ದಸರಾ ವಸ್ತು ಪ್ರದರ್ಶನದ ಟೆಂಡರ್ ಕಥೆ ಅಧೋಗತಿ !
ಮೈಸೂರು, ಸೆಪ್ಟೆಂಬರ್ 22 : ನಾಡಿನ ಸಂಸ್ಕೃತಿ, ಐತಿಹ್ಯ, ಅಭಿವೃದ್ಧಿ ಕಾರ್ಯಗಳು, ಯೋಜನೆಗಳು, ಸ್ಮಾರಕಗಳು, ಕೈಗಾರಿಕೆ ಬೆಳವಣಿಗೆ ಇವುಗಳನ್ನು ದೃಶ್ಯ ರೂಪದಲ್ಲಿ ಅನಾವರಣಗೊಳಿಸುವ ಹಾಗೂ ಮನರಂಜನೆ ಮತ್ತು ಬೌದ್ಧಿಕ ಚಿಂತನೆಗೆ ಹಚ್ಚುವ ಅನೇಕ ಆಕರ್ಷಕ ಮಳಿಗೆಗಳನ್ನು ಪ್ರಸ್ತುತಪಡಿಸುವ ದಸರಾ ವಸ್ತುಪ್ರದರ್ಶನಕ್ಕೆ ಈ ಬಾರಿ ಆರಂಭದಲ್ಲೇ ತೊಡಕು ಎದುರಾಗಿದೆ.
ಮೈಸೂರು ಅರಮನೆಯ ಮುಂಭಾಗದಲ್ಲೇ ಇರುವ 80 ಎಕರೆ ವಸ್ತು ಪ್ರದರ್ಶನ ಮೈದಾನ, ಸಾರ್ವಜನಿಕರಿಗೆ ದಸರಾ ಆಚರಣೆಯ ಪ್ರಮುಖ ಆಕರ್ಷಣೆಯಾಗಿದೆ. ಈ ಹಿನ್ನೆಲೆ ಉದ್ಘಾಟನೆ ದಿನವೇ ಎಲ್ಲ ಮಳಿಗೆಗಳೂ ಆರಂಭವಾಗಿರುವಂತೆ ನೋಡಿಕೊಳ್ಳಿ' ಎಂಬ ಮುಖ್ಯಮಂತ್ರಿಗಳ ಆದೇಶದ ಪಾಲನೆಗಾಗಿ ತಿಂಗಳ ಮೊದಲೇ ಸಿದ್ಧತೆಗಳನ್ನು ಅಧಿಕಾರಿಗಳು ಆರಂಭಿಸಿದ್ದರೂ ಈಗ ಟೆಂಡರ್ ಪ್ರಕ್ರಿಯೆಯಲ್ಲಿ ಹಿನ್ನಡೆಯಾಗಿದೆ.
ಪೂರ್ವ ನಿಗದಿಯಂತೆ ಸೆ.18ರಂದು ತಾಂತ್ರಿಕ ಬಿಡ್ ತೆರೆದು, ಸೆ.21ಕ್ಕೆ ಆರ್ಥಿಕ ಬಿಡ್ ಅಂತಿಮ ಗೊಳಿಸಿ ಸೆ.24ರಂದು ಕಾರ್ಯಾದೇಶ ನೀಡಬೇಕಿತ್ತು. ಮರು ಟೆಂಡರ್ ಪ್ರಕ್ರಿಯೆಯಲ್ಲಿ ಟೆಂಡರ್ ಸಲ್ಲಿಕೆಗೆ ಸೆ.28 ಕೊನೆ ದಿನ. ನಂತರ ತಾಂತ್ರಿಕ ಬಿಡ್, ಆರ್ಥಿಕ ಬಿಡ್ ಅಂತಿಮಗೊಳಿಸಿ ಕಾರ್ಯಾದೇಶ ನೀಡಬೇಕಾಗುತ್ತದೆ. ಇದಕ್ಕೆ ಕನಿಷ್ಠ 2 ದಿನಗಳಾದರೂ ಆಗುತ್ತದೆ. ಆಗ ದಸರಾ ಆರಂಭಕ್ಕೆ 10 ದಿನಗಳಷ್ಟೇ ಉಳಿದಿರುತ್ತವೆ.

ಮೊದಲ ಟೆಂಡರ್ ಕರೆದಾಗ ಬಂದದ್ದು ಕೇವಲ ಒಂದೇ ಅರ್ಜಿ. ಆದ್ದರಿಂದ ಎರಡನೇ ಟೆಂಡರ್ ಆಹ್ವಾನಿಸಿದ್ದು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ 90 ದಿನಗಳ ದಸರಾ ವಸ್ತು ಪ್ರದರ್ಶನದ ಗುತ್ತಿಗೆಯ ಕನಿಷ್ಠ ಮೊತ್ತವನ್ನು 6.99 ಕೋಟಿ ರೂ.ಗಳಿಗೆ (ನಿಖರವಾಗಿ 6,99,30,000 ರೂ.ಗಳಿಗೆ) ನಿಗದಿಪಡಿಸಿದೆ. ವಸ್ತು ಪ್ರದರ್ಶನ ಮಳಿಗೆಗಳು, ಮನರಂಜನಾ ತಾಣ, ಪ್ರವೇಶದ್ವಾರದ ಹಕ್ಕು ಹಾಗೂ ವಾಹನ ನಿಲುಗಡೆ ಪ್ರದೇಶದ ಗುತ್ತಿಗೆ ಎಲ್ಲದಕ್ಕೂ ಸೇರಿದಂತೆ ಒಂದೇ ಟೆಂಡರ್ ಆಹ್ವಾನಿಸಲಾಗಿದೆ.
ಒಟ್ಟಾರೆಯಾಗಿ ಟೆಂಡರ್ ಗೆ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದಕ್ಕೆ ಪ್ರದರ್ಶನ ಮಾರಾಟಗಾರರು ಆಸಕ್ತಿ ಕಡಿಮೆಯಾಗುತ್ತಿರುವುದು ಕಾರಣ ಎಂದು ಹೇಳುತ್ತಿದ್ದರೆ. ಅಧಿಕಾರಿಗಳು ಮತ್ತೊಂದು ಸುತ್ತಿನ ಅಲ್ಪಾವಧಿಯ ಟೆಂಡರ್ ಗಳನ್ನು ಆಹ್ವಾನಿಸಿದ್ದಾರೆ.












Click it and Unblock the Notifications