ನಂಜುಂಡೇಶ್ವರನ ಸನ್ನಿಧಿಗೆ ರಾಜಕಾರಣಿಗಳ ದಂಡು
ಮೈಸೂರು, ನವೆಂಬರ್ 9: ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಗೆ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಹೆಚ್ಚೆಚ್ಚು ಬರುತ್ತಿದ್ದಾರೆ.
ನಂಜನಗೂಡಿಗೆ ಆಗಮಿಸಿ ನಂಜುಂಡೇಶ್ವರನ ದರ್ಶನ ಪಡೆದು ಹರಕೆ ಕಟ್ಟಿಕೊಂಡರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಜನವಲಯದಲ್ಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು ಅದರಲ್ಲೂ ರಾಜಕಾರಣಿಗಳಂತೂ ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತಾರೆ. ಕಳೆದ ವಿಧಾನಸಭಾ ಚುನಾವಣೆ ಬಳಿಕ ಮತ್ತು ಇತ್ತೀಚೆಗಿನ ರಾಜಕೀಯ ಬೆಳವಣಿಗೆ ನಂತರವಂತೂ ನಂಜುಂಡೇಶ್ವರನ ಸನ್ನಿಧಿಗೆ ಭೇಟಿ ನೀಡುವ ಘಟಾನುಘಟಿ ರಾಜಕಾರಣಿಗಳ ಸಂಖ್ಯೆ ತುಸು ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.
ತಿಹಾರ್ ಜೈಲಿನಿಂದ ಹೊರಬಂದ ಬಳಿಕ ಟೆಂಪಲ್ ರನ್ ನಡೆಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ನಂಜನಗೂಡಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಹೋಗಿದ್ದರು. ಇದಾದ ಬಳಿಕ ಬೆಳಗಾವಿಯ ಸಾಹುಕಾರ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿರವರು ಬಂದು ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ನೆರವೇರಿಸುವಂತೆ ಬೇಡಿಕೊಂಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಅನರ್ಹ ಶಾಸಕರ ಸ್ಥಿತಿ ಡೋಲಾಯಮಾನ ಸ್ಥಿತಿಯಲ್ಲಿದೆ. ಹೀಗಾಗಿ ತಮ್ಮ ಮೇಲೆ ಅನುಗ್ರಹ ತೋರುವಂತೆ ನಂಜುಂಡೇಶ್ವರನ ಮೊರೆ ಹೋಗಿದ್ದು, ನಂಜುಂಡೇಶ್ವರನ ಗರ್ಭ ಗುಡಿಯ ಬಳಿ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಾಲಯದ ಒಳಭಾಗದಲ್ಲಿರುವ ನವಗ್ರಹಗಳಿಗೂ ಪೂಜೆ ಸಲ್ಲಿಸಿ ಹರಕೆ ಹೊತ್ತು ನವಗ್ರಹಗಳ ಸುತ್ತ ಪ್ರದಕ್ಷಿಣೆ ಹಾಕಿ ಸಂಕಷ್ಟ ನಿವಾರಣೆ ಮಾಡುವಂತೆಯೂ ದೇವರಲ್ಲಿ ಭಿನ್ನವಿಸಿಕೊಂಡಿದ್ದಾರೆ. ಇವರು ಬಂದು ಪೂಜೆ ಸಲ್ಲಿಸಿ ತೆರಳಿದ ಬೆನ್ನಲ್ಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪತ್ನಿ ಚೆನ್ನಮ್ಮರೊಂದಿಗೆ ತೆರಳಿ ಕುಟುಂಬ ಸಹಿತ ಭೇಟಿ ನೀಡಿ ಸಂಕಲ್ಪ ಮಾಡಿ ರುದ್ರಾಭಿಷೇಕ ಮಾಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಉಪಚುನಾವಣೆಯೂ ನಡೆಯಲಿರುವುದರಿಂದ ಇನ್ನಷ್ಟು ರಾಜಕಾರಣಿಗಳು ಇಲ್ಲಿಗೆ ಭೇಟಿ ನೀಡಿ ಸಂಕಲ್ಪ ಮಾಡುವ ಸಾಧ್ಯತೆ ಹೆಚ್ಚಿದೆ. ಕಳೆದ ವಿಧಾನ ಸಭಾ ಚುನಾವಣೆ ವೇಳೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿ ಹುಣ್ಣಿಮೆಯಂದು ಆಗಮಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸುವ ಮೂಲಕ ಸಂಕಲ್ಪ ಮಾಡಿಕೊಂಡಿದ್ದನ್ನು ಸ್ಮರಿಸಬಹುದಾಗಿದೆ.

ಸದ್ಯ ಬಹಳಷ್ಟು ರಾಜಕೀಯ ನಾಯಕರು ತಮ್ಮ ಸಂಕಷ್ಟವನ್ನು ಪರಿಹರಿಸಿ, ಮನದ ಬಯಕೆಯನ್ನು ಈಡೇರಿಸುವಂತೆ ಸನ್ನಿಧಿಗೆ ಆಗಮಿಸಿ ಪ್ರಾರ್ಥಿಸಿಕೊಳ್ಳುತ್ತಿರುವುದು ಮಾಮೂಲಿಯಾಗಿದೆ.












Click it and Unblock the Notifications