್ರದೇಶಗಳ ಪತ್ತೆಯೂ ಸಾಧ್ಯವಾಗುತ್ತದೆ. ಹೆಚ್ಚಿನ ಅಪಾಯವಿರುವ ಜಿಲ್ಲೆಗಳಲ್ಲಿ ಮತ್ತು ವಯೋವರ್ಗಗಳಲ್ಲಿ ಲಸಿಕಾಕರಣವನ್ನು ಆದ್ಯತೆಯಾಗಿಸಲು ಈ ಮಾಹಿತಿಯು ಸಹಾಯ ಮಾಡುತ್ತದೆ. ಜೊತೆಗೆ, ಈ ಅಧ್ಯಯನದಿಂದ ದೊರೆಯುವ ಸಾಕ್ಷ್ಯಾಧಾರಗಳು ರೋಗದ ನಿಗಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಹಕರಿಸುತ್ತದೆ ಹಾಗೂ ಇದರಿಂದ ಪ್ರಭಾವಿತ ಪ್ರದೇಶಗಳಲ್ಲಿ ರೋಗವನ್ನು ಬೇಗನೆ ಪತ್ತೆ ಹಚ್ಚುವುದು ಸುಲಭವಾಗುತ್ತದೆ.
ಇತ್ತೀಚೆಗೆ ಈ ಸಮೀಕ್ಷೆಯ ಕುರಿತಂತೆ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ , ಐಸಿಎಂಆರ್ ನಿರ್ದೇಶಕ ಡಾ. ಮನೋಜ್ ಮುರೇಕರ್ ಇವರ ನೇತೃತ್ವದಲ್ಲಿ ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯಾಗಾರವನ್ನು ನಡೆಸಲಾಯಿತು. ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ. ಬಾಲು ಪಿ ಎಸ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ, ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಡಾ. ಲತಾ ಆರ್ ತೆಲಂಗ್ ಮುಂತಾದವರು ಉಪಸ್ಥಿತರಿದ್ದರು.
-
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
ಗುಡ್ನ್ಯೂಸ್: ಬನ್ನೇರುಘಟ್ಟದಲ್ಲಿ 25 ಮೀಟರ್ ಎತ್ತರದ ವೀಕ್ಷಣಾ ಟವರ್ ನಿರ್ಮಾಣಕ್ಕೆ ಒಪ್ಪಂದ -
ನಾವು ಸೇವಿಸುವ ಈ ಆಹಾರಗಳಲ್ಲಿ ಆಲ್ಕೋಹಾಲ್ ಇರುತ್ತದೆ.. ಇದು ನಿಮಗೆ ಗೊತ್ತಿರಲಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications