ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಉಗ್ರದಾಳಿಗೆ ಸಂಚು: ಗುಪ್ತಚರ ಮಾಹಿತಿ
ನವದೆಹಲಿ, ಆಗಸ್ಟ್ 28: ಪಾಕಿಸ್ತಾನ ಮೂಲದ ಲಷ್ಕರ್ ಇ ತಾಯಿಬಾ ಉಗ್ರ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ಉತ್ತರಪ್ರದೇಶದ ವಾರಣಾಸಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ವಾರಣಾಸಿಯಲ್ಲಿ ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಲು ಉಗ್ರರು ಹಲವು ತಿಂಗಳ ಹಿಂದೆಯೇ ಸಂಚು ರೂಪಿಸಿದ್ದು, ಈಗಾಗಲೇ ಹಲವು ಉಗ್ರರು ವಾರಣಾಸಿಯಲ್ಲಿ ಕೆಲ ತಿಂಗಳಿನಿಂದ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಮೇ ತಿಂಗಳಿನಲ್ಲಿ ವಾರಣಾಸಿಯಲ್ಲಿ ನಾಲ್ಕು ದಿನ ತಂಗಿದ್ದ ಉಮರ್ ಮದ್ನಿ ಎಂಬ ಉಗ್ರ ಯಾವ ಪ್ರದೇಶದಲ್ಲಿ ಉಗ್ರ ದಾಳಿ ಕೈಗೊಳಲ್ಲಬಹುದು ಎಂಬಿತ್ಯಾದಿ ಮಾಹಿತಿ ಕಲೆ ಹಾಕಿ, ದಾಳಿಯ ಸಂಚು ರೂಪಿಸಿದ್ದಾನೆ ಎನ್ನಲಾಗಿದೆ.

ಕೇವಲ ಉಗ್ರ ದಾಳಿ ನಡೆಸುವುದಷ್ಟೇ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಕ್ಷೇತ್ರದಲ್ಲೇ ಲಷ್ಕರ್ ಇ ತಾಯಿಬಾ ಸಂಘಟನೆಯನ್ನು ವಿಸ್ತರಿಸಿ, ಇಲ್ಲೇ ಉಗ್ರ ಚಟುವಟಿಕೆ ನಡೆಸುವ ಬಗ್ಗೆಯೂ ಸಂಚು ನಡೆದಿದೆ.
ಉಮರ್ ಮದ್ನಿ ಎಲ್ ಇಟಿ ಗೆ ಯುವಕರನ್ನು ನೇಮಿಸಿಕೊಳ್ಳುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ಹಲವು ಯುವಕರನ್ನು ಉಗ್ರ ಸಂಘಟನೆಗೆ ಸೇರಿಸಿಕೊಂಡಿದ್ದಾನೆ.
ಪ್ರಧಾನಿಯ ಕ್ಷೇತ್ರ ಎಂಬ ಕಾರಣಕ್ಕೆ ಸಾಕಷ್ಟು ಭದ್ರತೆ ಇರುತ್ತದೆ ಎಂಬುದು ಗೊತ್ತಿದ್ದರೂ ಬೇಕೆಂದೇ ಈ ಕ್ಷೇತ್ರದಲ್ಲೇ ದಾಳಿ ನಡೆಸುವ ಮತ್ತು ಉಗ್ರ ಚಟುವಟಿಕೆಗಳ ನೆಲೆಯನ್ನಾಗಿ ಮಾಡಿಕೊಳ್ಳುವ ತಂತ್ರ ಉಗ್ರರದ್ದು. ಕಳೆದ ಜೂನ್ ನಲ್ಲಿ ಉತ್ತರ ಪ್ರದೇಶದ ಫೈಜಾಬಾದ್ ಮತ್ತು ಗೋರ್ಖ್ಪುರ ಗಳಲ್ಲಿ ಉಗ್ರದಾಳಿ ನಡೆಸಲು ಸಂಚು ರೂಪಿಸಲಾಗಿತ್ತು. ಈ ಕುರಿತು ಗುಪ್ತಚರ ಇಲಾಖೆ ಗೃಹ ಸಚಸಿವಾಲಯಕ್ಕೆ ಮಾಹಿತಿ ನೀಡಿತ್ತು. ಕೂಡಲೆ ಕಟ್ಟೆಚ್ಚರ ವಹಿಸಿದ ಪರಿಣಾಮ ಯಾವುದೇ ರೀತಿಯ ದುರ್ಘಟನೆ ನಡೆದಿರಲಿಲ್ಲ.












Click it and Unblock the Notifications