ದೆಹಲಿಗೆ ಹೋಗುವ ಮುನ್ನ ಹುಷಾರ್: ಅಲ್ಲಿ ಮಾಸ್ಕ್ ತೆಗೆದರೆ ಮರಣ!
ದೆಹಲಿ, ನವೆಂಬರ್.12: ದಿನ ಬೆಳಗಾದ್ರೆ ವಾಕಿಂಗ್ ಹೋಗುತ್ತಿದ್ದ ಮಂದಿ ಇಂದು ಮನೆಯಿಂದ ಹೊರ ಬರುವುದಕ್ಕೂ ಬೆಚ್ಚಿ ಬೀಳುತ್ತಿದ್ದಾರೆ. ದೆಹಲಿಯಲ್ಲಿನ ವಾತಾವರಣ ಇಡೀ ರಾಷ್ಟ್ರ ರಾಜಧಾನಿ ಜನರನ್ನೇ ಬೆಚ್ಚಿ ಬೀಳಿಸಿದೆ. ಮಾಸ್ಕ್ ಬಿಟ್ಟರೆ ಮರಣ ಗ್ಯಾರೆಂಟಿ ಎನ್ನುವಂತಾ ವಾತಾವರಣ ಅಲ್ಲಿ ನಿರ್ಮಾಣವಾಗಿದೆ.
ಹೌದು, ದೆಹಲಿಯಲ್ಲಿ ವಾತಾವರಣ ದಿನೇ ದಿನೆ ಹದಗೆಡುತ್ತಿದೆ. ಮನೆಯಿಂದ ಹೊರ ಬರೋದಕ್ಕೂ ಮೊದಲೇ ಜನರು ಮಾಸ್ಕ್ ಕಡ್ಡಾಯವಾಗಿ ಧರಿಸಲೇಬೇಕಾದ ದುಸ್ಥಿತಿ ಎದುರಾಗಿದೆ. ದೆಹಲಿ ಸರ್ಕಾರವೇ ಇದೀಗ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ನೀಡಲು ಮುಂದಾಗಿದೆ.
ನೆರೆ ರಾಜ್ಯಗಳು ಮಾಡುತ್ತಿರುವ ಕೆಲಸದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೆರಳಿದ್ದಾರೆ. ನಿನ್ನೆಯಷ್ಟೇ ಗುಜರಾತ್ ಹಾಗೂ ಹರಿಯಾಣ ರಾಜ್ಯಗಳ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ಫುಲ್ ಕಿಡಿ ಕಾರಿದ್ದರು. ಎರಡು ರಾಜ್ಯಗಳಲ್ಲಿ ಬೆಳೆಗಳನ್ನು ಸುಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಮಾಪ್ಲರ್ ಮ್ಯಾನ್ ಖಡಕ್ ಆಗಿ ಹೇಳಿದ್ದರು.

ಮಾಸ್ಕ್ ಇಲ್ಲದಿದ್ದರೆ ಮರಣ ಗ್ಯಾರೆಂಟಿ!
ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿ ಹೋಗಿದೆ. ಮಾಸ್ಕ್ ಇಲ್ಲದಿದ್ದರೆ ಮರಣ ಎನ್ನುವಂತಾ ಅಪಾಯಕಾರಿ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ದೆಹಲಿ ಸರ್ಕಾರ ಸಾರ್ವಜನಿಕರ ರಕ್ಷಣೆಗೆ ಮುಂದಾಗಿದೆ. ಪ್ರಜೆಗಳಿಗೆ ಸರ್ಕಾರದಿಂದಲೇ ಉಚಿತವಾಗಿ ಮಾಸ್ಕ್ ನೀಡಲಾಗುತ್ತಿದೆ.

ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ
ಈಗಾಗಲೆ ನಗರದಲ್ಲಿ ಗಾಳಿಯ ಗುಣಮಟ್ಟ ಸಂಪೂರ್ಣ ಹದಗೆಟ್ಟು ಹೋಗಿದೆ. ಮಕ್ಕಳು ಇಲ್ಲಿ ಉಸಿರಾಡಿದರೆ ಆಸ್ಪತ್ರೆಗೆ ಹೋಗುವಂತಾ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಸರ್ಕಾರವೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.

ದೆಹಲಿಯಲ್ಲಿ ಗಾಳಿ ಗುಣಮಟ್ಟ ಎಷ್ಟಿದೆ ಗೊತ್ತಾ?
ದೆಹಲಿಯಲ್ಲಿ ಗಾಳಿ ಗುಣಮಟ್ಟ ಮಿತಿ ಮೀರಿದ್ದು, ವಿಷಾನಿಲವಾಗಿ ಪರಿವರ್ತನೆ ಆಗಿ ಬಿಟ್ಟಿದೆ. ಇಂದು ಬೆಳಗ್ಗೆ ನೋಯ್ಡಾ ಸೆಕ್ಟರ್ ನಲ್ಲಿ ಗಾಳಿ ಗುಣಮಟ್ಟದ ಸೂಚ್ಯಂಕ 768ಕ್ಕೆ ತಲುಪಿದೆ. ಗಜಿಯಾಬಾದ್ ನಲ್ಲಿ ಗಾಳಿಯ ಗುಣಮಟ್ಟ 714, ದಿಟೆ ಓಕ್ಲಾ ಪ್ರದೇಶದಲ್ಲಿ 624, ಬನಾವಾದಲ್ಲಿ 792, ರೋಹಿಣಿ ಎಂಬಲ್ಲಿ 692, ಹಾಗೂ ಆನಂದ್ ವಿಹಾರ್ ನಲ್ಲಿ ಗಾಳಿಯ ಗುಣಮಟ್ಟ 666ಕ್ಕೆ ಏರಿಕೆಯಾಗಿದೆ. ಈ ಮೂಲಕ ಗಾಳಿಯ ಗುಣಮಟ್ಟ ಅಪಾಯಕಾರಿ ಮಟ್ಟವನ್ನೂ ಮೀರಿ ಹೋಗಿದೆ.

ಉಸಿರಾಡುವ ಗಾಳಿ ಗುಣಮಟ್ಟ ಹೀಗೆ ಇರಬೇಕು
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹಾಳಾಗಿ ಹೋಗಿದ್ದು, ಇಲ್ಲಿ ಗಾಳಿಯೇ ವಿಷಾನಿಲವಾಗಿ ಪರಿವರ್ತನೆ ಆಗಿ ಬಿಟ್ಟಿದೆ. ಹಾಗಿದ್ದರೆ ಗಾಳಿಯ ಗುಣಮಟ್ಟದ ಪ್ರಮಾಣ ಎಷ್ಟಿರಬೇಕು ಎಂದು ನೋಡುವುದಾದರೆ,
- 00-50 ಉತ್ತಮ
- 51-100 ತೃಪ್ತಿದಾಯಕ
- 101-200 ಮಧ್ಯಮ
- 201-300 ಕಳಪೆ
- 301-400 ಅತಿಕಳಪೆ
- 401-500 ಅಪಾಯಕಾರಿ
- 500 ನಂತರ ಅತಿ ಅಪಾಯಕಾರಿ
ಸದ್ಯ ದೆಹಲಿಯಲ್ಲಿನ ವಾಯುಮಾಲಿನ್ಯದ ಪ್ರಮಾಣ ಅತಿ ಅಪಾಯಕಾರಿ ಮಟ್ಟವನ್ನೂ ಕೂಡಾ ಮೀರಿ ಹೋಗಿದೆ.

ಉಸಿರಾಟ, ಶ್ವಾಸಕೋಶ ಸಮಸ್ಯೆಗೆ ತುತ್ತಾಗುವ ಭೀತಿಯಲ್ಲಿ ಜನ
ಕಳೆದ ಎರಡು ಮೂರು ದಿನಕ್ಕೆ ಹೋಲಿಸಿದರೆ ದೆಹಲಿಯಲ್ಲಿ ಇಂದು ಮತ್ತೆ ವಾತಾವರಣ ಹದಗೆಟ್ಟು ಹೋಗಿದೆ. ವಾಯು ಮಾಲಿನ್ಯದಿಂದ ಗಾಳಿ ಗುಣಮಟ್ಟ ಮತ್ತಷ್ಟು ಹಾಳಾಗಿರುವ ಬಗ್ಗೆ ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಆಂಡ್ ವೆದರ್ ಫಾರಕಾಸ್ಟಿಂಗ್ ಆಂಡ್ ರಿಸರ್ಚ್ ತಿಳಿಸಿದೆ. ಅಲ್ಲದೇ ಜನರಲ್ಲಿ ವಾಯುಮಾಲಿನ್ಯದಿಂದ ಉಸಿರಾಟ ತೊಂದರೆ, ಶ್ವಾಸಕೋಶದ ಸಮಸ್ಯೆ ಹಾಗೂ ಹೃದಯಾಘಾತದ ಭೀತಿಯನ್ನು ಎದುರಿಸುತ್ತಿದ್ದಾರೆ.












Click it and Unblock the Notifications