ಶಿವಮೊಗ್ಗ ಬಿಜೆಪಿಯಲ್ಲಿಯೇ ಮೀಸಲಾತಿ ಪಟ್ಟಿ ವಿರುದ್ಧ ಅಸಮಾಧಾನ
ಶಿವಮೊಗ್ಗ, ಜುಲೈ 08; ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗಿದೆ. ಇದು ಸರ್ವ ಪಕ್ಷದ ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲೂ ಬಿಜೆಪಿಯೊಳಗೆ ಆಕಾಂಕ್ಷಿಗಳ ಆಕ್ರೋಶ ದುಪ್ಪಟ್ಟಾಗಿದೆ.
ಚುನಾವಣಾ ಆಯೋಗ ಕರಡು ಮೀಸಲಾತಿ ಪ್ರಕಟಿಸಿದೆ. ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನು ನೀಡಿದೆ. ಈ ನಡುವೆ ಹಲವು ಹಾಲಿ ಸದಸ್ಯರಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲದಂತಾಗಿದೆ. ಇದು ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಶಾಸಕರು ಕೂಡ ಮೀಸಲಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಚುನಾವಣಾ ಆಯೋಗ ಪ್ರಕಟಿಸಿರುವ ಮೀಸಲಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ.

'ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಮೀಸಲಾತಿ ಕರಡು ಅಧಿಸೂಚನೆ ಪ್ರಕಟವಾಗಿದ್ದು. ಮೇಲ್ನೋಟಕ್ಕೆ ಅವೈಜ್ಞಾನಿಕವಾಗಿ ಕಂಡುಬರುತ್ತಿದೆ. ಶಿವಮೊಗ್ಗ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅರಬಿಳಚಿ ಮತ ಕ್ಷೇತ್ರದಲ್ಲಿ 3773 ಎಸ್.ಟಿ ಮತದಾರರು ಇದ್ದಾರೆ. ಇಲ್ಲಿಗೆ ನೀಡಬೇಕಾದ ಮೀಸಲಾತಿಯನ್ನು 1421 ಎಸ್.ಟಿ. ಮತದಾರರಿರುವ ಕುದುರೂರು ಮತ ಕ್ಷೇತ್ರಕ್ಕೆ ನೀಡಲಾಗಿದೆ. ಇದರಲ್ಲಿ ಕಾಣದ ಕೈಗಳು ಕೈಯಾಡಿಸಿರುವ ಹಾಗಿದೆ. ಈ ಅವೈಜ್ಞಾನಿಕ ಮೀಸಲಾತಿ ಬಗ್ಗೆ ಚುನಾವಣಾ ಆಯುಕ್ತರನ್ನು ಭೇಟಿಯಾಗಿ ಚರ್ಚಿಸಲಾಗುವುದು' ಎಂದು ಬರೆದುಕೊಂಡಿದ್ದಾರೆ.
ಶಾಸಕರ ವಿರುದ್ಧವೇ ಗುಡುಗು; ಮತ್ತೊಂದೆಡೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರ್, "ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಅನ್ಯಾಯವಾದರೆ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಅವರೆ ಹೊಣೆ" ಎಂದು ಆರೋಪಿಸಿದ್ದಾರೆ. ಹಿಂದುಳಿದ ವರ್ಗದ ನಾಯಕರ ಒಕ್ಕೂಟ ಶಾಸಕ ಅಶೋಕ್ ನಾಯ್ಕ್ ವಿರುದ್ಧ ಮುನಿಸು ವ್ಯಕ್ತಪಡಿಸಿದೆ.

ಸಿಟ್ಟು ವ್ಯಕ್ತಪಡಿಸಲು ನಾನೇ ಸಿಗುವುದು; ಈ ನಡುವೆ ಹಿಂದುಳಿದ ವರ್ಗದ ನಾಯಕರು ಆಕ್ರೋಶದ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಅಶೋಕ್ ನಾಯ್ಕ್, "ನಾನು ಎಲ್ಲರ ಕೈಗೂ ಸಿಗುತ್ತೇನೆ. ಅದಕ್ಕಾಗಿ ನನ್ನ ವಿರುದ್ಧ ಎಲ್ಲರೂ ಆಕ್ರೋಶಗೊಂಡಿದ್ದಾರೆ. ನಾನು ಮೇಲಿನವರೊಂದಿಗೆ ಗಟ್ಟಿಯಾಗಿ ಮಾತನಾಡಲಿ ಅನ್ನುವುದು ಅವರ ಉದ್ದೇಶವಾಗಿದೆ. ನಾನು ಕೂಡ ಮುಖಂಡರ ಜೊತೆಗೆ ಚರ್ಚಿಸಿದ್ದೇನೆ" ಎಂದು ಹೇಳಿದರು.
ಮೀಸಲಾತಿ ಕರಡು ಪಟ್ಟಿ ಪ್ರಕಟವಾದ ಬಳಿಕ ಸಿಎಂ ತವರು ಜಿಲ್ಲೆಯ ಬಿಜೆಪಿಯೊಳಗೆ ಆಕ್ರೋಶ ಭುಗಿಲೆದ್ದಿದೆ. ತಮ್ಮ ಕ್ಷೇತ್ರದಲ್ಲಿ ಮೀಸಲಾತಿ ಬದಲಾವಣೆಗೆ ಕಸರತ್ತು ನಡೆಸುತ್ತಿದ್ದಾರೆ. ಒಂದು ವೇಳೆ ಅಂತಿಮ ಪಟ್ಟಿಯಲ್ಲಿ ಮೀಸಲಾತಿ ಬದಲಾವಣೆಯಾಗದಿದ್ದರೆ ಬಿಜೆಪಿಯೊಳಗೆ ಆಕಾಂಕ್ಷಿಗಳ ಆಕ್ರೋಶ ಬಹಿರಂಗವಾಗಿ ಸ್ಫೋಟಗೊಳ್ಳುವ ಆತಂಕವಿದೆ.












Click it and Unblock the Notifications