ದೆಹಲಿಗೆ 24 ಗಂಟೆ ವಿದ್ಯುತ್, ಮೋದಿ ಭರವಸೆ
ನವದೆಹಲಿ, ಜ.10 : ಜನರೇಟರ್ ಮುಕ್ತ ದೆಹಲಿ ನಮ್ಮ ಕನಸು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಜನರಿಗೆ 24 ಗಂಟೆ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸುಭದ್ರ ಸರ್ಕಾರ ರಚನೆಯಾಗುವಂತೆ ಮತದಾನ ಮಾಡಿ ಎಂದು ಪ್ರಧಾನಿ ಜನರಿಗೆ ಕರೆ ನೀಡಿದ್ದಾರೆ.
ನವದೆಹಲಿಯಲ್ಲಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ರಾಮಲೀಲಾ ಮೈದಾನದಲ್ಲಿ ಬಿಜೆಪಿಯ ಬೃಹತ್ ಚುನಾವಣಾ ಸಮಾವೇಶ ನಡೆಯಿತು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮದು ಕುಟುಂಬ, ಜಾತಿವಾದದಿಂದ ಮುಕ್ತವಾದ ರಾಜಕಾರಣ ಎಂದು ಹೇಳಿದರು.

ದೆಹಲಿಯಲ್ಲಿ ಆಡಳಿತ ನಡೆಸಿದ ಹಿಂದಿನ ಸರ್ಕಾರಗಳು ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಿವೆ ಎಂದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ಧಾಳಿ ನಡೆಸಿದ ಮೋದಿ, ದೆಹಲಿಯ ವಿದ್ಯುತ್ ಮತ್ತು ನೀರಿನ ಸಮಸ್ಯೆಯನ್ನು ಹಿಂದಿನ ಸರ್ಕಾರ ಪರಿಹಾರ ಮಾಡಿಲ್ಲ ಎಂದು ಆರೋಪಿಸಿದರು. [ಭಾನುವಾರ ಬೆಂಗಳೂರಲ್ಲಿ ಕೇಜ್ರಿವಾಲ್ ಜೊತೆ ಭೋಜನ]
ದೆಹಲಿಯನ್ನು ಜನರೇಟರ್ ಮುಕ್ತವಾಗಿಸಿ 24 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದು ಭರವಸೆ ನೀಡಿದ ಪ್ರಧಾನಿ ಮೋದಿ, ದೆಹಲಿಯಲ್ಲಿ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ. ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ಹೇಳಿದರು.
ಕೆಲವರು ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ ಮೋದಿ, ದೆಹಲಿಯ ಭವಿಷ್ಯ ಹಾಳು ಮಾಡಿದರವರಿಗೆ ಶಿಕ್ಷೆ ನೀಡಿ ಎಂದು ಕರೆ ನೀಡಿದರು ಮತ್ತು ಚುನಾವಣೆಯಲ್ಲಿ ಸ್ಪಷ್ಟ ಬಹುವಂತ ಬರುವಂತೆ ಮತದಾನ ಮಾಡಿ ಎಂದರು.












Click it and Unblock the Notifications