ಅರ್ಜುನನ ತಂಡಕ್ಕೆ ಐದು ಆನೆಗಳ ಸೇರ್ಪಡೆ

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿದ್ದ ಆನೆಗಳಾದ ವಿಜಯ, ವಿಕ್ರಮ, ಹರ್ಷ, ಗೋಪಿ, ಪ್ರಶಾಂತ ಆನೆಗಳು ಮಂಗಳವಾರ ಅಂಬಾವಿಲಾಸ ಅರಮನೆ ಆವರಣ ಪ್ರವೇಶಿಸಿದವು. ಆನೆಗಳಿಗೆ ಸಾಂಪ್ರದಾಯಿಕ ಪೂಜೆ, ಪುಷ್ಪಾರ್ಚನೆ ಸಲ್ಲಿಸಿ ಸಂಭ್ರಮದಿಂದ ಸ್ವಾಗತಿಸಲಾಯಿತು.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ ಒಟ್ಟು 14 ಆನೆಗಳು ಪಾಲ್ಗೊಳ್ಳುತ್ತಿವೆ. ಅರ್ಜುನ ನೇತೃತ್ವದ ಮೊದಲ ಗಜಪಡೆ ಆ.30ರಂದು ಮೈಸೂರಿಗೆ ಆಗಮಿಸಿತ್ತು. ಎರಡನೇ ತಂಡದಲ್ಲಿ ಐದು ಆನೆಗಳು ಮೈಸೂರಿಗೆ ಆಗಮಿಸಿದ್ದು, ಎಲ್ಲಾ ಆನೆಗಳು ಮೈಸೂರು ಸೇರಿಕೊಂಡಿವೆ.
ಎರಡು ದಿನದಲ್ಲಿ ತಾಲೀಮು : ಮಂಗಳವಾರ ಆಗಮಿಸಿದ ಐದು ಆನೆಗಳಿಗೆ ಎರಡು ದಿನದಲ್ಲಿ ತಾಲೀಮು ಪ್ರಾರಂಭಿಸಲಾಗುವುದು ಎಂದು ಆನೆಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಡಾ.ನಾಗರಾಜ್ ಹೇಳಿದ್ದಾರೆ.
ಮೊದಲ ತಂಡದಲ್ಲಿ ಆಗಮಿಸಿದ 7 ಆನೆಗಳು ಈಗಾಗಲೇ ಪ್ರತಿನಿತ್ಯ ಎರಡು ಬಾರಿ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸುತ್ತಿವೆ. ಅರ್ಜುನನಿಗೆ ಅಂಬಾರಿ ಹೊರಲು ಅಗತ್ಯ ತಾಲೀಮು ನೀಡುಲು ಮರದ ಅಂಬಾರಿ ಹೊತ್ತು ಸಾಗುವ ತಾಲೀಮನ್ನು ಎರಡು ದಿನಗಳಲ್ಲಿ ಆರಂಭಿಸಲಾಗುತ್ತದೆ.
ಈ ಏಳು ಆನೆಗಳ ಜೊತೆಗೆ ಎರಡನೇ ತಂಡದಲ್ಲಿ ಆಗಮಿಸಿದ ಐದು ಆನೆಗಳು ಎರಡು ದಿನಗಳಲ್ಲಿ ತಾಲೀಮು ನಡೆಸಲು ಪ್ರಾರಂಭಿಸಲಿವೆ. ಈ ಮೂಲಕ ದಸರಾ ಉತ್ಸವದ ಸಿದ್ದತೆ ಕಾರ್ಯ ಮತ್ತಷ್ಟು ಚುರುಕಾಗಿದೆ. (ಮೈಸೂರು ಅರಮನೆಗೆ ಆಗಮಿಸಿದ ಗಜಪಡೆಗೆ ಭವ್ಯ ಸ್ವಾಗತ)












Click it and Unblock the Notifications