ಇದು ರಾಜ್ಯದಲ್ಲೇ ಮೊದಲು, ಪುಸ್ತಕ ನೋಡಿ ಪರೀಕ್ಷೆ ಬರೆದ ಮೈಸೂರು ಮಕ್ಕಳು
ಮೈಸೂರು, ಆಗಸ್ಟ್ 8 : ಮೈಸೂರಿನ ರಾಮಕೃಷ್ಣನಗರ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯ ನೃಪತುಂಗ ಕನ್ನಡ ಶಾಲೆಯಲ್ಲಿ 'ತೆರೆದ ಪುಸ್ತಕ ಪರೀಕ್ಷೆ'ಯ ಪ್ರಥಮ ಪ್ರಯೋಗ ನಡೆಯಿತು. 150 ಮಕ್ಕಳು ಪುಸ್ತಕ ನೋಡಿ, ಪರೀಕ್ಷೆ ಬರೆದರು.
ಪಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರು 'ತೆರೆದ ಪುಸ್ತಕ ಪರೀಕ್ಷೆ'ಯನ್ನು ಜಾರಿಗೆ ತರುವ ಚಿಂತನೆ ಇದೆ ಎಂದಿದ್ದು, ರಾಜ್ಯವ್ಯಾಪಿ ಈ ಬಗ್ಗೆ ಪರ- ವಿರೋಧ ಚರ್ಚೆಗಳು ನಡೆದಿವೆ. ತೆರೆದ ಪುಸ್ತಕ ಪರೀಕ್ಷೆಯಿಂದ ಅನುಕೂಲ ಮತ್ತು ಅನನುಕೂಲವನ್ನು ಅರಿಯುವ ಸಲುವಾಗಿ ನೃಪತುಂಗ ಕನ್ನಡ ಶಾಲೆಯಲ್ಲಿ ಪುಸ್ತಕ ನೋಡಿ, ಪರೀಕ್ಷೆ ಬರೆಯುವ ಪ್ರಯೋಗ ನಡೆಯಿತು.
ಶಾಲೆಯ 150 ಮಕ್ಕಳು ತೆರೆದ ಪುಸ್ತಕ ಪರೀಕ್ಷೆಯನ್ನು ಖುಷಿಯಿಂದ ಬರೆದರು. ಬಹುತೇಕ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಕಾಣುತ್ತಿರಲಿಲ್ಲ. 5 ಮತ್ತು 6ನೇ ತರಗತಿ ಮಕ್ಕಳು ಕನ್ನಡ, 7ನೇ ತರಗತಿ ವಿದ್ಯಾರ್ಥಿಗಳು ಹಿಂದಿ, 8ನೇ ತರಗತಿ ಮಕ್ಕಳು ಸಮಾಜ ವಿಜ್ಞಾನ, 9ನೇ ತರಗತಿ ವಿದ್ಯಾರ್ಥಿಗಳು ಇಂಗ್ಲಿಷ್ ಮತ್ತು 10ನೇ ತರಗತಿ ಮಕ್ಕಳು ವಿಜ್ಞಾನ ವಿಷಯಗಳ 25 ಅಂಕಗಳಿಗೆ ಕಿರು ಪರೀಕ್ಷೆಯನ್ನು ಬರೆದರು.

ಈ ಬಗ್ಗೆ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಸ.ರ.ಸುದರ್ಶನ, ಮಕ್ಕಳು ನೆನಪಿನ ಸಾಂಪದ್ರಾಯಿಕ ಪರೀಕ್ಷೆ ಬರೆಯುತ್ತಿದ್ದಾರೆ. ನಾವು 2 ವರ್ಷಗಳ ಹಿಂದೆಯೇ ತೆರೆದ ಪುಸ್ತಕ ಪರೀಕ್ಷೆ ನಡೆಸಬೇಕೆಂದು ಯೋಚಿಸಿದ್ದೆವು. ಸಾಧ್ಯವಾಗಿರಲಿಲ್ಲ. ಶಿಕ್ಷಣ ಸಚಿವರು ತೆರೆದ ಪುಸ್ತಕ ಪರೀಕ್ಷೆಯ ಚಿಂತನೆ ಇದೆ ಎಂಬ ಹೇಳಿಕೆಯ ಬಳಿಕ ರಾಜ್ಯದಲ್ಲಿ ಪ್ರಥಮ ಬಾರಿಗೆ ಪ್ರಯೋಗ ಮಾಡಿದ್ದೇವೆ ಎಂದರು.
ಸಾಂಪ್ರದಾಯಿಕ ಪರೀಕ್ಷೆಯ ಉತ್ತರ ಪತ್ರಿಕೆಗಳೊಂದಿಗೆ ತೆರೆದ ಪುಸ್ತಕ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ತಾಳೆ ನೋಡಿ, ಒಂದು ತೌಲನಿಕ ವರದಿಯನ್ನು ಸಿದ್ಧಪಡಿಸಿ, ಮಾಧ್ಯಮಗಳು ಮತ್ತು ಸರಕಾರಕ್ಕೆ ಸಲ್ಲಿಸಲು ಸಿದ್ಧತೆ ಮಾಡಿದ್ದೇವೆ. ಇದಕ್ಕೆ 10 ದಿನಗಳ ಕಾಲಾವಕಾಶ ಬೇಕು ಎಂದು ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕಿ ಸೀತಾಕುಮಾರಿ, ತೆರೆದ ಪುಸ್ತಕ ಪರೀಕ್ಷೆಯಿಂದ ಮಕ್ಕಳಲ್ಲಿ ಪರೀಕ್ಷೆಯ ಭಯ ಹೋಗುತ್ತದೆ. ಶಿಕ್ಷಕರು ನೋಟ್ಸ್ ಕೊಡುವ ಅಗತ್ಯ ಇರುವುದಿಲ್ಲ. ಪಠ್ಯದಲ್ಲಿರುವ ಪ್ರಶ್ನೆಗಳನ್ನು ಬಿಟ್ಟು, ಯೋಚಿಸಿ ಬರೆಯುವಂತಹ ಪ್ರಶ್ನೆಗಳನ್ನು ಪರೀಕ್ಷೆಗೆ ನೀಡಿದರೆ ಮಕ್ಕಳು ಪುಸ್ತಕ ನೋಡಿಯೂ ಯೋಚಿಸಿ ಬರೆಯುತ್ತಾರೆ. ಈ ಪರೀಕ್ಷಾ ಪದ್ಧತಿಯಿಂದ ಪಾಠದ ಸನ್ನಿವೇಶವನ್ನು ಗ್ರಹಿಸುವ ಮತ್ತು ಆಲೋಚಿಸುವ ಸಾಮರ್ಥ್ಯ ಬರಲಿದೆ ಎಂದರು.












Click it and Unblock the Notifications