ಮಾಯವಾಗಿದ್ದ ಮಾಯಾ ಎಂಪಿಯಲ್ಲಿ ಕಾಂಗ್ರೆಸ್ಸನ್ನು ಬೆಂಬಲಿಸ್ತಾರಂತೆ
Recommended Video

ನವದೆಹಲಿ, ಡಿಸೆಂಬರ್ 12 : ಮಧ್ಯ ಪ್ರದೇಶದಲ್ಲಿ ಚುನಾವಣೆ ಫಲಿತಾಂಶ ಅಂತಿಮ ಘಟ್ಟ ತಲುಪುತ್ತಿದ್ದಂತೆ ಡೋಲಾಯಮಾನ ಸ್ಥಿತಿ ಇದ್ದಾಗ, ಯಾರ ಸಂಪರ್ಕಕ್ಕೂ ಸಿಗದೆ ತಲೆಮರೆಸಿಕೊಂಡಿದ್ದ ಬಿಎಸ್ಪಿ ನಾಯಕಿ ಮಾಯಾವತಿ ಅವರು ಈಗ ಗೆದ್ದಿರುವ ಕಾಂಗ್ರೆಸ್ಸಿಗೆ ಬೆಂಬಲ ನೀಡುವ ಮಾತಾಡಿದ್ದಾರೆ.
"ನಾನು ಕಾಂಗ್ರೆಸ್ಸಿನ ಕೆಲ ಸಿದ್ಧಾಂತಗಳನ್ನು ವಿರೋಧಿಸುತ್ತೇನೆ. ಆದರೂ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ನೀಡಲು ಸಿದ್ಧಳಿದ್ದೇನೆ. ಅವಶ್ಯಕತೆ ಬಿದ್ದರೆ ರಾಜಸ್ಥಾನದಲ್ಲಿಯೂ ಕಾಂಗ್ರೆಸ್ಸಿಗೆ ಪಕ್ಷದ ಬೆಂಬಲವಿದೆ" ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿನ ಫಲಿತಾಂಶ ಏನು ತೋರಿಸುತ್ತದೆಂದರೆ, ಮೂರು ರಾಜ್ಯಗಳಲ್ಲಿ ಮತದಾರರು ಬಿಜೆಪಿಯ ವಿರುದ್ಧವಿದ್ದಾರೆ. ಬಿಜೆಪಿಯ ಜನವಿರೋಧಿ ನೀತಿಗಳಿಂದ ಬೇಸತ್ತ ಜನರು, ಬೇರೆ ದಾರಿ ಇಲ್ಲದೆ ಕಾಂಗ್ರೆಸ್ಸನ್ನು ಗೆಲ್ಲಿಸಿದ್ದಾರೆ ಎಂದು ಮಾಯಾವತಿ ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ಹೊರಗಿಡುವ ಉದ್ದೇಶದಿಂದ ನಾನು ಕಾಂಗ್ರೆಸ್ಸಿಗೆ ಬೆಂಬಲ ನೀಡುತ್ತಿದ್ದೇನೆ ಎಂದಿರುವ ಅವರು, ಚುನಾವಣೆಗೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಹಾಯಹಸ್ತ ಚಾಚಿದ್ದಾಗ, ಸೀಟು ಹಂಚಿಕೆಯಲ್ಲಿ ಹೆಚ್ಚಿನ ಕ್ಷೇತ್ರ ಸಿಗದಿದ್ದರಿಂದ ಕಾಂಗ್ರೆಸ್ಸಿಗೆ ಕೈಕೊಟ್ಟಿದ್ದರು.
ಮಧ್ಯ ಪ್ರದೇಶದಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆಯೆಂದರೆ, ಕಾಂಗ್ರೆಸ್ಸಿಗೆ ಬಹುಜನ ಸಮಾಜ ಪಕ್ಷದ ಬೆಂಬಲದ ಅವಶ್ಯಕತೆ ಇಲ್ಲವೇ ಇಲ್ಲ. ಈಗಾಗಲೆ 1 ಸ್ಥಾನ ಗೆದ್ದಿರುವ ಸಮಾಜವಾದಿ ಪಕ್ಷ ಬೆಂಬಲ ಸೂಚಿಸುವುದಾಗಿ ಹೇಳಿದೆ ಮತ್ತು 4 ಕ್ಷೇತ್ರಗಳಲ್ಲಿ ಗೆದ್ದಿರುವ ಸ್ವತಂತ್ರ ಅಭ್ಯರ್ಥಿಗಳು ಕೂಡ ಬೆಂಬಲ ಸೂಚಿಸಿದ್ದಾರೆ.
ಕಾಂಗ್ರೆಸ್ಸಿನ ಬಳಿ ಈಗ 114 ಸ್ಥಾನಗಳಿವೆ. ಬಹುಮತ ಸಾಬೀತುಪಡಿಸಲು ಬೇಕಿರುವುದು 116 ಸ್ಥಾನಗಳು. ಕೇವಲ ಎರಡೇ ಎರಡು ಬೇಕಿರುವುದರಿಂದ ಕಾಂಗ್ರೆಸ್ಸಿಗೆ ಬಹುಮತ ಸಾಬೀತುಪಡಿಸಲು ಯಾವುದೇ ತೊಂದರೆ ಆಗಲಿಕ್ಕಿಲ್ಲ. ಈ ಚುನಾವಣೆಯಲ್ಲಿ 15 ವರ್ಷ ಆಡಳಿತ ನಡೆಸಿದ್ದ ಬಿಜೆಪಿ 109 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದೆ.
ಮುಖ್ಯಮಂತ್ರಿಯಾಗಲು ಸಿದ್ಧರಾಗಿರುವ ಹಿರಿಯ ನಾಯಕ 72 ವರ್ಷದ ಕಮಲ್ ನಾಥ್ ಅವರು ಈಗಾಗಲೆ ಬೆಂಬಲ ಪತ್ರವನ್ನು ಹಿಡಿದುಕೊಂಡು ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರನ್ನು ಸಂಪರ್ಕಿಸಿದ್ದು, ಸರಕಾರ ರಚಿಸಲು ಅವಕಾಶ ಕೋರಿ ಪತ್ರ ಬರೆದಿದ್ದಾರೆ.












Click it and Unblock the Notifications