ಅತ್ಯಾಚಾರ ಪ್ರಕರಣದಲ್ಲಿ ಉಲ್ಟಾ ಹೊಡೆದ ಬಾಲಕಿ ಮೇಲೂ ಕೇಸ್

ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಆರಂಭದಲ್ಲಿ ಸುಳ್ಳು ಸಾಕ್ಷಿ ನುಡಿದಿದ್ದು, ಆರೋಪಿ ಪಾರಾಗಲು ಸಹಾಯ ಮಾಡಿರುವುದು ಬೆಳಕಿಗೆ ಬಂದಿದೆ.ಹೀಗಾಗಿ ಬಾಲಕಿ ವಿರುದ್ಧ ಸಿಆರ್‌ಪಿಸಿ ಕಲಂ 340 ಅಡಿಯಲ್ಲಿ ಕೇಸ್ ದಾಖಲಿಸಲು ಜಡ್ಜ್ ಸೂಚನೆ ನೀಡಿದ್ದಾರೆ.

ಮೈಸೂರು, ಏಪ್ರಿಲ್ 21 : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕನಿಗೆ 7 ವರ್ಷ ಜೈಲು, ಸಹಕರಿದವನಿಗೆ 2 ವರ್ಷ ಜೈಲು ಹಾಗೂ ಸುಳ್ಳು ಸಾಕ್ಷಿ ನುಡಿದಿದ್ದ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿಯ ಮೇಲೆ ದೂರು ದಾಖಲಿಸುವಂತೆ ನಗರದ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಏನಿದು ಘಟನೆ?

2012ರ ಮಾರ್ಚ್ 9ರಂದು ಬಯಲು ಬಹಿರ್ದೆಸೆಗೆ ಹೋಗಿದ್ದ 16 ವರ್ಷದ ಬಾಲಕಿಯನ್ನು ಮಂಡನಹಳ್ಳಿ ಗ್ರಾಮದ ಮಹದೇವಸ್ವಾಮಿ ಎಂಬಾತ ಬೈಕ್‌ನಲ್ಲಿ ಅಪಹರಿಸಿ ಅತ್ಯಾಚಾರವೆಸಗಿದ್ದ. ಇವನಿಗೆ ಅದೇ ಗ್ರಾಮದ ಲಿಂಗಣ್ಣ ಸ್ವಾಮಿ ಎಂಬಾತ ಸಹಾಯ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪುರ ಪೊಲೀಸರು ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನಗರದ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಪ್ಪಿತಸ್ಥ ಮಹದೇವಸ್ವಾಮಿಗೆ 7 ವರ್ಷ ಕಠಿಣ ಶಿಕ್ಷೆ, 60 ಸಾವಿರ ದಂಡ ವಿಧಿಸಿದೆ. ಇವನಿಗೆ ಸಹಾಯ ಮಾಡಿದ ಲಿಂಗಣ್ಣ ಸ್ವಾಮಿಗೆ 2 ವರ್ಷ ಜೈಲು, 10 ಸಾವಿರ ದಂಡ ವಿಧಿಸಿದೆ. ದಂಡದ ಹಣದಲ್ಲಿ ಶೇ 70 ರಷ್ಟನ್ನು ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿಗೆ ನೀಡುವಂತೆ ನ್ಯಾಯಧೀಶರು ಆದೇಶ ನೀಡಿದ್ದಾರೆ.

ಬಾಲಕಿಯ ವಿರುದ್ಧವೂ ಪ್ರಕರಣ!

ಬಾಲಕಿಯ ವಿರುದ್ಧವೂ ಪ್ರಕರಣ!

ವಿಶೇಷ ಎಂದರೆ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಆರಂಭದಲ್ಲಿ ಸುಳ್ಳು ಸಾಕ್ಷಿ ನುಡಿದಿದ್ದು, ಆರೋಪಿ ಪಾರಾಗಲು ಸಹಾಯ ಮಾಡಿರುವುದು ಪಾಟಿ ಸವಾಲಿನಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಸರ್ಕಾರಿ ಅಭಿಯೋಜಕರು ಬಾಲಕಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಧೀಶರಿಗೆ ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಬಾಲಕಿಯ ವಿರುದ್ಧ ಸಿಆರ್‌ಪಿಸಿ ಕಲಂ 340 ಅಡಿಯಲ್ಲಿ ಸುಳ್ಳು ಸಾಕ್ಷಿ ನುಡಿದ ಪ್ರಕರಣವನ್ನು ದಾಖಲಿಸುವಂತೆ ಆದೇಶಿಸಿದ್ದಾರೆ.

ಹಾವು ಕಚ್ಚಿ ಬಾಲಕ ಸಾವು

ಹಾವು ಕಚ್ಚಿ ಬಾಲಕ ಸಾವು

ಮಲಗಿರುವ ಸಮಯದಲ್ಲಿ ಹಾವು ಕಚ್ಚಿದ ಪರಿಣಾಮ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ. ಮೃತನನ್ನು ನಗರದ ಮರೀಗೌಡ ಬಡಾವಣೆ ನಿವಾಸಿ ವರಲಕ್ಷ್ಮಿ ಮತ್ತು ಮೂರ್ತಿ ದಂಪತಿಗಳ ಮಗ ನರಸಿಂಹ (8) ಎಂದು ಗುರುತಿಸಲಾಗಿದೆ.

ನರಸಿಂಹ ಮನೆಯಲ್ಲಿ ಗುರುವಾರ ರಾತ್ರಿ ಮಲಗಿದ್ದ ಸಂದರ್ಭ ಈ ಘಟನೆ ನಡೆದಿದೆ. ಹಾವು ಕಚ್ಚಿದ ವಿಷಯ ತಿಳಿಯುತ್ತಿದ್ದಂತೆ ಪೋಷಕರು ರಾತ್ರಿ ವೇಳೆಯಲ್ಲಿಯೇ ನರಸಿಂಹನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆ ನರಸಿಂಹ ಕೊನೆಯುಸಿರೆಳೆದಿದ್ದಾನೆ. ದಂಪತಿಗೆ ಇರುವುದು ಒಬ್ಬನೇ ಮಗ ಎಂದು ತಿಳಿದು ಬಂದಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಕೊಲೆ ಪ್ರಕರಣ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಕೊಲೆ ಪ್ರಕರಣ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆಗೈದ ಮೂವರು ಆರೋಪಿಗಳಿಗೆ ಮೈಸೂರಿನ ನಾಲ್ಕನೇ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

2012ರ ಅಕ್ಟೋಬರ್ 19ರಂದು ಬೆಳಗಿನ ಜಾವ 3.30ಕ್ಕೆ ಕೆ.ಜಿ.ಕೊಪ್ಪಲ್ ನಿವಾಸಿ ಯೋಗೀಶ್ ಎಂಬವನನ್ನು ಆತನ ಸ್ನೇಹಿತರಾದ ಕೆ.ಜಿ.ಕೊಪ್ಪಲು ನಿವಾಸಿಗಳಾದ ರವಿ. ಹರೀಶ್ ಹಾಗೂ ಜಾಂಬೊರವಿ ಎಂಬವರು ಮಚ್ಚುಗಳಿಂದ ತಲೆಗೆ ಹೊಡೆದು ಸಾಯಿಸಿದ್ದರು.

ಕೊಲೆ ಘಟನೆಯನ್ನು ಮೃತ ಯೋಗೀಶನ ತಂದೆ ಸುರೇಶ್, ಮಂಜು ಎಂಬವರು ಪ್ರತ್ಯಕ್ಷ ನೋಡಿದ್ದು, ಅವರು ನೀಡಿದ ಸಾಕ್ಷ್ಯದನ್ವಯ ಸತ್ರ ನ್ಯಾಯಾಧೀಶ ಎನ್.ಕೃಷ್ಣಯ್ಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ಐದು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ತಪ್ಪಿದಲ್ಲಿ ಮತ್ತೆ ಮೂರು ತಿಂಗಳು ಸಾದಾ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶ ಮಾಡಿದ್ದಾರೆ.

ಜೂಜು ಅಡ್ಡೆ ಮೇಲೆ ದಾಳಿ: ಮೂವರ ಬಂಧನ

ಜೂಜು ಅಡ್ಡೆ ಮೇಲೆ ದಾಳಿ: ಮೂವರ ಬಂಧನ

ಅಕ್ರಮ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಕೆಆರ್ ಎಸ್ ಠಾಣೆಯ ಪೊಲೀಸರು ಜೂಜಿನಲ್ಲಿ ತೊಡಗಿದ್ದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮೊಗರಹಳ್ಳಿಯಲ್ಲಿ ಅಕ್ರಮ ಜೂಜು ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿ ಅವರಿಂದ 18,650ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ. ಕೆ.ಆರ್.ಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವರ್ತಕರಿಂದ ಹಣ ವಸೂಲಿ: ಎಎಸ್ಐ ಅಮಾನತು

ವರ್ತಕರಿಂದ ಹಣ ವಸೂಲಿ: ಎಎಸ್ಐ ಅಮಾನತು

ಬೀದಿ ಬದಿ ವರ್ತಕರಿಂದ ಹಣ ವಸೂಲು ಮಾಡುತ್ತಿದ್ದ ಆರೋಪದ ಮೇರೆಗೆ ಮೈಸೂರಿನ ದೇವರಾಜ ಸಂಚಾರ ಠಾಣೆಯ ಎಎಸ್ಐ ರಂಗಸ್ವಾಮಿಯವರನ್ನು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರುದ್ರಮುನಿ ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ.

ವರ್ತಕರೊಬ್ಬರು ಇವರು ಹಣ ವಸೂಲು ಮಾಡುತ್ತಿದ್ದ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ಕುರಿತು ತನಿಖೆ ನಡೆಸುವಂತೆ ಆಯುಕ್ತರು ರುದ್ರಮುನಿ ಅವರಿಗೆ ಸೂಚಿಸಿದ್ದರು. ಅದರಂತೆ ಮೊಬೈಲ್ ನಲ್ಲಿದ್ದ ದೃಶ್ಯಗಳು ನಿಜವೆಂದು ಸಾಬೀತಾದ ಹಿನ್ನೆಲೆಯಲ್ಲಿ ರಂಗಸ್ವಾಮಿ ಅವರನ್ನು ಅಮಾನತುಪಡಿಸಲಾಗಿದೆ.

ಕ್ರಿಕೆಟ್ ಬೆಟ್ಟಿಂಗ್- ಎಂಟು ಮಂದಿಯ ಬಂಧನ

ಕ್ರಿಕೆಟ್ ಬೆಟ್ಟಿಂಗ್- ಎಂಟು ಮಂದಿಯ ಬಂಧನ

ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಎಂಟು ಮಂದಿಯನ್ನು ಮೈಸೂರು ನಗರ ಸಿಸಿಬಿ ಹಾಗೂ ಆಲನಹಳ್ಳಿ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಟೀಚರ್ಸ್ ಕಾಲನಿಯ ಮೋಹನ್(31),ಯರಗನಹಳ್ಳಿಯ ಸಂದೀಪ್ (28), ನಾಡನಹಳ್ಳಿಯ ಮಹೇಶ್(27), ಜೆ.ಎಸ್.ಎಸ್.ಲೇಔಟ್ ನ ಪ್ರಕಾಶ್ ಬಿ.(21), ಆಲನಹಳ್ಳಿಯ ಸಾಗರ್(26), ಎಸ್.ವಿ.ನಗರದ ಗಗನ್ ದೀಪ್ (22), ಸಿದ್ದಾರ್ಥನಗರದ ಈಶ್ವರರಾವ್( 32), ಕುವೆಂಪುನಗರದ ಪ್ರಮೋದ್(32) ಎಂದು ಗುರುತಿಸಲಾಗಿದೆ.

ಇವರು ಆಲನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಮನೆಯೊಂದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಗುಜರಾತ್ ಲಯನ್ಸ್ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆಸುತ್ತಿದ್ದರು.ಈ ಕುರಿತು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಈ ಎಂಟು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಿಂದ ಕ್ರಿಕೆಟ್ ಬೆಟ್ಟಿಂಗ್ ಗೆ ಬಳಸಲಾದ ನಾಲ್ಕು ಬೈಕ್, ಸ್ಯಾಮ್ ಸಂಗ್ ಎಲ್ ಇಡಿ ಟಿವಿ, 10 ಮೊಬೈಲ್ ಗಳು , 2 ಡೈರಿ, ನಗದು ಹಣ 53,870 ರೂ. ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+