10 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಮೈಸೂರು ವಿವಿ
ಮೈಸೂರು, ಜನವರಿ 04: " ಮೈಸೂರು ವಿಶ್ವವಿದ್ಯಾನಿಲಯ ಉನ್ನತ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ವ್ಯಾಪ್ತಿಯ ಆರು ಗ್ರಾಮಗಳು ಹಾಗೂ ಹತ್ತು ಶಾಲೆಗಳನ್ನು ದತ್ತು ಪಡೆದುಕೊಂಡಿದೆ" ಎಂದು ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸೇಬಿನ ಕೋಟೆ, ಪಿ.ಜಿ.ಪಾಳ್ಯ ಗ್ರಾಪಂನಲ್ಲಿ ಹುಯಿಲ್ನತ್ತ, ಎಂ. ಎಂ. ಹಿಲ್ಸ್ ಪಂಚಾಯಿತಿಯಲ್ಲಿ ಒಡಕೆಹಳ್ಳ, ಪೊನ್ನಾಚಿಯಲ್ಲಿ ರಾಮೇಗೌಡನ ಹಳ್ಳಿ, ಮಿಣ್ಯಂನಲ್ಲಿ ಸೂಳೆಕೋಬೆ, ಹುತ್ತೂರುನಲ್ಲಿ ಗುಳ್ಳದ ಬಯಲು ಗ್ರಾಮವನ್ನು ದತ್ತು ಪಡೆದುಕೊಳ್ಳಲಾಗಿದೆ" ಎಂದರು.
"ವಿವಿಯು ಶತಮಾನೋತ್ಸವ ಆಚರಿಸಿಕೊಂಡಿದ್ದು, ವಿವಿ ವ್ಯಾಪ್ತಿಯಲ್ಲಿ ನೂರು ವರ್ಷಗಳ ಇತಿಹಾಸವನ್ನು ಹೊಂದಿರುವ, ಹಲವು ಸಾಧನೆಗಳನ್ನು ಮಾಡಿರುವಂತಹ ಶಾಲೆಗಳನ್ನು ಗುರತಿಸಿ ಮತ್ತಷ್ಟು ಬಲವರ್ಧನೆಗೊಳಿಸುವ ಹಾಗೂ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ 10 ಶಾಲೆಗಳನ್ನು ದತ್ತು ಪಡೆದುಕೊಳ್ಳಲಾಗಿದೆ" ಎಂದು ಹೇಳಿದರು.

ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ : ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಪ್ರಸಾರಾಂಗ ಸಹಯೋಗದಲ್ಲಿ ಜ.6 ರಂದು 'ಕೃತಿಗಳ ಲೋಕಾರ್ಪಣೆ' ಹಾಗೂ ಶೇ.50 ರಿಯಾಯಿತಿ ದರದಲ್ಲಿ ಎರಡು ದಿನಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ.
ಜ.6 ರಂದು ಬೆಳಿಗ್ಗೆ 11 ಗಂಟೆಗೆ ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯ ಆವರಣದಲ್ಲಿ ಈ ಮೇಳ ಉದ್ಘಾಟನೆಯಾಗಲಿದೆ. ಪುಸ್ತಕ ಮೇಳದಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಪ್ರಸಾರಾಂಗ ಪ್ರಕಟಿಸಿರುವ ಬಹುತೇಕ ಪುಸ್ತಕಗಳು ಶೇ.50 ರಿಯಾಯಿತಿ ದರದಲ್ಲಿ ಓದುಗರಿಗೆ ದೊರೆಯಲಿವೆ.












Click it and Unblock the Notifications