ಅಡುಗೆ ಸಿಬ್ಬಂದಿ, ಅಂಗರಕ್ಷಕರು ಮೋದಿ ಜೊತೆ ದೆಹಲಿಗೆ
ನವದೆಹಲಿ, ಮೇ 23 : ಸೋಮವಾರ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ನರೇಂದ್ರ ಮೋದಿ ಗುರುವಾರ ರಾತ್ರಿ ದೆಹಲಿಗೆ ಬಂದಿದ್ದಾರೆ. ಗುಜರಾತ್ ತೊರೆದು ಬರುವಾಗ ಮೋದಿ ತಮ್ಮ ಖಾಸಾ ಅಡುಗೆ ಸಿಬ್ಬಂದಿ ಮತ್ತು ಅಂಗರಕ್ಷಕರನ್ನು ತಮ್ಮೊಂದಿಗೆ ಕರೆದುಕೊಂಡು ಬಂದಿದ್ದಾರೆ.
ಗುರುವಾರ ಸಂಜೆ ತಾಯಿ ಹೀರಾಬೆನ್ ಬಳಿ ತೆರಳಿದ ನರೇಂದ್ರ ಮೋದಿ ಅವರ ಆಶೀರ್ವಾದ ಪಡೆದು ದೆಹಲಿ ವಿಮಾನವೇರಿದರು. ತಮ್ಮ ಜೊತೆ ವರ್ಷಗಳಿಂದ ಕೆಲಸ ಮಾಡುತ್ತಿರುವ ಖಾಸಾ ಅಡುಗೆ ಸಿಬ್ಬಂದಿ ಮತ್ತು ಅಂಗರಕ್ಷಕರನ್ನು ಮೋದಿ ಜೊತೆಗೆ ಕರೆದುಕೊಂಡು ಬಂದಿದ್ದಾರೆ. [ಮೋದಿಗೆ ತಾಯಿಯ ಆಶೀರ್ವಾದ]

ಬದ್ರಿ ಎನ್ನುವವರು ನರೇಂದ್ರ ಮೋದಿ ಅವರ ಅಡುಗೆಯವರಾಗಿದ್ದು ಸುಮಾರು 10 ವರ್ಷಗಳಿಂದ ಮೋದಿ ಅವರ ಜೊತೆಗಿದ್ದಾರೆ. ಅಂಗರಕ್ಷಕರಾದ ದಿನೇಶ್ ಠಾಕೂರ್ ಮತ್ತು ಒ.ಪಿ.ಸಿಂಗ್ ಸಹ ಮೋದಿಯೊಂದಿಗೆ ದೆಹಲಿಗೆ ಬಂದಿದ್ದಾರೆ. ಇವರು ಸಹ ದಶಕಗಳ ಕಾಲದಿಂದ ಮೋದಿ ಅಂಗರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
ಮೋದಿ ಪಕ್ಕಾ ಸಸ್ಯಹಾರಿ : ನರೇಂದ್ರ ಮೋದಿ ಅವರು ಎಲ್ಲಿಯೇ ಪ್ರವಾಸ ಕೈಗೊಳ್ಳಲಿ ಅವರ ಊಟದ ಮೆನುವಿನಲ್ಲಿ ಗುಜರಾತಿ ಖಾದ್ಯಗಳಿರುತ್ತವೆ. ಪಕ್ಕಾ ಸಸ್ಯಹಾರಿಯಾಗಿರುವ ಮೋದಿ ಅವರಿಗೆ ಗುಜರಾತಿ ಖಾದ್ಯಗಳೆಂದರೆ ಅಚ್ಚುಮೆಚ್ಚು. ಆದ್ದರಿಂದ ತಮ್ಮ ಅಡುಗೆಯವರನ್ನು ಮೋದಿ ದೆಹಲಿಗೆ ಕರೆತಂದಿದ್ದಾರೆ.
ನರೇಂದ್ರ ಮೋದಿ ಅವರ ನೆಚ್ಚಿನ ಮೆನುವಿನಲ್ಲಿ ಖಿಚ್ಡಿ, ಢೋಕ್ಲಾ, ಖಾಂಡ್ವಿ, ಮ್ಯಾಂಗೋ ಚಟ್ನಿ, ಬಾದಾಮಿ ಮತ್ತು ಪಿಸ್ತಾ ಶ್ರೀಖಂಡಗಳು ಸೇರಿವೆ. ಲೋಕಸಭೆ ಚುನಾವಣೆ ಪ್ರಚಾರದ ಸಮಯದಲ್ಲೂ ಮೋದಿ ಯಾವುದೇ ರಾಜ್ಯದ ಪ್ರವಾಸ ಕೈಗೊಂಡರೂ ಗುಜರಾತಿ ಖಾದ್ಯಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು.
ನರೇಂದ್ರ ಮೋದಿ ಅವರ ಆಹಾರ ತಯಾರಿಸುವ ಸಿಬ್ಬಂದಿ ಸಹ ಮೋದಿ ಅವರ ಆಹಾರದ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುತ್ತದೆ. ಆದ್ದರಿಂದ 63 ವರ್ಷದ ಮೋದಿ ತಮ್ಮ ಜೊತೆಗೆ ಅಡುಗೆಯವರನ್ನು ದೆಹಲಿಗೆ ಕರೆದುಕೊಂಡು ಬಂದಿದ್ದಾರೆ.












Click it and Unblock the Notifications