ಒಡೆಯರ್ ಅಧೀನದ ಅರಮನೆಗಳ ವ್ಯಾಜ್ಯ: ಎಲ್ಲಾ ಸರ್ಕಾರಗಳಿಂದಲೂ ತೊಂದರೆ
ಮೈಸೂರು, ಜನವರಿ 03: ಲಲಿತಮಹಲ್ ಅರಮನೆ ಸುತ್ತ ಮುತ್ತಲಿನ ಜಮೀನಿನಲ್ಲಿ ನಾವು ನಮಗೆ ಸೇರಿದ ಜಾಗದ ಸುತ್ತಲೂ ಬೇಲಿ ನಿರ್ಮಿಸಿದ್ದೇವೆಯೇ ಹೊರತು ಸಾರ್ವಜನಿಕರಿಗೆ ತೊಂದರೆ ಕೊಡುವ ಯಾವುದೇ ಉದ್ದೇಶವಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ನಾವು ಯಾರಿಗೂ ತೊಂದರೆ ಕೊಡಲ್ಲ, ನಮ್ಮ ಆಸ್ತಿಯನ್ನು ನಾವು ಸುರಕ್ಷತೆ ಮಾಡುತ್ತಿದ್ದೇವೆ, ಕಾನೂನು ತಜ್ಞರ ಸಲಹೆಯಂತೆ ಕಾನೂನು ಹೋರಾಟ ಮುಂದುವರಿಸಲಾಗುತ್ತದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ಜೂನ್ ತಿಂಗಳಲ್ಲಿ ಹೈಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಹೆಲಿಪ್ಯಾಡ್ ಇರುವ ಜಾಗ ನಮ್ಮದು, ಆ ಜಾಗದಲ್ಲಿ ಯಾರೋ ಹೊರಗಿನವರು ಬೇಲಿ ಹಾಕುವುದನ್ನು ಗಮನಿಸಿದ್ದೇವೆ. ನಮ್ಮ ಜಾಗವನ್ನು ನಾವು ಭದ್ರ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಬೋರ್ಡ್ ಹಾಕಿಸಿದ್ದೇವೆ. ಯಾರಿಗೋ ತೊಂದರೆ ಕೊಡಬೇಕು ಅನ್ನುವುದು ನನ್ನ ಉದ್ದೇಶ ಅಲ್ಲ, ಮುಂದೆಯೂ ಅಗತ್ಯಬಿದ್ದರೆ ಹೆಲಿಪ್ಯಾಡ್ ಬಳಸಿಕೊಳ್ಳಲಿ ಎಂದು
ಮೈಸೂರಿನಲ್ಲಿ ಪ್ರಮೋದದೇವಿ ಒಡೆಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕುರುಬಾರಹಳ್ಳಿ, ಆಲನಹಳ್ಳಿ, ಚೌಡಳ್ಳಿ ಜಾಗದ ವಿಚಾರ
ಹೈಕೋರ್ಟ್ ಜೂನ್ ತಿಂಗಳಲ್ಲಿ ನೀಡಿದ ತೀರ್ಪಿನ ಪ್ರಕಾರ ಕುರುಬಾರಹಳ್ಳಿ ಸರ್ವೇ ನಂ.4, ಆಲನಹಳ್ಳಿ ಸರ್ವೇ ನಂ.41 ಮತ್ತು ಚೋಡನಹಳ್ಳಿ ಸರ್ವೇ ನಂ.4ಕ್ಕೆ ಸೇರಿದ ಆಸ್ತಿಯು ನಮ್ಮದು, 1971ರ ದಾಖಲೆಗಳಂತೆ ರಾಜವಂಶಕ್ಕೆ ಸೇರಿದ 1500 ಎಕರೆ ಜಾಗ ಇತ್ತು. 2010ರವರೆಗೂ ಯಾವುದೇ ವಿವಾದ ಇರಲಿಲ್ಲ. ಹರ್ಷಗುಪ್ತಾ ಅವರು ಡಿಸಿ ಆಗಿದ್ದ ಸಂದರ್ಭದಲ್ಲಿ ಸದರಿ ಜಾಗವನ್ನು ಬಿ ಖರಾಬು ಅಂತ ಡಿಸಿ ಕೋರ್ಟ್ ತೀರ್ಪು ನೀಡಿತು. ಬಳಿಕ ಬಂದ ಡಿಸಿ ವಸ್ತ್ರದ್ ಅವರು ರಾಜವಂಶಸ್ಥರ ಜಾಗ ಅಂತ ಬರೆದರು. ಅವರೇ ತಮ್ಮ ತೀರ್ಪನ್ನು ವಾಪಸ್ ಪಡೆದು ಬಿ ಖರಾಬು ಎಂದಿದ್ದಾರೆ.

ಶಿಖಾ ಅವರು ಮೊದಲ ಬಾರಿ ನೋಟಿಸ್ ಕೊಟ್ಟರು
ಡಿಸಿ ಶಿಖಾ ಅವರು ಮೊದಲ ಬಾರಿ ನೋಟಿಸ್ ಕೊಟ್ಟರು, ಆ ನೋಟಿಸ್ ಆಧಾರದ ಮೇಲೆ ಮಾಲೀಕತ್ವದ ಹಕ್ಕು ಪ್ರತಿಪಾದಿಸಿ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದೆವು. ಜೂನ್ ನಲ್ಲಿ ಹೈಕೋರ್ಟಿನಿಂದ ತೀರ್ಪು ಬಂದಿದ್ದು, ಸದರಿ ಜಾಗ ನಮ್ಮದು ಅಂತ ಆದೇಶಿಸಲಾಗಿದೆ. ಈಗ ಅಲ್ಲಿ ಎಷ್ಟು ಜಾಗ ಇದೆಯೋ ಎಂಬುದು ಗೊತ್ತಿಲ್ಲ. ಹೊಸದಾಗಿ ಸರ್ವೇ ಮಾಡಿಕೊಡಿ ಅಂತ ಕಂದಾಯ ಇಲಾಖೆಗೆ ಪತ್ರ ಬರೆದಿದ್ದೇವೆ. ಇದುವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲಎಂದರು.

ಕಾನೂನು ತಜ್ಞರ ಸಲಹೆ ಪಡೆದು ತೀರ್ಮಾನ
ಹೆಲಿಪ್ಯಾಡ್ ಜಾಗ, ಬೇಲಿ ವ್ಯಾಜ್ಯದ ಬಗ್ಗೆ ಮುಂದೆ ಏನು ಮಾಡಬೇಕು ಅಂತ ಕಾನೂನು ತಜ್ಞರ ಸಲಹೆ ಪಡೆದು ತೀರ್ಮಾನ ಕೈಗೊಳ್ಳುತ್ತೇವೆ.
ಎಲ್ಲ ಸರ್ಕಾರಗಳೂ ತೊಂದರೆ ಕೊಟ್ಟಿವೆ, ಈಗಿನ ಸರ್ಕಾರ ತಟಸ್ಥವಾಗಿದೆ. ನಮ್ಮ ಆಸ್ತಿಗಳ ವಿಚಾರದಲ್ಲಿ ಎಲ್ಲ ಸರ್ಕಾರಗಳೂ ತೊಂದರೆ ಕೊಟ್ಟಿವೆ. ಆದರೆ, ಯಾವುದೇ ಸರ್ಕಾರ ಅಥವಾ ವ್ಯಕ್ತಿಯನ್ನು ನಾನು ದೂಷಿಸುವುದಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು. ರಾಜಕೀಯ ನನಗೆ ಸೂಟ್ ಆಗತ್ತೆ, ಆದರೆ ರಾಜಕೀಯಕ್ಕೆ ನಾನು ಸೂಟ್ ಆಗಲ್ಲ, ಈ ಹಿಂದೆಯೂ ಹಲವಾರು ಬಾರಿ ಸ್ಪಷ್ಟನೆ ಕೊಟ್ಟಿದ್ದೆ, ಪದೇ ಪದೇ ಅದನ್ನೇ ಹೇಳೋದಿಕ್ಕೆ ಇಷ್ಟ ಇಲ್ಲ ಎಂದರು.

ಬೆಂಗಳೂರು ಮತ್ತು ಮೈಸೂರು ಅರಮನೆ ಮಾಲೀಕತ್ವ
ಅರಮನೆಗೆ ಸಂಬಂಧಿಸಿದ 10ಕ್ಕೂ ಹೆಚ್ಚು ವ್ಯಾಜ್ಯಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಬೆಂಗಳೂರು ಮತ್ತು ಮೈಸೂರು ಅರಮನೆ ಮಾಲೀಕತ್ವದ ವಿಚಾರ ಸುಪ್ರೀಂಕೋರ್ಟ್ನಲ್ಲಿ ಬಾಕಿ ಇದೆ. ಮುಂಬೈ ಪಾರ್ಪರ್ಟಿ ಓನರ್ಸ್ ಅಸೋಸಿಯೇಶನ್ ಸುಪ್ರೀಂಕೋರ್ಟ್ನಲ್ಲಿ ವ್ಯಾಜ್ಯ ಹೂಡಿದೆ. ಈ ಪ್ರಕರಣದಲ್ಲಿ 9 ನ್ಯಾಯಾಧೀಶರ ಸಂವಿಧಾನ ಪೀಠ ತೀರ್ಪು ನೀಡಬೇಕಿದೆ. ಆ ತೀರ್ಪುನ್ನು ಆಧರಿಸಿ ನಮ್ಮ ವ್ಯಾಜ್ಯಗಳು ಇತ್ಯರ್ಥ ಆಗಬೇಕಿದೆ. ನಾವು ಡೆಲ್ಲಿಯಲ್ಲಿ ಇದ್ದರೆ ವ್ಯಾಜ್ಯಗಳು ಬೇಗ ಬರೆಹರಿಯುತ್ತಿದ್ದವು. ಮೈಸೂರಿನಲ್ಲೇ ಇರುವುದರಿಂದ ವಿಳಂಬ ಆಗುತ್ತಿರಬಹುದು ಎಂದು ಅಭಿಪ್ರಾಯಪಟ್ಟರು.












Click it and Unblock the Notifications