ಹೋರಿ ಬೆದರಿಸುವ ಸ್ಪರ್ಧೆಗೆ ಶಿವಮೊಗ್ಗ ಜಿಲ್ಲಾಡಳಿತ ಬ್ರೇಕ್
ಶಿವಮೊಗ್ಗ, ಜನವರಿ. 04 : ಕೆಟ್ಟ ಮೇಲೆ ಮೇಲೆ ಬುದ್ದಿ ಬಂತು ಎನ್ನುವಂತೆ. ಇಬ್ಬರು ಸಾವನ್ನಪ್ಪಿದ ಮೇಲೆ ಶಿವಮೊಗ್ಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.
ಹೌದು. ಮೊನ್ನೆ ಸೋಮವಾರ(ಜನವರಿ 02) ಅಷ್ಟೇ ಸೊರಬ ತಾಲೂಕಿನ ತಲ್ಲೂರಿನಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಇಬ್ಬರು ಸಾವನ್ನಪ್ಪಿರುವ ಘಟನೆ ಜರುಗಿತ್ತು. ಇದರಿಂದ ಎಚ್ಚೆತ್ತ ಶಿವಮೊಗ್ಗ ಜಿಲ್ಲಾಡಳಿತ ಈ ಹೋರಿ ಬೆದರಿಸುವ ಸ್ಪರ್ಧೆಯನ್ನು ನಡೆಸದಂತೆ ಮಂಗಳವಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಎಂ.ಲೋಕೇಶ್ ಪ್ರತಿಕ್ರಿಯಿಸಿ ನ್ಯಾಯಾಲಯದ ತೀರ್ಪಿನ ಪ್ರಕಾರ ಕಂಬಳ, ಜಲ್ಲಿಕಟ್ಟು ಸೇರಿದಂತೆ ಪ್ರಾಣಿ ಹಿಂಸೆ ಸ್ಪರ್ಧೆಗಳನ್ನು ನಡೆಸುವಂತಿಲ್ಲ. ಅದರ ನಿಯಮಗಳ ಪ್ರಕಾರ ಈ ಹೋರಿ ಸ್ಪರ್ಧೆಯನ್ನು ಸಹ ನಡೆಸಬಾರದು ಎಂದು ಆದೇಶ ಹೊರಡಿಸಿದ್ದಾರೆ.

ಸೋಮವಾರ(ಜನವರಿ 02)ದಂದು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ತಲ್ಲೂರಿನಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ, ಹೋರಿ ತಿವಿದು ಶಕುನವಳ್ಳಿಯ ಮನೋಜ್ (17) ಹೇಮಂತ (22) ಮೃತಪಟ್ಟಿದ್ದರು. ಇನ್ನು ಈ ಸ್ಪರ್ಧೆಯಲ್ಲಿ ಕೆಲವರು ಗಾಯಗೊಂಡಿದ್ದರು,
ಏಕಾಏಕಿ ಹೋರಿ ವೀಕ್ಷಕರೆಡೆಗೆ ನುಗ್ಗಿದಾಗ ನೂಕು ನುಗ್ಗಲು ಉಂಟಾಗಿದೆ. ಈ ಸಮಯದಲ್ಲಿ ಹೋರಿ ತಿವಿದು ಇಬ್ಬರು ಮೃತಪಟ್ಟಿದ್ದರು. ಕಾನೂನಿನ ಪ್ರಕಾರ ಹೋರಿ ಬೆದರಿಸುವ ಸ್ಪರ್ಧೆ, ಕಂಬಳ ಸೇರಿದಂತೆ ಪ್ರಾಣಿ ಹಿಂಸೆ ಸ್ಪರ್ಧೆಗಳನ್ನು ಆಯೋಜನೆ ಮಾಡುವಂತಿಲ್ಲ.
ಆದರೆ, ಸ್ಪರ್ಧೆ ಆಯೋಜನೆ ಮಾಡುವ ಕುರಿತು ಪೊಲೀಸರಿಗೆ ಯಾವುದೇ ಮಾಹಿತಿ, ಅನುಮತಿ ಪಡೆದಿರಲಿಲ್ಲ, ಈ ಬಗ್ಗೆ ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಷ್ಟೇಲ್ಲ ಆದ ಮೇಲೆ ಎಚ್ಚೆತ್ತಿರುವ ಜಿಲ್ಲಾಡಳಿ ಈ ಸ್ಪರ್ಧೆಯನ್ನು ಯಾವುದೇ ಕಾರಣಕ್ಕೂ ನಡೆಸದಂತೆ ಮಂಗಳವಾರ ಆದೇಶ ಹೊರಡಿಸಿದೆ.
ಆದರೆ, ಅಲ್ಲಿನ ಜನರು ಸಾಂಪ್ರದಾಯದಂತೆ ಮೊದಲಿನಿಂದ ನಡೆಸಿಕೊಂಡು ಬಂದಿದ್ದು. ಏಕಾಏಕಿ ರದ್ದು ಮಾಡಿದ್ದರಿಂದ ಮುಂದೆ ಅಲ್ಲಿನ ಜನರು ಏನ್ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications