ಪ್ರತಿ ಶವಸಂಸ್ಕಾರಕ್ಕೆ ಹಾಜರಾಗುವ ಮೇಕೆಯ ವಿಶಿಷ್ಟ ಕಥೆ
ಮೈಸೂರು, ಏಪ್ರಿಲ್ 21 : ಮೈಸೂರು ತಾಲೂಕಿನ ಬೆಳವಾಡಿಯಲ್ಲಿರುವ ಕಪ್ಪು ಬಣ್ಣದ ಮೇಕೆಯೊಂದು ಇತರೆ ತನ್ನದೇ ಆದ ವರ್ತನೆಯಿಂದ ಎಲ್ಲೆಡೆ ಸುದ್ದಿಯಾಗುತ್ತಿದ್ದು, ಇದನ್ನು ಜನ ದೈವಿ ಸ್ವರೂಪಿ ಎಂದು ಬಣ್ಣಿಸಿ ಪೂಜಿಸುತ್ತಿದ್ದಾರೆ.
ಗ್ರಾಮದಲ್ಲಿರುವ ಇತರೆ ಮೇಕೆಗಳಿಗಿಂತ ಇದೊಂದು ಮೇಕೆ ಭಿನ್ನ ಮತ್ತು ವಿಶಿಷ್ಟ. ಇದಕ್ಕೆ ಕಾರಣ ಊರಲ್ಲಿ ಯಾರೇ ಸತ್ತರೂ ಅಂತ್ಯ ಸಂಸ್ಕಾರ ನಡೆಯುವ ಸ್ಥಳಕ್ಕೆ ಇದು ಹಾಜರ್. ಅಷ್ಟೇ ಅಲ್ಲದೆ ತನ್ನ ಮೂಕವೇದನೆಯನ್ನು ಹೊರ ಹಾಕುತ್ತದೆ. ಕಳೆದ ಎರಡು ವರ್ಷಗಳಿಂದ ಈ ರೀತಿಯ ನಡೆಯನ್ನು ಅನುಸರಿಸುತ್ತಿರುವ ಮೇಕೆ ಇದುವರೆಗೆ ಸುಮಾರು ಐನೂರಕ್ಕೂ ಹೆಚ್ಚು ಶವಸಂಸ್ಕಾರದಲ್ಲಿ ಪಾಲ್ಗೊಂಡಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. [ಈ ಮೇಕೆಯನ್ನಾದರೂ ನೋಡಿ ಬುದ್ಧಿ ಕಲೀರೋ!]
ಮೇಕೆಯ ಪುರಾಣ : ಇಷ್ಟಕ್ಕೂ ಈ ಮೇಕೆ ಯಾರಿಗೆ ಸೇರಿದ್ದು? ಎಲ್ಲಿಂದ ಬಂದಿದ್ದು? ಹೀಗೆ ಅದರ ಮೂಲ ಹುಡುಕುತ್ತಾ ಹೋದರೆ ಒಂದಷ್ಟು ಕುತೂಹಲಕಾರಿ ವಿಚಾರಗಳು ನಮಗೆ ಸಿಗುತ್ತವೆ. ಬೆಳವಾಡಿ ಗ್ರಾಮದ ನಿವಾಸಿ ಪುಟ್ಟರಾಮ ಎಂಬುವರು ಈ ಮೇಕೆಯ ಮಾಲೀಕರು. ಮನೆಯಲ್ಲಿ ತೀವ್ರ ಬಡತನ. ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುತ್ತಿರಲಿಲ್ಲ. [ಮರಿ ಹಾಕದ ಆಡು ಹಾಲು ನೀಡುತ್ತಿದೆ ಕಂಡಿರಾ...!]

ಈ ಸಂದರ್ಭ ಅವರ ನೆನಪಿಗೆ ಬಂದಿದ್ದು ಬನ್ನೂರಿನ ಭೂತಗಳ್ಳಿಯ ಬೇತಾಳೇಶ್ವರ ದೇವರು. ಆ ದೇವರಿಗೆ ನನ್ನ ಕಷ್ಟವೆಲ್ಲ ಪರಿಹಾರವಾದರೆ ನಿನಗೆ ಮೇಕೆಯನ್ನು ಹರಕೆಯಾಗಿ ಅರ್ಪಿಸುವುದಾಗಿ ಸಂಕಲ್ಪ ಮಾಡಿಕೊಂಡರು. ಅದರಂತೆ ಕಳೆದ ಎರಡೂವರೆ ವರ್ಷದ ಹಿಂದೆ ಅವಳಿ ಮೇಕೆಗಳನ್ನು ತಂದು ಸಾಕತೊಡಗಿದರು. ಈ ಮೇಕೆಗಳು ಬೆಳೆಯುತ್ತಿದ್ದಂತೆಯೇ ಪುಟ್ಟರಾಮ ಅವರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸತೊಡಗಿತು.
ದೇವರಿಗಾಗಿ ಮೇಕೆಯನ್ನು ಬಿಟ್ಟಿದ್ದಾರೆ ಎಂದು ಊರಲ್ಲಿ ತಿಳಿದಿದ್ದರಿಂದ ಜನರೂ ಕೂಡ ಅದಕ್ಕೆ ಏನು ಮಾಡುತ್ತಿರಲಿಲ್ಲ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಮೇಯುತ್ತಿದ್ದ ಮೇಕೆಗಳು ಊರಿನಲ್ಲಿ ಯಾರಾದರು ಸತ್ತರೆ ಶವದ ಅಂತ್ಯಕ್ರಿಯೆ ಮಾಡಲು ಜನ ಹೊತ್ತೊಯ್ಯುತ್ತಿದ್ದರೆ ಅವರ ಹಿಂದೆ ಹೋಗಲು ಆರಂಭಿಸಿದವು. ಇದು ಪುನರಾವರ್ತನೆ ಆಗಿದ್ದರಿಂದ ಅವುಗಳಿಗೆ ತಮಟೆ ಸದ್ದು ಕೇಳಿದರೆ ಯಾರೋ ಸತ್ತಿದ್ದಾರೆ ಎಂಬುದು ತಿಳಿಯತೊಡಗಿತು. [ಮಂಡ್ಯದಲ್ಲಿ ಮನುಷ್ಯ ರೂಪದ ಕುರಿಮರಿ ಜನನ!]
ಕಂಬನಿ ಮಿಡಿಯುವ ಮೇಕೆ : ಶವ ಹೊತ್ತು ಸಾಗುವ ಜನರನ್ನು ಹಿಂಬಾಲಿಸುವ ಮೇಕೆ, ಸ್ಮಶಾನಕ್ಕೆ ತೆರಳಿ ಅಲ್ಲಿ ಅಂತ್ಯಕ್ರಿಯೆ ನಡೆಯುವವರೆಗೂ ಅಲ್ಲಿಯೇ ಇರುತ್ತದೆ. ಈ ಸಂದರ್ಭ ಮನೆಯವರು ಅಳುವುದನ್ನು ನೋಡಿ ತಾನೂ ಕಂಬನಿ ಮಿಡಿಯುತ್ತದೆ. ಬಳಿಕ ಹಿಂತಿರುಗುತ್ತದೆ. ಬೆಳಿಗ್ಗೆ ಮನೆಯಿಂದ ಹೊರಡುವ ಮೇಕೆ ಸಂಜೆ ಮನೆಯ ಬಳಿ ಹಾಜರಾಗಿ ಬಿಡುತ್ತದೆ.
ಕಳೆದ ಆರು ತಿಂಗಳ ಹಿಂದೆ ಇದರ ಜೊತೆಗಿದ್ದ ಮತ್ತೊಂದು ಮೇಕೆ ಸಾವನ್ನಪ್ಪಿದೆ. ಈಗ ಒಂಟಿಯಾಗಿರುವ ಈ ಮೇಕೆ ಶವಸಂಸ್ಕಾರದಲ್ಲಿ ಪಾಲ್ಗೊಳ್ಳುವುದನ್ನು ಮಾತ್ರ ನಿಲ್ಲಿಸಿಲ್ಲ. ಇದನ್ನು ಹತ್ತಿರದಿಂದ ನೋಡುತ್ತಿರುವ ಗ್ರಾಮಸ್ಥರಿಗೆ ಮೇಕೆ ಮೇಲೆ ಇನ್ನಿಲ್ಲದ ಪ್ರೀತಿ. ಇದರಲ್ಲೇನೋ ಶಕ್ತಿಯಿದೆ ಎಂದು ನಂಬುತ್ತಾರೆ. ಬೆಳಿಗ್ಗೆ ಎದ್ದು ಇದರ ಮುಖ ನೋಡಿ ಹೋದರೆ ಒಳ್ಳೆಯದಾಗುತ್ತದೆ ಎಂದು ಗ್ರಾಮದ ಜನ ನಂಬಿದ್ದಾರೆ.












Click it and Unblock the Notifications