Breaking: ಸಿಬಿಐ ಎಫ್ಐಆರ್ನಲ್ಲಿ ಮನೀಶ್ ಸಿಸೋಡಿಯಾ ಹೆಸರು ಮೊದಲು!
ನವದೆಹಲಿ, ಆಗಸ್ಟ್ 19: ದೆಹಲಿ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ದಾಖಲಿಸಿರುವ ಎಫ್ಐಆರ್ನಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೆಸರು ಹಾಕಲಾಗಿದೆ.
ಸಿಬಿಐನ ಎಫ್ಐಆರ್ನಲ್ಲಿ ಮನೀಶ್ ಸಿಸೋಡಿಯಾಗೆ ಹೊಸ ಮದ್ಯ ನೀತಿ ಅಕ್ರಮಗಳಿಗೂ ಸಂಬಂಧವಿದೆ ಎಂದು ಆರೋಪಿಸಲಾಗಿದೆ.
15 ಮಂದಿ ಆರೋಪಿಗಳ ಪಟ್ಟಿಯಲ್ಲಿ ಮನೀಶ್ ಸಿಸೋಡಿಯಾ ಅವರ ಹೆಸರು ಮೊದಲಿದೆ. ಅಬಕಾರಿ ಅಧಿಕಾರಿಗಳು, ಮದ್ಯದ ಕಂಪನಿ ಅಧಿಕಾರಿಗಳು, ಡೀಲರ್ಗಳು ಮತ್ತು ಅಪರಿಚಿತ ಸಾರ್ವಜನಿಕ ಸೇವಕರು ಮತ್ತು ಖಾಸಗಿ ವ್ಯಕ್ತಿಗಳ ಮೇಲೂ ಪ್ರಕರಣ ದಾಖಲಿಸಲಾಗಿದೆ.

11 ಪುಟಗಳ ಚಾರ್ಜ್ ಶೀಟ್ನಲ್ಲಿ ಸುಳ್ಳು ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳನ್ನು ಮಾಡಲಾಗಿದೆ. ಆರೋಪಿಗಳ ಪಟ್ಟಿಯಲ್ಲಿ ಅಂದಿನ ಅಬಕಾರಿ ಆಯುಕ್ತ ಅರ್ವ ಗೋಪಿ ಕೃಷ್ಣ ಸೇರಿದಂತೆ ಮೂವರು ಅಧಿಕಾರಿಗಳು ಸೇರಿದ್ದಾರೆ.
ಅಬಕಾರಿ ಸಚಿವರಾಗಿರುವ ಸಿಸೋಡಿಯಾ ಅವರು ದೆಹಲಿಯಲ್ಲಿ ಕೇಂದ್ರದ ಪ್ರತಿನಿಧಿಯಾಗಿರುವ ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿಯಿಲ್ಲದೆ ಯಾರು ಮದ್ಯವನ್ನು ಮಾರಾಟ ಮಾಡಬಹುದು ಎಂಬ ಹೊಸ ನೀತಿಯನ್ನು ಪರಿಚಯಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಹೊಸ ನೀತಿಯನ್ನು ನವೆಂಬರ್ನಲ್ಲಿ ಪರಿಚಯಿಸಲಾಯಿತು. ಈ ಬಗ್ಗೆ ತನಿಖೆಯನ್ನು ಘೋಷಿಸಿದ ನಂತರ ಜುಲೈ 30 ರಂದು ಹಿಂತೆಗೆದುಕೊಳ್ಳಲಾಯಿತು.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಪ್ರಭಾವಿ ನಾಯಕರಾಗಿರುವ ಮನೀಶ್ ಸಿಸೋಡಿಯಾ ಮೇಲೆ ಸಿಬಿಐ ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದೆ.
"ಅಮೆರಿಕದ ಪತ್ರಿಕೆಯಲ್ಲಿ ದೆಹಲಿಯ ಶಿಕ್ಷಣ ಮಾದರಿಯನ್ನು ಶ್ಲಾಘಿಸಿ, ಮೊದಲ ಪುಟದಲ್ಲಿ ಮನೀಶ್ ಸಿಸೋಡಿಯಾ ಫೋಟೋ ಬಂದ ದಿನದಂದೇ ಕೇಂದ್ರದಿಂದ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ" ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಸಿಬಿಐ ದಾಳಿ ಬೆನ್ನಲ್ಲೆ ಟ್ವೀಟ್ ಮಾಡಿದ್ದ ಅರವಿಂದ್ ಕೇಜ್ರಿವಾಲ್, ಕೇಂದ್ರ ಸರಕಾರವನ್ನು ಗುರಿಯಾಗಿಸಿ ಕೊಂಡು ವಾಗ್ದಾಳಿ ನಡೆಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ನಲ್ಲಿನ ಲೇಖನ ಮತ್ತು ತನಿಖಾ ಸಂಸ್ಥೆಯ ದಾಳಿಗೆ ಲಿಂಕ್ ಮಾಡಿದ್ದರು.
"ಅಮೆರಿಕದ ಅತಿದೊಡ್ಡ ಪತ್ರಿಕೆಯು ದೆಹಲಿಯ ಶಿಕ್ಷಣ ಮಾದರಿಯನ್ನು ಶ್ಲಾಘಿಸುವ ಲೇಖನದೊಂದಿಗೆ ಮೊದಲ ಪುಟದಲ್ಲಿಯೇ ಮನೀಶ್ ಸಿಸೋಡಿಯಾ ಅವರ ಫೋಟೋವನ್ನು ಹಾಕಿದೆ. ಅದೇ ದಿನ ಕೇಂದ್ರದಿಂದ ಸಿಬಿಐ ತಂಡಗಳನ್ನು ಅವರ ಮನೆಗೆ ಕಳುಹಿಸಲಾಗಿದೆ" ಎಂದು ಕೇಜ್ರಿವಾಲ್ ಟೀಕಿಸಿದ್ದರು.
''ಸಿಬಿಐ ಸ್ವಾಗತಾರ್ಹ. ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಈ ಹಿಂದೆಯೂ ಹುಡುಕಾಟ ನಡೆಸಲಾಗಿದ್ದು, ಏನೂ ಪತ್ತೆಯಾಗಿರಲಿಲ್ಲ. ಈ ಬಾರಿಯೂ ಅದೇ ಆಗಲಿದೆ" ಎಂದು ಮುಖ್ಯಮಂತ್ರಿ ಹೇಳಿದ್ದರು.
ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 21ಕ್ಕೂ ಹೆಚ್ಚು ಸ್ಥಳಗಳ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ಶುಕ್ರವಾರ ಬೆಳಗ್ಗೆ ದಾಳಿ ನಡೆಸಿ, ಶೋಧ ಕಾರ್ಯ ನಡೆಸಿದೆ.












Click it and Unblock the Notifications