ಕೊರೊನಾ ತಡೆಗೆ ಭದ್ರಾವತಿ ಭಾಗದ ಗ್ರಾಮಗಳು ತೆಗೆದುಕೊಂಡ ಕ್ರಮ
ಶಿವಮೊಗ್ಗ, ಮಾರ್ಚ್ 26: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕೆಲವು ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ. ದಿನದಿಂದ ದಿನಕ್ಕೆ ಇಲ್ಲಿನ ಜನರು ಸಹ ಕೊರೊನಾ ಬಗ್ಗೆ ಜಾಗೃತವಾಗುತ್ತಿದ್ದಾರೆ.
ಮಂಗೋಟೆ, ಅರಸನಘಟ್ಟ, ಮಲ್ಲಾಪುರ, ನಿಂಬೆಗುಂದಿ, ಆನವೇರಿ, ಇಟ್ಟಿಗೆಹಳ್ಳಿ ಇನ್ನು ಮುಂತಾದ ಗ್ರಾಮಗಳಲ್ಲಿ ಬೇರೆ ಭಾಗದಿಂದ ಬರುವ ಜನರಿಗೆ ನಿರ್ಬಂಧ ಏರಲಾಗಿದೆ. ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನು ಇಡಾಗಿದೆ. ಬೇರೆ ಊರಿನಿಂದ ಯಾರೂ ಪ್ರವೇಶ ಮಾಡದೆ ಇರುವ ಹಾಗೆ ನೋಡಿಕೊಳ್ಳಲಾಗುತ್ತಿದೆ.
ಗ್ರಾಮಸ್ಥರ ಸಂಬಂಧಿಗಳು, ಸ್ನೇಹಿತರು ಯಾರೂ ಸಹ ಊರಿಗೆ ಬರದೆ ಇರುವಂತೆ ಸೂಚನೆ ನೀಡಲಾಗಿದೆ. ಹಬ್ಬ, ಊರಿನ ಆಚರಣೆಗಳು, ದೇವಸ್ಥಾನಗಳ ಭೇಟಿ ಹೀಗೆ ಎಲ್ಲದರ ಮೇಲೆ ನಿಷೇಧ ತಂದಿದ್ದಾರೆ.

ಈ ಭಾಗದಿಂದ ಬೆಂಗಳೂರಿಗೆ ಹೋಗಿ ಕೆಲಸ ಮಾಡುವ ಯುವಕ ಯುವತಿಯರು ಹೆಚ್ಚಿದ್ದಾರೆ. ಹಾಗಾಗಿ, ಬೆಂಗಳೂರಿನಿಂದ ಬಂದವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಆರೋಗ್ಯ ಇಲಾಖೆಯ ವತಿಯಿಂದ ಪ್ರತಿ ಮನೆಗೂ ಭೇಟಿ ನೀಡಿ ಅವರ ವಿವರಗಳನ್ನು ಸಂಗ್ರಹಿಸಲಾಗಿದೆ.
ಹೋಬಳಿ ಕೇಂದ್ರದಲ್ಲಿ ಇನ್ನು ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅನಗತ್ಯವಾಗಿ ರಸ್ತೆಗೆ ಬಂದರೆ ಪೊಲೀಸರು ಲಾಠಿ ಏಟು ನೀಡುತ್ತಿದ್ದಾರೆ. ಅಂಗಡಿಗಳು ಬಂದ್ ಆಗಿವೆ.












Click it and Unblock the Notifications