Get Updates
Get notified of breaking news, exclusive insights, and must-see stories!

ಮೈಸೂರು ದಸರಾ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ "ದಸರಾ ದರ್ಶನ"

ಮೈಸೂರು, ಸೆಪ್ಟೆಂಬರ್‌, 28: ಗ್ರಾಮೀಣ ಜನತೆಗೆ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ವೀಕ್ಷಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ "ದಸರಾ ದರ್ಶನ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹಸಿರು ಬಾವುಟ ತೋರುವ ಮೂಲಕ ಚಾಲನೆ ನೀಡಿದರು.

ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದರು ಕಾರ್ಯಕ್ರಮಕ್ಕೆ "ದಸರಾ ದರ್ಶನ" ಕಾರ್ಯಕ್ರಮ ಚಾಲನೆ ನೀಡಲಾಯಿತು. ನಂತರ ಮಾತನಾಡಿದ ಸಚಿವರು, ಮೈಸೂರು ಜಿಲ್ಲೆಯ 9 ತಾಲೂಕಿನ ಮಹಿಳೆಯರು, ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಗ್ರಾಮೀಣ ಜನತೆಯನ್ನು ಕರೆತಂದು ದಸರಾವನ್ನು ದರ್ಶನ ಮಾಡಿಸುತ್ತಿರುವುದು ನಿಜಕ್ಕೂ ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.

ಜನರಿಗೆ ದಸರಾ ದರ್ಶನ ವ್ಯವಸ್ಥೆ

ಇಂದಿನಿಂದ 3 ದಿನಗಳ ಕಾಲ ಸಾರಿಗೆ ನಿಗಮದ 81 ವಾಹನಗಳಲ್ಲಿ ಸುಮಾರು 4,455 ಜನರನ್ನು ಕರೆತರಲಾಗುವುದು. ಜನರಿಗೆ ಅರಮನೆ, ಮೃಗಾಲಯ, ಜೆ.ಕೆ.ಗ್ರೌಂಡ್ಸ್‌ನಲ್ಲಿ ನಡೆಯುವ ಮಹಿಳಾ ಮತ್ತು ಮಕ್ಕಳ ದಸರಾ ವೀಕ್ಷಿಸಲು, ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ದಸರಾ ಆಕರ್ಷಣೆಯಾದ ದೀಪಾಲಂಕಾರವನ್ನು ತೋರಿಸಿ ಪುನಃ ಮರಳಿ ಅವರವರ ತಾಲೂಕುಗಳಿಗೆ ಮರಳಿ ಬಿಡಲಾಗುತ್ತದೆ ಎಂದರು.

Mysuru Dasara; Dasara Darshan by Karnataka State Road Transport department

ದಸರಾಗೆ ಸಾರಿಗೆ ಸಚಿವರು ಗೈರಾದ ಕುರಿತಂತೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಲಾಖೆಯವರು ಸಚಿವರಿಗೆ ಆಹ್ವಾನ ನೀಡಿದ್ದರು. ಶ್ರೀರಾಮುಲು ಅವರು ಯಾವ ಕಾರ್ಯಕ್ರಮಕ್ಕೂ ಗೈರಾದ ಉದಾಹರಣೆಗಳೇ ಇಲ್ಲ. ಆದರೆ ಅನಿವಾರ್ಯ ಕಾರಣಗಳಿಂದ ಗೈರಾಗಿದ್ದರು ಎಂದು ಹೇಳಿದರು.

ಕಾರ್ಯಕ್ರಮ ಉಸ್ತುವಾರಿಗೆ 21 ಸಮಿತಿಗಳ ರಚನೆ

ದಸರಾ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನೆರವೇರಿಸಲು 21 ಸಮಿತಿಗಳನ್ನು ರಚಿಸಿದ್ದು, ಅವುಗಳ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಲಾಗಿದೆ. ಅವ್ಯವಸ್ಥೆ ಆಗದಂತೆ ಸಾರ್ವಜನಿಕರ ಸಲಹೆ ಸೂಚನೆ ಪಡೆದುಕೊಳ್ಳಲಾಗುತ್ತಿದೆ. ಅಧಿಕಾರಿಗಳ ಜೊತೆಗೆ ಅಧಿಕಾರೇತರರನ್ನು ಸೇರಿಸಿಕೊಂಡು ದಸರಾ ಯಶಸ್ವಿಗೊಳಿಸುವಂತೆ ಸೂಚಿಸಲಾಗಿದೆ. ನಿನ್ನೆ ರಾತ್ರಿ ನಗರ ಪ್ರದಕ್ಷಿಣೆ ಮಾಡಿ ಸ್ವಚ್ಚತಾ ಕಾರ್ಯ ಪರಿಶೀಲನೆ ನಡೆಸಲಾಯಿತು. ಸ್ವಚ್ಚತಾ ಟೀಂ ಬೆಳಗ್ಗೆ 3 ಗಂಟೆಯವರೆಗೆ ಕೆಲಸ ಮಾಡುತ್ತಿದ್ದಾರೆ. ಆಹಾರ ಮೇಳಕ್ಕೆ 25 ರಿಂದ 30 ಸಾವಿರಕ್ಕೂ ಹೆಚ್ಚು ಜನ ಆಗಮಿಸಿದ್ದರು. ಯಾವುದೇ ಆಹಾರ ಪದಾರ್ಥ ವ್ಯರ್ಥ ಆಗಿಲ್ಲ. ಅಂದಿನ ದಿನದ ಕಸವನ್ನು ಅಂದೇ ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ರಾಮದಾಸ್, ನಾಗೇಂದ್ರ, ಉಪಮೇಯರ್ ರೂಪಾ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಮೂಡಾ ಮಾಜಿ ಅಧ್ಯಕ್ಷರಾದ ರಾಜೀವ್, ಜಂಗಲ್ಸ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ಮಾಜಿ ಅಧ್ಯಕ್ಷರಾದ ಅಪ್ಪಣ್ಣ, ಮೈಸೂರು ನಗರ ಬಿಜೆಪಿ ಅಧ್ಯಕ್ಷರಾದ ಶ್ರೀವತ್ಸ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

2008ರಿಂದ ದಸರಾ ದರ್ಶನ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ. ಪ್ರತಿ ವಾಹನದಲ್ಲಿ ಒಬ್ಬ ಮೇಲ್ವಿಚಾರಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.

Mysuru Dasara; Dasara Darshan by Karnataka State Road Transport department

ಆಹಾರ ಮೇಳದ ವಿಶೇಷತೆ

ಇನ್ನು ದಸರಾದಲ್ಲಿ ಹೆಚ್ಚಿನ ಜನರು ಸೇರುವ ಜಾಗಗಳಲ್ಲಿ ಆಹಾರ ಮೇಳವೂ ಒಂದಾಗಿದೆ. ಆಹಾರ ಮೇಳದಲ್ಲಿ ಮೇಲುಕೋಟೆ ಪುಳಿಯೊಗರೆ, ಉತ್ತರ ಕರ್ನಾಟಕದ ಖಡಕ್ ರೊಟ್ಟಿ , ಶೇಂಗಾ ಚಟ್ನಿ, ದಾವಣೆಗೆರೆ ಬೆಣ್ಣೆ ದೋಸೆ, ಬಿಸಿಬಿಸಿ ಮಟ್ಕಾ ಬಿರಿಯಾನಿ, ಲೆಗ್ ಪೀಸ್, ಜೊತೆಗೆ ಸಿರಿಧಾನ್ಯಗಳ ತಿನಿಸುಗಳು ಬಾಯಲ್ಲಿ ನೀರು ತರಿಸುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿದೆ. ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ದಸರಾ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಬುಡಕಟ್ಟು ಆಹಾರ ಪದ್ಧತಿ (ಬೊಂಬು ಬಿರಿಯಾನಿ), ಜಾನಪದ ಪದ್ಧತಿ, ಮೈಸೂರು, ಕೊಡಗು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ಉತ್ತರ ಭಾರತ, ಕೇರಳ, ಆಂಧ್ರ ಶೈಲಿ, ಕರಾವಳಿ ಶೈಲಿ, ತೆಲಂಗಾಣ, ಮಹಾರಾಷ್ಟ್ರ, ಚೈನೀಸ್, ಐಸ್ ಕ್ರೀಮ್, ಬಂಗಾರಪೇಟೆ ಹಾಗೂ ಬಾಂಬೆ ಚಾಟ್ಸ್‌, ಬೇಕರಿ, ಬಿಸ್ಕತ್ತುಗಳು, ಹಣ್ಣು ಮತ್ತು ಹಣ್ಣಿನ ರಸಗಳು, ಸಾಂಪ್ರದಾಯಿಕ ಸಿಹಿ ತಿನಿಸು, ತಂಪು ಪಾನೀಯಗಳು, ಚಾಟ್ಸ್, ಔಷಧಿ ಆಹಾರ ಶೈಲಿಯ ತಿಂಡಿ ತಿನಿಸುಗಳು, ಸಿರಿಧಾನ್ಯದ ಜೊತೆಗೆ ಸಾವಯವ ಆಹಾರಗಳು ಭೋಜನ ಪ್ರಿಯರನ್ನು ಆಕರ್ಷಿಸುತ್ತಲೇ ಇವೆ.

ಬೊಂಬು ಬಿರಿಯಾನಿಗೆ ಡಿಮ್ಯಾಂಡ್‌

ಕಳೆದ ಎಂಟು ವರ್ಷದಿಂದ ಆದಿವಾಸಿಗಳು ಬೊಂಬು ಬಿರಿಯಾನಿ ಹಾಗೂ ಬಿದಿರು ಅಕ್ಕಿ ಪಾಯಸವನ್ನು ಆಹಾರ ಮೇಳದಲ್ಲಿ ಮಾರಾಟ ಮಾಡುತ್ತಾರೆ. ಆದರೆ ಈ ವರ್ಷ ಬುಡಕಟ್ಟು ಮಹಿಳೆ ರಾಷ್ಟ್ರಪತಿ ಆಗಿದ್ದು, ದಸರಾ ಉದ್ಘಾಟನೆ ನೆರವೇರಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೊಂಬು ಬಿರಿಯಾನಿ ಬಗ್ಗೆ ವಿಚಾರಿಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+