ಪಾಲಕರು ಹಣ ನೀಡಿಲ್ಲವೆಂದು ನೇಣಿಗೆ ಶರಣಾದ ಮೈಸೂರಿನ ವಿದ್ಯಾರ್ಥಿ
ಮೈಸೂರು, ಆಗಸ್ಟ್ 22: ತಂದೆ, ತಾಯಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ನಿವಾಸಿ ಶಿವನಾಯಕ ಚಂದ್ರಮ್ಮ ದಂಪತಿ ಪುತ್ರ ಕೃಷ್ಣಮೂರ್ತಿ(16) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಈತ ಗಾವಡಗೆರೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ. ತಂದೆ, ತಾಯಿ ಬಡವರಾಗಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೂ ಮಗನನ್ನು ಚೆನ್ನಾಗಿ ಓದಿಸಬೇಕೆಂಬ ಕನಸು ಕಂಡಿದ್ದರು.
ಕಾಲೇಜಿಗೆ ತೆರಳುತ್ತಿದ್ದ ಕೃಷ್ಣಮೂರ್ತಿ ಇತರೆ ವಿದ್ಯಾರ್ಥಿಗಳಂತೆ ತಾನೂ ಹಣ ಖರ್ಚುಮಾಡುತ್ತ, ದುಬಾರಿ ವಸ್ತು ಖರೀದಿಸಿ, ಎಲ್ಲರಂತೇ ಅನುಕೂಲವಂತನಾಗಿ ಬದುಕಬೇಕೆಂಬ ಆಸೆ. ಆದರೆ ಮನೆಯಲ್ಲಿ ಬಡತನವಿದ್ದುದರಿಂದ ಮತ್ತು ಕೂಲಿ ಕೆಲಸ ಮಾಡಿಯೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇದ್ದುದರಿಂದ ಮಗ ಕೇಳಿದಾಗಲೆಲ್ಲ ಹಣ ಹೊಂದಿಸಿ ಕೊಡುವುದು ಹೆತ್ತವರಿಗೆ ಕಷ್ಟವಾಗಿ ಪರಿಣಮಿಸಿತ್ತು.
ಈ ನಡುವೆ ತನಗೆ ಹಣ ಬೇಕೆಂದು ಹೆತ್ತವರಲ್ಲಿ ಕೃಷ್ಣಮೂರ್ತಿ ಕೇಳಿದ್ದಾನೆ. ಈ ಸಂದರ್ಭ ಆತನ ತಾಯಿ ಚಂದ್ರಮ್ಮ ಕೂಲಿ ಮಾಡಿದ ಹಣ ಇನ್ನೂ ಸಿಕ್ಕಿಲ್ಲ. ಹಣ ಸಿಕ್ಕಿದ ತಕ್ಷಣ ನೀಡುವುದಾಗಿ ಬುದ್ಧಿವಾದ ಹೇಳಿ ಕೆಲಸಕ್ಕೆ ತೆರಳಿದ್ದಾರೆ.
ಆದರೆ ಮಗ ಕೃಷ್ಣಮೂರ್ತಿ ಹಣವಿಲ್ಲದೆ ಕಾಲೇಜಿಗೆ ತೆರಳಲು ಸಾಧ್ಯವಿಲ್ಲ ಎಂದು ಮನೆಯ ಹಿಂಭಾಗದಲ್ಲಿದ್ದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.