ಬರಿದಾದ ಕೆರೆ, ಕಾಲುವೆ, ಜಲಾಶಯದ ಒಡಲು: ಕುಡಿಯುವ ನೀರಿಗಾಗಿ ಹೆಚ್ಚಿದ ಹಾಹಾಕಾರ
ರಾಯಚೂರು, ಜೂನ್ 15: ಮಳೆಗಾಲ ಪ್ರಾರಂಭವಾಗಿ 15 ದಿನಗಳು ಕಳೆದರೂ ಮಳೆಯಾಗದ ಕಾರಣ ರಾಯಚೂರು ನಗರದ ಜನತೆ ಕುಡಿವ ನೀರಿಗೆ ಪರಿತಪಿಸುವಚಿತಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಯಿಂದ ಪ್ರತಿ ವರ್ಷ ಬೇಸಿಗೆಯಲ್ಲಿ ರಾಂಪುರ ಕೆರೆ ತುಂಬಿಸಲಾಗುತ್ತಿತ್ತು. ಆದರೆ ಈ ಬಾರಿ ವರುಣ ಮುನಿಸಿಕೊಂಡ ಪರಿಣಾಮ ತುಂಗಭದ್ರ ಜಲಾಶಯದ ಒಡಲು ಬರಿದಾಗಿದೆ.
ತುಂಗಭದ್ರಾ ಎಡದಂಡೆ ನಾಲೆಯಿಂದ ದೇವದುರ್ಗ ತಾಲೂಕಿನ ಗಣೇಕಲ್ ಜಲಾಶಯಕ್ಕೆ ನೀರು ಭರ್ತಿ ಮಾಡಲಾಗುತ್ತಿತ್ತು. ಅಲ್ಲಿಂದ ರಾಂಪುರದ ಕೆರೆ ತುಂಬಿಸಲಾಗುತ್ತಿತ್ತು. ಆದರೆ ತುಂಗಭದ್ರಾ ಜಲಾಶಯವೇ ಬರಿದಾದ ಹಿನ್ನೆಲೆಯಲ್ಲಿ ಗಣೇಕಲ್ ಜಲಾಶಯವೂ ಬರಿದಾಗಿದೆ.

ಒಂದು ವೇಳೆ ತುಂಗಭದ್ರಾ ಜಲಾಶಯದಿಂದ ನೀರು ಹರಿಸಿದರೂ ಅಕ್ರಮ ಪಂಪ್ ಸೆಟ್ ಮೂಲಕ ನೀರು ಕಳ್ಳತನ ಮಾಡುವವರಿಂದ ನೀರು ಗಣೇಕಲ್ ಜಲಾಶಯ ತಲುಪುವುದು ಅನುಮಾನ ಎಂಬ ಮಾತು ಕೇಳಿ ಬಂದಿವೆ. ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡಗಳಿವೆ. ಈ ಪೈಕಿ 10ಕ್ಕೂ ಹೆಚ್ಚು ವಾರ್ಡಗಳಿಗೆ ರಾಂಪುರ ಕೆರೆಯಿಂದ ಹಾಗೂ ಇನ್ನಿತರೆ ವಾರ್ಡಗಳಿಗೆ ಕೃಷ್ಣಾ ನದಿಯಿಂದ ನೀರು ಪೂರೈಕೆ ಮಾಡಲಾಗುತ್ತದೆ.
ತುಂಗಭದ್ರಾ ಜಲಾಶಯದಿಂದ ರಾಂಪುರ ಕೆರೆಗೆ ನೀರು ಹರಿಸಿ ಕೆಲ ದಿನ ನೀರು ಪೂರೈಕೆ ಮಾಡಲಾಗಿದೆ. ಆದರೆ ಪ್ರಸ್ತುತ ಜಲಾಶಯ ಹಾಗೂ ಕೆರೆಯ ಒಡೆಲು ಬರಿದಾಗಿರುವ ಕಾರಣ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದೆ. ರಾಂಪುರ ಕೆರೆ 4.5ಮೀಟರ್ ನೀರು ಶೇಖರಣೆ ಸಾಮರ್ಥ್ಯ ಹೊಂದಿದೆ. ಕಳೆದ ಹತ್ತು ದಿನಗಳಿಂದ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ರಾಂಪುರ ಕೆರೆಯಿಂದ ನೀರು ಪೂರೈಕೆಯಾಗುವ ಬಡಾವಣೆಗಳಲ್ಲಿ ಸಮಸ್ಯೆ ಉಲ್ಬಣಿಸಿದೆ. ಇನ್ನೊಂದೆಡೆ ನೂತನವಾಗಿ ನಿರ್ಮಾಣಗೊಂಡಿರುವ ಬಡಾವಣೆಗಳಿಗೆ ನೀರಿನ ಸಂಪರ್ಕ ಒದಗಿಸದ ಕಾರಣ ಅಲ್ಲಿಯ ನಿವಾಸಿಗಳು ಕೂಡ ನೀರಿಗಾಗಿ ಪರದಾಡುವಂತಾಗಿದೆ.
ನಗರದ ಜನತೆಗೆ ಕುಡಿವ ನೀರು ಪೂರೈಕೆ ಮಾಡುವ ರಾಂಪುರ ಕೆರೆಯಲ್ಲಿ ನೀರು ಖಾಲಿಯಾಗಿದೆ. ಹೀಗಾಗಿ ನೀರನ್ನು ಮಿತವಾಗಿ ಬಳಸುವಂತೆ ಸೂಚಿಸಲಾಗಿದೆ. ಕೃಷ್ಣ ನದಿಯಿಂದ ಕೆಲ ಬಡಾವಣೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ತುಂಗಭದ್ರಾ ಜಲಾಶಯದಿಂದ ಗಣೇಕಲ್ ಕೆರೆಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ರಾಯಚೂರು ನಗರಸಭೆ ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ ಹೇಳಿದ್ದಾರೆ.
ಒಂದು ವೇಳೆ ಜಿಲ್ಲೆಯಲ್ಲಿ ಬರುವ 10 ದಿನಗಳಲ್ಲಿ ಮಳೆ ಬಾರದಿದ್ದರೆ, 65 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಲನಗುಡ್ಡ, ಲಿಂಗಸುಗೂರು ತಾಲೂಕಿನ ಯರಗುಂಟಿ ಗ್ರಾಮಕ್ಕೆ ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ತುಂಗಾ ಭದ್ರಾ ಜಲಾಶಯವು 101 ಟಿಎಂಸಿ ನೀರು ಶೇಖರಣಾ ಸಾಮರ್ಥ್ಯ ಹೊಂದಿದ್ದರೂ, ಸದ್ಯ ಅದರಲ್ಲಿ ಕೇವಲ 5 ಟಿಎಂಸಿ ನೀರು ಲಭ್ಯವಿದೆ. ರಾಯಚೂರು ಜಿಲ್ಲೆಯ ಮೂರು ತಾಲೂಕಿಗೆ ಇದೇ ಜಲಾಶಯದಿಂದ ನೀರು ಪೂರೈಕೆಯಾಗುತ್ತಿದೆ.
ಜೂನ್ ಮೊದಲ ವಾರದಲ್ಲೇ ಮಳೆ ಶುರುವಾಗಿದ್ದರೆ ನೀರಿನ ಕೊರತೆಯಾಗುತ್ತಿರಲಿಲ್ಲ. ಆದರೆ, ಮಳೆ ಬರುವುದು ವಿಳಂಬವಾಗಿರುವ ಕಾರಣ ಕೆಲ ಕಡೆಗಳಲ್ಲಿ ಕೆರೆಗಳು ಬತ್ತಿವೆ. ಜಿಲ್ಲಾಡಳಿತ ಬೋರ್ವೆಲ್ ಮೂಲಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುತ್ತಿದೆ.
ರಾಯಚೂರಿನ ರಾಂಪುರ ಕೆರೆಯಲ್ಲಿ 10 ದಿನಗಳಿಗೆ ಬೇಕಾಗುವಷ್ಟು ನೀರು ಲಭ್ಯ ಇದೆ. ರಾಯಚೂರು ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಈಗ ₹ 1 ಟಿಎಂಸಿ ನೀರು ಅಗತ್ಯವಿದೆ. ತುಂಗಭದ್ರಾ ಜಲಾಶಯದಿಂದ ಎರಡು ದಿನಗಳಲ್ಲಿ ನೀರು ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 33 ಬಹುಗ್ರಾಮ ಯೋಜನೆಯಡಿ 150 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ನೀರಿಗೆ ಬರ ಬಂದಿಲ್ಲ. ಆದರೆ ಜಲಮೂಲಗಳಲ್ಲಿ ನೀರಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಈಗಾಗಲೇ ಕುಡಿಯಲು ಯೋಗ್ಯವಾಗಿರುವ ಖಾಸಗಿ ಬೋರ್ವೆಲ್ಗಳನ್ನು ಗುರುತಿಸಲಾಗಿದೆ. ಅಗತ್ಯ ಬಿದ್ದರೆ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆದು ಜನರಿಗೆ ನೀರು ಪೂರೈಕೆ ಮಾಡಲಾಗುವುದು ಎಂದರು.












Click it and Unblock the Notifications