ಮೈಸೂರಿನಲ್ಲಿ ದಾಖಲೆಯ ಬಿಸಿಲು:ಹಣ್ಣುಗಳು, ಎಳನೀರಿನ ಮೊರೆ ಹೋದ ಜನರು
ಮೈಸೂರು, ಮಾರ್ಚ್ 7: ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಕಳೆದೊಂದು ವಾರದಿಂದ ಗರಿಷ್ಠ ತಾಪಮಾನ 35.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಒಂದೇ ಸಮನೆ ತಾಪಮಾನ ಏರಿಕೆಯಾಗುತ್ತಿದ್ದು, ಸಾಂಸ್ಕೃತಿಕ ನಗರಿ ಇದರಿಂದ ಹೊರತಾಗಿಲ್ಲ.
ಬೆಳಗ್ಗೆ 10ರ ವೇಳೆಗಾಗಲೇ ಬಿಸಿಯ ಶಾಖ ಹೆಚ್ಚಿ, ಸೂರ್ಯ ಅಸ್ತಮಿಸಿದ ಬಳಿಕ ನಿಧಾನವಾಗಿ ತಾಪಮಾನ ಇಳಿಕೆಯಾಗುತ್ತಿದೆ. ಬಿಸಿಲ ಬೇಗೆಗೆ ಜನರೂ ಬಸವಳಿದು ಹೋಗಿದ್ದಾರೆ. ಜನರು ಮಾತ್ರವಲ್ಲ , ಬೆಳೆಗಳೂ ಒಣಗಲು ಆರಂಭಿಸಿವೆ. ನದಿಗಳು ನಿಧಾನಕ್ಕೆ ಬತ್ತಲು ಆರಂಭಿಸಿವೆ. ಮೂಲೆ ಸೇರಿದ್ದ ಟೇಬಲ್ ಫ್ಯಾನ್ಗಳು ಹೊರಬಂದು ಸದ್ದು ಮಾಡುತ್ತಿವೆ.
ಎಚ್ಚರ ! ತೀವ್ರ ಉಷ್ಣಾಂಶ, ಬೆಂಗಳೂರಲ್ಲಿ ಶೇ 15ರಷ್ಟು ವೈರಲ್ ಸೋಂಕು
ಮಳೆಗಾಲ ಮುಗಿದ ಬಳಿಕ ಕೊಡೆಗಳಿಗೆ ವಿಶ್ರಾಂತಿ ಸಿಕ್ಕಿತ್ತು. ಅವು ಕೂಡ ಈಗ ಆಚೆ ಬಂದಿವೆ. ಮಹಿಳೆಯರು ಹಾಗೂ ಮಕ್ಕಳು ಕೊಡೆ ಹಿಡಿದು ಸಾಗುವ ದೃಶ್ಯ ಸಾಮಾನ್ಯವಾಗಿದೆ. ಡಾಂಬರ್ ಅಥವಾ ಕಾಂಕ್ರೀಟ್ ರಸ್ತೆಯಲ್ಲಿ ಮಧ್ಯಾಹ್ನದ ವೇಳೆ ಸಾಗಿದರೆ ಬಿಸಿಲ ಪ್ರಖರತೆ ಮುಖಕ್ಕೆ ರಾಚುತ್ತಿದೆ.
ಬೀದಿಬದಿ ವ್ಯಾಪಾರಿಗಳು, ಬಿಸಿಲಿಗೆ ಮೈಯೊಡ್ಡಿ ಕೆಲಸ ಮಾಡುವ ಕಾರ್ಮಿಕರ ಪರಿಸ್ಥಿತಿ ಹೇಳತೀರದು. ದ್ವಿಚಕ್ರ ವಾಹನ ಸವಾರರಿಗೆ ಟ್ರಾಫಿಕ್ ಸಿಗ್ನಲ್ನಲ್ಲಿ ಒಂದೆರಡು ನಿಮಿಷ ಕಾಯುವುದು ಕೂಡ ಕಷ್ಟಕರ ಎನಿಸುತ್ತಿದೆ. ಸಿಗ್ನಲ್ ಬಿದ್ದರೆ ಎಲ್ಲಿ ನೆರಳು ಇದೆ ಎಂದು ಹುಡುಕಾಡುವ ಪರಿಸ್ಥಿತಿ ಎದುರಾಗಿದೆ. ಮುಂದೆ ಓದಿ...
ಹಣ್ಣುಗಳ ಮೊರೆ ಹೋದ ಜನ
ಬೇಸಿಗೆಯ ಬಿಸಿ ಏರುತ್ತಿರುವಂತೆಯೇ ಜನರು ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಎಲ್ಲೆಡೆ ಎಳನೀರಿಗೆ ಬೇಡಿಕೆ ಬಂದಿದೆ. ಕಲ್ಲಂಗಡಿ ವ್ಯಾಪಾರವೂ ಜೋರಾಗಿದೆ. ಕೋಲ್ಡ್ ವಾಟರ್ಗೆ ಸ್ಥಳೀಯರು ಹಾಗೂ ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ.
ಹದ್ದಿನ ಕಣ್ಣಿಟ್ಟ ಅರಣ್ಯ ಇಲಾಖೆ
ಇನ್ನು ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಅರಣ್ಯ ಪ್ರದೇಶವಿದೆ. ಬೇಸಿಗೆ ವೇಳೆಯಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಬೆಂಕಿ ಅವಘಡಗಳು ಸಂಭವಿಸುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದೆ. ಅರಣ್ಯ ಸಿಬ್ಬಂದಿ ಅಗತ್ಯ ಪರಿಕರಗಳೊಂದಿಗೆ ಸನ್ನದ್ಧರಾಗಿದ್ದಾರೆ. ಅಪ್ಪಿತಪ್ಪಿಯೂ ಒಂದು ಕಿಡಿಹೊತ್ತಿದರೂ ಅತ್ತ ದೌಡಾಯಿಸಿ ಬೆಂಕಿ ಶಮನಗೊಳಿಸುವ ಕೆಲಸ ನಡೆಯುತ್ತಿದೆ.
ಇನ್ನೂ ಎರಡು ವಾರ ಬಿಸಿಲಲ್ಲಿ ಬೇಯಲಿದೆ ಬೆಂಗಳೂರು
ಬಣಗುಡುತ್ತಿರುವ ಪ್ರವಾಸಿ ತಾಣಗಳು
ಒಂದೆಡೆ ಪರೀಕ್ಷೆಯ ಜ್ವರ, ಮತ್ತೊಂದೆಡೆ ಬಿಸಿಲ ತಾಪ. ಹೀಗಾಗಿ, ಮೈಸೂರಿನ ಪ್ರವಾಸಿ ತಾಣಗಳಲ್ಲಿ ಒಂದು ವಾರದಿಂದ ಪ್ರವಾಸಿಗರು ಕಾಣಿಸುತ್ತಿಲ್ಲ. ಬಂದವರು ಮಧ್ಯಾಹ್ನದ ವೇಳೆಯಲ್ಲಿ ಹೊರ ಬರುತ್ತಿಲ್ಲ. ವಸತಿ ಗೃಹ, ರೆಸಾರ್ಟ್ ಹಾಗೂ ಹೋಂಸ್ಟೇಗಳಲ್ಲೇ ಉಳಿಯುತ್ತಿದ್ದಾರೆ. ಇತ್ತ ಪ್ರವಾಸಿಗರಿಲ್ಲದೇ ಪ್ರವಾಸಿ ತಾಣಗಳು ಬಣಗುಡುತ್ತಿವೆ.
ಮುಂಜಾಗ್ರತಾ ಕ್ರಮ ವಹಿಸಿ
ಮಾರ್ಚ್ ಆರಂಭದಲ್ಲೇ ದಿನೇ ದಿನೇ ಉಷ್ಣಾಂಶ ಹೆಚ್ಚಾಗುತ್ತಿದ್ದು, 36, 38 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ದಾಖಲಾಗುತ್ತಿದೆ. ಮುಂದಿನ ಏಪ್ರಿಲ್ ತಿಂಗಳಲ್ಲಿ ಈ ಉಷ್ಣಾಂಶ ಇನ್ನಷ್ಟು ಹೆಚ್ಚುವ ಸೂಚನೆಗಳಿವೆ. ಹೀಗಾಗಿ, ಜಿಲ್ಲೆಯಲ್ಲಿ ಮಲೇರಿಯಾ, ಜ್ವರ, ವಾಂತಿ, ಕಾಲರಾ, ಡೆಂಗೆ ಮತ್ತು ಚಿಕೂನ್ ಗೂನ್ಯಾ ಸೇರಿದಂತೆ ನಾನಾ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಹೆಚ್ಚಿಸಿದೆ.ಈ ಹಿನ್ನೆಲೆಯಲ್ಲಿ ಜನರು ಮುಂಜಾಗೃತಾ ಕ್ರಮ ವಹಿಸಬೇಕಾದ ಅಗತ್ಯ ಕೂಡ ಇದೆ.
ಬೆಂಗಳೂರಲ್ಲಿ ಹೆಚ್ಚಿದ ಗರಿಷ್ಠ ತಾಪಮಾನ, ಎಷ್ಟಿದೆ, ಎಷ್ಟು ಹೆಚ್ಚಳವಾಗಬಹುದು?