ನಾಡಹಬ್ಬದ ಸಂಭ್ರಮದೊಂದಿಗೆ ಕ್ರೀಡಾ ದಸರೆಯ ಮೆರುಗು
ಮೈಸೂರು, ಸೆಪ್ಟೆಂಬರ್ 16: ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ಬಾರಿಯೂ ಸಹ ಕ್ರೀಡಾ ದಸರೆಯನ್ನು ಸೆ.21ರಿಂದ 24ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ದಸರಾ ವಿಶೇಷಾಧಿಕಾರಿ ಡಿ.ರಂದೀಪ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಬಳಿಕ ಮಾತನಾಡಿದ ಅವರು, ಸೆ.20ರಂದು ನಂಜರಾಜ ಬಹದ್ದೂರ್ ಛತ್ರದಲ್ಲಿ ಕ್ರೀಡಾಪಟುಗಳ ನೋಂದಣಿ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ಸೆ.21ರಂದು ಬೆಳಿಗ್ಗೆ 11ಗಂಟೆಗೆ ಕ್ರೀಡಾ ಜ್ಯೋತಿ ಉದ್ಘಾಟನೆಗೊಂಡು ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಸಂಚರಿಸಿಲಿದೆ. ಈ ಸಂದರ್ಭ ವಿವಿಧ ಅಧಿಕಾರಿಗಳು ಚೆಸ್ ಗ್ರ್ಯಾಂಡ್ ಮಾಸ್ಟರ್ ಎಂ.ಎಸ್.ತೇಜಸ್ ಕುಮಾರ್ ಪಾಳ್ಗೊಳ್ಳಲಿದ್ದಾರೆ ಎಂದರು.

21ರಂದು ಸಂಜೆ 4 ಗಂಟೆಗೆ ಕ್ರೀಡಾಕೂಟ ಉದ್ಘಾಟನೆಯನ್ನು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಕ್ರಿಕೆಟ್ ಆಟಗಾರ್ತಿಯರಾದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್ ಉಪಸ್ಥಿತರಿರುವರು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವೈಯುಕ್ತಿಕ ಕ್ರೀಡೆಯಲ್ಲಿ ಮೊದಲನೆ ಬಹುಮಾನ 5,000ರೂ, ಗುಂಪು ಕ್ರೀಡೆ ತಲಾ 2,000ರೂ, ಎರಡನೇ ಬಹುಮಾನ 3,000ರೂ, ತಲಾ 1,500ರೂ, ಮೂರನೇ ಬಹುಮಾನ 1,500ರೂ, ತಲಾ 1,000ರೂ. ನಗದು ಪುರಸ್ಕಾರವನ್ನು ನೀಡಲಾಗುವುದು. ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವೈಯುಕ್ತಿಕ ದಾಖಲೆ ನಿರ್ಮಿಸಿದವರಿಗೆ 10,000ರೂ.ನಗದು ಪುರಸ್ಕಾರ ನೀಡಲಾಗುವುದು. ನಗದು ಪುರಸ್ಕಾರ ಹಣವನ್ನು ವಿಜೇತ ಕ್ರೀಡಾಪಟುಗಳ ಹೆಸರಿನಲ್ಲಿ ಚೆಕ್ ಮೂಲಕ ಪಾವತಿಸಲಾಗುವುದು. ಉಪಸಮಿತಿ ವತಿಯಿಂದ ಮೆಡಲ್ಸ್, ಟ್ರೋಫಿ ಮತ್ತು ಪ್ರಶಸ್ತಿ ಪತ್ರ ಇವುಗಳನ್ನು ನೀಡಲಾಗುವುದು ಎಂದರು.
ದಸರಾ ಹಾಫ್ ಮ್ಯಾರಥಾನ್ ಓಟವನ್ನು ಸೆ.24ರಂದು ಬೆಳಿಗ್ಗೆ 6.30ಕ್ಕೆ ಮೈಸೂರು ಓವೆಲ್ ಮೈದಾನದಿಂದ ಆರಂಭಿಸಲಾಗುವುದು. ಮುಕ್ತ ದಸರಾ ಹಾಫ್ ಮ್ಯಾರಥಾನ್ ಓಟ ಪುರುಷ ಮತ್ತು ಮಹಿಳೆಯರಿಗಾಗಿ 21.1ಕಿ.ಮೀ, ಕಾಲೇಜು ಯುವಕರಿಗಾಗಿ 12,ಕಾಲೇಜು ಯುವತಿಯರಿಗಾಗಿ 6ಕಿ.ಮೀ, ಪ್ರೌಢಶಾಲಾ ಬಾಲಕರಿಗಾಗಿ 6ಕಿ.ಮೀ, ಬಾಲಕಿಯರಿಗಾಗಿ 3ಕಿ.ಮೀ, ಓಟವನ್ನು ಸಂಘಟಿಸಲಾಗುವುದು. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.
ಸೈಕ್ಲೋಥಾನ್ ಸ್ಪರ್ಧೆಯನ್ನು ಸೆ.27ರಂದು ಬೆಳಿಗ್ಗೆ 6.30ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಿಂದ ಪ್ರಾರಂಭಿಸಲಾಗುವುದು. ಉದ್ಘಾಟನಾ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ರಾಷ್ಟ್ರೀಯ ಸೈಕ್ಲಿಸ್ಟ್ ಮಹದೇವು ಭಾಗವಹಿಸಲಿದ್ದಾರೆ. ಸೆ.22ರಂದು ಸಂಜೆ 6.30ಕ್ಕೆ ತೂಕ ವಿಭಾಗದ ದೇಹದಾರ್ಢ್ಯ ಸ್ಪರ್ಧೆಯನ್ನು ಹಾಗೂ ಸೆ.23ರಂದು ಸಂಜೆ 6.30ಕ್ಕೆ ಎತ್ತರದ ವಿಭಾಗದ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಲಾಗುವುದು. ಸೆ.24ರಂದು ಸಂಜೆ 4ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು.












Click it and Unblock the Notifications