ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಇನ್ನಿಲ್ಲ
ಬೆಂಗಳೂರು/ಮೈಸೂರು, ನವೆಂಬರ್ 23: ಮೈಸೂರಿನ ಆಂದೋಲನ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ(71) ನಿಧನರಾಗಿದ್ದಾರೆ.
ಅನಾರೋಗ್ಯ ದಿಂದ ಬಳಲುತ್ತಿದ್ದ ರಾಜಶೇಖರ್ ಅವರು ಇಂದು ಬೆಳಗಿನ ಜಾವ ಬೆಂಗಳೂರಿನಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಕಾರ್ಯಕ್ರಮವೊಂದಕ್ಕೆ ಹಾಜರಾಗಲು ರಾಜಶೇಖರ್ ಕೋಟಿ ಅವರು ಬೆಂಗಳೂರಿಗೆ ಬಂದಿದ್ದರು.

ಬೆಂಗಳೂರಿನಿಂದ ಮೈಸೂರಿಗೆ ಹಿಂದಿರುಗುವ ಸಮಯದಲ್ಲಿ ಹೃದಯಾಘಾತವಾಗಿದೆ. ತಕ್ಷಣವೇ ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಲಾದರೂ, ಫಲಕಾರಿಯಾಗಲಿಲ್ಲ. ಕೋಟಿ ಅವರ ಪಾರ್ಥೀವ ಶರೀರವನ್ನು ಮೈಸೂರಿನ ಸ್ವಗೃಹಕ್ಕೆ ತರಲಾಗುತ್ತಿದೆ.
ಹಿರಿಯ ಪತ್ರಕರ್ತ ರಾಜಶೇಖರಕೋಟಿ ಅವರು ಸಿಎಂ ಸಿದ್ದರಾಮಯ್ಯಗೆ ಆಪ್ತ ಸ್ನೇಹಿತರಾಗಿದ್ದರು. ಕೋಟಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜಶೇಖರ ಕೋಟಿ ಪರಿಚಯ
ಪತ್ರಿಕೋದ್ಯಮದ ಛಾಪನ್ನು ತಮ್ಮದೇ ಆದ ಶೈಲಿಯಲ್ಲಿ ಮೂಡಿಸಿದ್ದ ಹಿರಿಯ ಪತ್ರಕರ್ತ, ಆಂದೋಲನ' ದಿನಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಅವರ ಅಗಲಿಕೆ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ಕೋಟಿಯವರ ಕೊಡುಗೆ ಅಪಾರವಾದುದು.
ಓದುತ್ತಿರುವಾಗಲೇ, ಪ್ರಖ್ಯಾತ ಪತ್ರಿಕೋದ್ಯಮಿ ಪಾಟೀಲ ಪುಟ್ಟಪ್ಪನವರ ಪ್ರಪಂಚ ಹಾಗೂ ವಿಶ್ವವಾಣಿ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿ ಅವರ ಗರಡಿಯಲ್ಲಿ ತಯಾರಾಗಿರುವ ಕೋಟಿಯವರು, ಅವರ ಹಾಗೆಯೇ ಅಪಾರವಾದ ಶಿಷ್ಯಕೋಟಿಯನ್ನು ಹೊಂದಿದವರಾಗಿದ್ದಾರೆ. ಕೋಟಿಯವರ ಗರಡಿಯಲ್ಲಿ ತಯಾರಾದ ಐವತ್ತಕ್ಕೂ ಹೆಚ್ಚು ಪತ್ರಕರ್ತರು ಇಂದು ದೊಡ್ಡ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ, ಅಪಘಾತಗಳು ಜರುಗಿದಾಗ ಪತ್ರಿಕೆಯ ಓದುಗರಿಂದ ನಿಧಿ ಸಂಗ್ರಹಿಸಿ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವುದು ಕೋಟಿಯವರ ಪತ್ರಿಕಾ ಸಮೂಹದ ಅವಿಭಾಜ್ಯ ಅಂಗವಾಗಿದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ 26.35 ಲಕ್ಷ ರೂ. ಗಳಷ್ಟು ಹಣ ಸಂಗ್ರಹಿಸಿದ ಹೃದಯವಂತರು ಕೋಟಿಯವರು. ಸುನಾಮಿ ಸಂತ್ರಸ್ತರಿಗಾಗಿ 12 ಲಕ್ಷ ರೂ. ಗಳಷ್ಟು ನಿಧಿ ಸಂಗ್ರಹಿಸಿ ಕಡಲೂರು ಬಳಿ 'ಮೈಸೂರು ಕಾಲೋನಿ' ನಿರ್ಮಿಸುವ ಮೈಸೂರಿಗರ ಪ್ರಯತ್ನದಲ್ಲಿ ಪಾಲ್ಗೊಂಡಿದ್ದಾರೆ. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಆಸರೆಗಾಗಿ 20 ಲಕ್ಷ ರೂ.ಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ.

ಕೋಟಿಯವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಎಚ್.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ, ರೋಟರಿ ಸುಪ್ರೀಂ ಪ್ರಶಸ್ತಿ, ಮುರುಘಾಶ್ರೀ ಪ್ರಶಸ್ತಿ, ಜನಮಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಟಿಎಸ್ ಆರ್ ಪ್ರಶಸ್ತಿಗಳಲ್ಲದೆ, ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಅಭ್ಯುದಯ ಪತ್ರಿಕೋದ್ಯಮ ಪ್ರೋತ್ಸಾಹಕ (ಮೆಂಟರ್) ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.
ಮೈಸೂರು, ಚಾಮರಾಜನಗರ, ಮಂಡ್ಯ, ಮಡಿಕೇರಿಯಲ್ಲಿ ಪತ್ರಿಕೆಯ ಶಾಖಾ ಕಚೇರಿಗಳನ್ನು ಹೊಂದಿರುವ ಕೋಟಿಯವರು 80ಕ್ಕೂ ಹೆಚ್ಚು ಸಿಬ್ಬಂದಿಗೆ ನೇರವಾಗಿ ಉದ್ಯೋಗ ಒದಗಿಸಿದ್ದಾರೆ. ಜಪಾನ್, ಸಿಂಗಪೂರ್, ಹಾಂಕಾಂಗ್, ಥೈಲ್ಯಾಂಡ್, ಮಲೇಷಿಯಾ, ನೇಪಾಳ್, ದುಬೈ ಅಬುದಾಬಿ ಹಾಗೂ ಶ್ರೀಲಂಕಾ ದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ಪತ್ರಿಕೆಗಳ ಕಾರ್ಯ ವಿಧಾನವನ್ನು ಸ್ವತಃ ವೀಕ್ಷಿಸಿ ಅನುಭವ ಪಡೆದು ಬಂದವರಾಗಿದ್ದಾರೆ.
ಗಣ್ಯರು, ಸಂಘ-ಸಂಸ್ಥೆಗಳವರು, ಪತ್ರಕರ್ತರು ಸೇರಿದಂತೆ ನೂರಾರು ಮಂದಿ ರಾಜಶೇಖರ ಕೋಟಿಯವರ ಅಂತಿಮ ದರ್ಶನ ಪಡೆದರು.












Click it and Unblock the Notifications