ಕಾವೇರಿ ವಿಚಾರದಲ್ಲಿ ಮೌನ ಸರಿಯಲ್ಲ: ವಾಟಾಳ್ ನಾಗರಾಜ್
ಮೈಸೂರು, ಜೂನ್ 4: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರಾಜ್ಯ ಸರ್ಕಾರ ಒಪ್ಪಬಾರದು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಕಪ್ಪು ಉಡುಪು ಧರಿಸಿ, ಕಪ್ಪು ಧ್ವಜ ಪ್ರದರ್ಶಿಸಿ, ಕರಾಳ ದಿನ ಆಚರಿಸಿದರು.
ರೈಲು ನಿಲ್ದಾಣದ ಮುಂದೆ ಅವರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಸರ್ಕಾರ ಈ ವಿಚಾರದಲ್ಲಿ ಮೌನವಾಗಿರುವುದು ಸರಿಯಲ್ಲ. ಇದೇ ಮೌನ ಮುಂದುವರಿಸಿದ್ದೇ ಆದಲ್ಲಿ ಮುಂದೊಂದು ದಿನ ಇದರಿಂದ ಭಾರಿ ಅಪಾಯ ಉಂಟಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಕೆಆರ್ ಎಸ್ನಲ್ಲಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಒಳ ಹರಿವು ಇಲ್ಲವೇ ಇಲ್ಲ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ. ಈ ಕುರಿತು ಸರ್ಕಾರ ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಒಂದು ವೇಳೆ ನೀರು ಬಿಟ್ಟರೆ ನಾಡಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕಾಗುತ್ತದೆ ಎಂದು ಕಿಡಿಕಾರಿದರು.

ಕರ್ನಾಟಕದಲ್ಲಿ ಹಿಂದಿ ಭಾಷೆಯನ್ನು ಹೇರಿಕೆ ಮಾಡಬಾರದು. ಮೊದಲಿನಿಂದಲೂ ಕೇಂದ್ರ ಸರ್ಕಾರ ಈ ಪ್ರಯತ್ನ ನಡೆಸುತ್ತಿದೆ. ಇದರ ವಿರುದ್ಧ ಕನ್ನಡಿಗರೆಲ್ಲರೂ ಒಂದುಗೂಡಬೇಕು ಎಂದು ಅವರು ಕರೆ ನೀಡಿದರು.
ಕೆಆರ್ ಎಸ್ ಗೆ ಕಾವೇರಿ ನೀರು ನಿರ್ವಹಣಾ ಸಮಿತಿ ಅಧಿಕಾರಿಗಳ ಭೇಟಿ: ಕಾವೇರಿ ನೀರು ನಿರ್ವಹಣಾ ಸಮಿತಿ ತಂಡವು ಇಂದು ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ (ಕೆಆರ್ ಎಸ್)ಕ್ಕೆ ಭೇಟಿ ನೀಡಲಿದೆ. ಕೇಂದ್ರದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ಕೆಆರ್ ಎಸ್ ಗೆ ಭೇಟಿ ನೀಡಲಿರುವ ಸಮಿತಿ ಸದಸ್ಯರು, ಇಂದಿನಿಂದ ಎರಡು ದಿನಗಳ ಕಾಲ ಪರಿಶೀಲನೆ ನಡೆಸುವರು. ಟೆಲಿಮೆಟ್ರಿ ಆಧಾರದ ಮೇಲೆ ಆನ್ ಲೈನ್ ನಲ್ಲಿ ಜಲಾಶಯದ ನೀರಿನ ಮಟ್ಟ, ಒಳ ಹಾಗೂ ಹೊರ ಹರಿವು, ಗೇಟ್ ಗಳ ಕಾರ್ಯವೈಖರಿಯನ್ನು ತಿಳಿಯುವ ಪದ್ಧತಿಯನ್ನು ಜಾರಿಗೊಳಿಸಲಿರುವ ಉದ್ದೇಶದಿಂದ ಸಮಿತಿ ಅಧಿಕಾರಿಗಳ ಭೇಟಿ ಮಹತ್ವ ಪಡೆದುಕೊಂಡಿದೆ.
ಈ ತಂಡದ ಅಧಿಕಾರಿಗಳು ತಮಿಳುನಾಡಿನ ಮೆಟ್ಟೂರು ಡ್ಯಾಂ, ಭವಾನಿ ಹಾಗೂ ಅಮರಾವತಿ ಜಲಾಶಯಗಳಿಗೂ ಭೇಟಿ ನೀಡುವರು. ಕರ್ನಾಟಕದ ಹೇಮಾವತಿ, ಹಾರಂಗಿ, ಕೇರಳದ ಬನಸುರ ಸಾಗರ ಅಣೆಕಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪ್ರಾಧಿಕಾರಕ್ಕೆ ಸಮಗ್ರ ವರಧಿ ಸಲ್ಲಿಸಲಿದ್ದು ಇದು ಮಹತ್ವದ ಘಟ್ಟವಾಗಿದೆ.












Click it and Unblock the Notifications