ಹೊಸವರ್ಷಾಚರಣೆ: ಸಾಂಸ್ಕೃತಿಕ ನಗರಿಯತ್ತ ಪ್ರವಾಸಿಗರ ದಂಡು
ಮೈಸೂರು, ಡಿಸೆಂಬರ್ 30 : ಪ್ರವಾಸೋದ್ಯಮದ ಕೇಂದ್ರ ಬಿಂದುವಾದ ಮೈಸೂರು ನಗರಕ್ಕೆ ವರ್ಷದಲ್ಲಿ ಮೂರು ಬಾರಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ವಿಶ್ವವಿಖ್ಯಾತ ದಸರಾ ಮಹೋತ್ಸವ, ಹೊಸವರ್ಷ ಹಾಗೂ ಬೇಸಿಗೆ ರಜೆ ಸಂದರ್ಭದಲ್ಲಿ ಪ್ರವಾಸಿಗರು ಹೆಚ್ಚು ಆಗಮಿಸುತ್ತಾರೆ.
ಮಕ್ಕಳಿಗೆ ಕ್ರಿಸ್ ಮಸ್ ರಜೆ ಹಾಗೂ ಸತತವಾಗಿ 3 ದಿನ ಸರ್ಕಾರಿ ನೌಕರರಿಗೆ ರಜೆ ಇರುವ ಹಿನ್ನೆಲೆಯಲ್ಲಿ ನಗರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದು, ಪ್ರತಿ ವರ್ಷಕ್ಕಿಂತ ಈ ಬಾರಿ ಪ್ರವಾಸಿಗರು ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಲಗ್ಗೆ ಇಟ್ಟಿದ್ದಾರೆ.
ಮೈಸೂರಿನಲ್ಲಿ ಕಣ್ಮನ ಸೆಳೆಯುತ್ತಿದೆ ಮಾಗಿ ಉತ್ಸವ
ಇತ್ತೀಚೆಗೆ ಕೇರಳದಲ್ಲಿ ಸಂಭವಿಸಿದ ಜಲಪ್ರಳಯದ ಹಿನ್ನೆಲೆಯಲ್ಲಿ ಪ್ರವಾಸಿಗರು ಕೇರಳ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ. ಇದು ಮೈಸೂರಿನ ಮೇಲೆ ಒತ್ತಡಕ್ಕೆ ಕಾರಣವಾಗಿದೆ. ನಗರದ ಎಲ್ಲೆಂದರಲ್ಲಿ ಪ್ರವಾಸಿಗರನ್ನು ಹೊತ್ತ ವಾಹನಗಳ ಓಡಾಟ ಕಂಡು ಬಂದಿದೆ.
ನಗರಕ್ಕೆ ಒಮ್ಮೆಲೇ ಆಗಮಿಸಿದ್ದ ನೂರಾರು ಸಂಖ್ಯೆಯ ವಾಹನಗಳಿಂದ ಕೆಲವು ಕಡೆ ಸಂಚಾರ ದಟ್ಟಣೆ ಆಗಿತ್ತು. ಅರಮನೆ ಪೂರ್ವದ್ವಾರ (ದೊಡ್ಡಕೆರೆ ಮೈದಾನದ ಕಡೆ) ದ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ಬೆಳಿಗ್ಗೆಯಿಂದ ಸಂಜೆವರೆಗೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದಾರೆ. ಪ್ರವಾಸೋದ್ಯಮದ ಕೇಂದ್ರ ಬಿಂದು ಅರಮನೆ ಮತ್ತು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ.
ಹೊಸ ವರ್ಷದಲ್ಲಿ ಕೆಎಸ್ಆರ್ಟಿಸಿ ಬಸ್ ದರ ಹೆಚ್ಚಳ?
ಮೈಸೂರಿನ ಸಂತ ಫಿಲೋಮಿನಾ ಚರ್ಚ್, ಚಾಮುಂಡಿಬೆಟ್ಟ, ಕೆ.ಆರ್.ಎಸ್. ಮುಂತಾದ ಪ್ರೇಕ್ಷಣೀಯ ಸ್ಥಳಗಳಿಗೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಮೈಸೂರಿನಲ್ಲಿ ವಿಶಿಷ್ಟವಾಗಿ ಮಾಗಿ ಉತ್ಸವ ಆಯೋಜಿಸಿರುವುದು, ಅರಮನೆಯಲ್ಲಿ ನಡೆಯುತ್ತಿರುವ ಫಲಪುಷ್ಪಪ್ರದರ್ಶನ, ದಸರಾ ವಸ್ತುಪ್ರದರ್ಶನ, ಸಾಹಸ ಪ್ರದರ್ಶನವಾದ ಏರೋ ಮೋಟಾರಿಂಗ್, ಮೈಸೂರು ಕಲಾ ಉತ್ಸವ ಇವುಗಳು ಪ್ರವಾಸಿಗರನ್ನು ಮೈಸೂರಿನತ್ತ ಹೆಚ್ಚಾಗಿ ಸೆಳೆಯುತ್ತಿದೆ.
ವಾಹನಗಳ ನಿಲುಗಡೆಗೆ ಚಾಲಕರು ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದ್ದು, ಅರಮನೆಗೆ ಬಂದ ವಾಹನಗಳಿಗೆ ಎರಡು ಮೂರು ಕಡೆ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ಹೊತ್ತುತಂದ ವಾಹನಗಳಿಂದ ವಸ್ತುಪ್ರದರ್ಶನದ ವಾಹನ ನಿಲುಗಡೆ ಆವರಣ ತುಂಬಿತ್ತು.
ಡಿ.31ರಂದು ತಡರಾತ್ರಿ 2 ಗಂಟೆವರೆಗೂ ಪಾರ್ಟಿಗೆ ಅವಕಾಶ
ಕೆಲವರು ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಿದ್ದರು. ಮೃಗಾಲಯಕ್ಕೆ ಭಾನುವಾರ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದರೆ, ಅರಮನೆಗೆ ಭೇಟಿ ನೀಡಿದವರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.