ಕಾಂಗ್ರೆಸ್ ಹಿರಿಯರ ಆಗ್ರಹ ಕಂಡು ಅವಕ್ಕಾದ ರಾಹುಲ್ ಗಾಂಧಿ
ನವದೆಹಲಿ, ಆಗಸ್ಟ್ 10: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಿರಿಯ ಮುಖಂಡರ ಆಗ್ರಹ ಕಂಡು ಅವಕ್ಕಾದ ರಾಹುಲ್ ಗಾಂಧಿ ಸಭೆಯಿಂದ ಹೊರ ನಡೆದಿರುವ ಪ್ರಸಂಗ ನಡೆದಿದೆ. ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ ಪುತ್ರನನ್ನು ಅನುಸರಿಸಿದ್ದಾರೆ. ಇಬ್ಬರು ಕೂಡಾ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ.
ಶನಿವಾರದಂದು ಸಭೆ ಆರಂಭವಾಗುತ್ತಿದ್ದಂತೆ ಒಕ್ಕೊರಲ ದನಿಯಲ್ಲಿ ಕಾರ್ಯಕಾರಿ ಸದಸ್ಯರು, ರಾಹುಲ್ ಗಾಂಧಿ ಅವರಿಗೆ ರಾಜೀನಾಮೆ ಹಿಂಪಡೆದು ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯುವಂತೆ ಕೋರಿದ್ದಾರೆ.
"ಜನತೆಯ ಹಕ್ಕು ಕಿತ್ತುಕೊಂಡು, ಪ್ರಜಾಪ್ರಭುತ್ವವನ್ನು ಬಿಜೆಪಿ ಬುಡಮೇಲು ಮಾಡುತ್ತಿರುವ ಸಂದರ್ಭದಲ್ಲಿ ಸಮರ್ಥವಾಗಿ ಕಾಂಗ್ರೆಸ್ ಮುನ್ನಡೆಸಲು ರಾಹುಲ್ ಗಾಂಧಿಯಿಂದ ಮಾತ್ರ ಸಾಧ್ಯ' ಎಂಬ ಒಮ್ಮತದ ಅಭಿಪ್ರಾಯ ಮೂಡಿದೆ.

ಆದರೆ, ರಾಹುಲ್ ಗಾಂಧಿ ಇದಕ್ಕೊಪ್ಪದೆ ಸಭೆಯಿಂದ ಹೊರ ಬಂದಿದ್ದಾರೆ. ಐದು ಪ್ರದೇಶಕ್ಕೆ ಅನುಗುಣವಾಗಿ ಐದು ಉಪ ಗುಂಪುಗಳನ್ನು ಮಾಡಿ ಅದಕ್ಕೆ ಯುವ ನೇತಾರರನ್ನು ನೇಮಿಸಲು ಸದ್ಯಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ರಾಹುಲ್ ರಾಜೀನಾಮೆ ಬಗ್ಗೆ ಮತ್ತೊಮ್ಮೆ ಚರ್ಚಿಸಲಾಗುವುದು ಎಂದು ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದರು.
ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನ ತೊರೆದು ಈಗಾಗಲೇ ಎರಡು ತಿಂಗಳು ಕಳೆದಿವೆಯಾದರೂ, ಪಕ್ಷಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡುವಲ್ಲಿ ಕಾಂಗ್ರೆಸ್ ಈಗಲೂ ವಿಳಂಬ ಮಾಡುತ್ತಿದ್ದು, ಇದು ಕಾರ್ಯಕರ್ತರ ಮನಸ್ಸಿನಲ್ಲಿಯೂ ಉತ್ತಮ ಅಭಿಪ್ರಾಯ ಮೂಡಿಸುವುದಿಲ್ಲ ಎಂದು ಹಿರಿಯ ನಾಯಕರಾದ ಎಕೆ ಎಂಟನಿ, ಅಹ್ಮದ್ ಪಟೇಲ್, ಕೆಸಿ ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.
59 ವರ್ಷ ವಯಸ್ಸಿನ ಮುಕುಲ್ ವಾಸ್ನಿಕ್ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ದೊಡ್ಡದಿದೆ.












Click it and Unblock the Notifications