ಮೈಸೂರಿನ ಶೂಟೌಟ್ ಪ್ರಕರಣ: 6 ಮಂದಿ ಪೊಲೀಸ್ ಸಿಬ್ಬಂದಿ ವರ್ಗಾವಣೆ
ಮೈಸೂರು, ಮೇ 20: ಕಳೆದ ಮೂರು ದಿನಗಳ ಹಿಂದೆ ಹಣ ಬದಲಾವಣೆ ಹಿನ್ನೆಲೆಯಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಸಿಐಡಿ ಪೊಲೀಸರ ತಂಡ ಈಗಾಗಲೇ ಆರಂಭಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಕಡತಗಳನ್ನು ಪೊಲೀಸ್ ಅಧಿಕಾರಿಗಳು ಸಿಐಡಿ ತಂಡಕ್ಕೆ ನೀಡಿದ್ದಾರೆ ಎನ್ನಲಾಗಿದೆ. ಕಳೆದ ಗುರುವಾರ ರದ್ದಾದ ಹಳೇ ನೋಟುಗಳ ಖರೀದಿಗೆ ಬಂದಿದ್ದಾರೆ ಎಂಬ ಆರೋಪದ ಮೇಲೆ ವಿಜಯನಗರ ಠಾಣೆಯ ಇನ್ಸ್ ಪೆಕ್ಟರ್ ಕುಮಾರ್ ಹಾಗೂ ಅವರ ತಂಡದವರು ಪಂಜಾಬಿನ ಸುಖವಿಂದರ್ ಸಿಂಗ್ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.
ಮೈಸೂರಿನ ಶೂಟೌಟ್ ಪ್ರಕರಣಕ್ಕೆ ದಿನಕ್ಕೊಂದು ತಿರುವು
ಈ ಸಂಬಂಧ ಸರ್ವೋಚ್ಛ ನ್ಯಾಯಾಲಯ ಮತ್ತು ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಯಂತೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲು ನಿರ್ಧರಿಸಲಾಗಿತ್ತು. ಅದರಂತೆ ಸಿಐಡಿ ಪೊಲೀಸರ ತಂಡಕ್ಕೆ ಪ್ರಕರಣದ ಕೆಲ ದಾಖಲೆಗಳನ್ನು ನಗರ ಪೊಲೀಸರು ನೀಡಿದರು.
ಇದೀಗ ಸಿಐಡಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಬಾತ್ಮೀದಾರರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.ಇನ್ನು ವಿಜಯನಗರ ಠಾಣೆಯ ಎಲ್ಲಾ ಸಿಬ್ಬಂದಿ ವರ್ಗಾವಣೆ ಮಾಡುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರಾದ ಕೆ.ಟಿ.ಬಾಲಕೃಷ್ಣರಿಂದ ಆದೇಶ ನೀಡಿದ್ದಾರೆ.
ಮೈಸೂರಿನಲ್ಲಿ ಶೂಟೌಟ್ ಪ್ರಕರಣ: ಬೆಳಕಿಗೆ ಬಂತು ಸ್ಫೋಟಕ ಮಾಹಿತಿ
ಎಎಸ್ಐ ವೆಂಕಟೇಶ್ಗೌಡ, ಪೇದೆಗಳಾದ ಮಹೇಶ್, ವೀರಭದ್ರ ಸೇರಿದಂತೆ ಗರುಡ-13 ವಾಹನದ ಪೇದೆ ಈರಣ್ಣ ಹಾಗೂ ಗರುಡ ಡ್ರೈವರ್ ಪುನಿತ್ ಕೂಡ ವರ್ಗಾವಣೆ ಮಾಡಲಾಗಿದೆ. ಶೂಟೌಟ್ ನಡೆದ ಸ್ಥಳದಲ್ಲಿದ್ದ ಒಟ್ಟು 6 ಮಂದಿ ವಿಜಯನಗರ ಠಾಣೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಕುಮಾರ್ ಅವರು ಹೊರತುಪಡಿಸಿ ಮಿಕ್ಕೆಲ್ಲರನ್ನು ಮೈಸೂರಿನ ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ.
ಮೈಸೂರು ಪೊಲೀಸ್ ಎನ್ ಕೌಂಟರ್ ತನಿಖೆ ಸಿಐಡಿಗೆ
ಇನ್ನು ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದ ತಂಡವು ತನಿಖೆ ಹಿನ್ನೆಲೆಯಲ್ಲಿ ಹಿನಕಲ್ ಹೊರವರ್ತುಲ ರಸ್ತೆ ಬಳಿಯ ಅಪಾರ್ಟ್ಮೆಂಟ್ ಬಳಿ ತೆರಳಿ ಘಟನೆ ನಡೆದ ಸ್ಥಳ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದರು. 'ಎಐಆರ್' ಸೇರಿದಂತೆ ಎಲ್ಲಾ ದಾಖಲೆಗಳನ್ನು ಮೈಸೂರು ನಗರ ಪೊಲೀಸರಿಂದ ವಶಕ್ಕೆ ಪಡೆದ ಸಿಐಡಿ ಪೊಲೀಸರು, ಹಲವು ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.