ಶಿವಕುಮಾರ್ ಜತೆ ಅಂತರ ಕಾಯ್ದುಕೊಂಡಿಲ್ಲ, ಇದು ಮಾಧ್ಯಮ ಸೃಷ್ಟಿ: ಸಿಎಂ
ಮೈಸೂರು, ಆಗಸ್ಟ್ 10 : ಕೆರೆಗಳನ್ನು ಡಿ ನೋಟಿಫಿಕೇಷನ್ ಮಾಡಲು ನಾವು ಮುಂದಾಗಿಲ್ಲ. ಕೆರೆಗಳನ್ನು ಡಿ ನೋಟಿಫಿಕೇಷನ್ ಮಾಡಲು ಹೊರಟಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಅಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೀವಂತ ಕೆರೆಗಳನ್ನು ಡಿ ನೋಟಿಫಿಕೇಷನ್ ಮಾಡಲು ಮುಂದಾಗಿಲ್ಲ. ಹಿಂದೆ ಕೆರೆಗಳಿದ್ದ ಜಾಗದಲ್ಲಿ ಕೊಳೆಗೇರಿಗಳು ತಲೆ ಎತ್ತಿವೆ. ಮತ್ತೆ ಕೆಲವು ಕಡೆ ಬಸ್ ನಿಲ್ದಾಣ ನಿರ್ಮಾಣವಾಗಿವೆ. ಇಂಥವುಗಳನ್ನ ಡಿ ನೋಟಿಫಿಕೇಷನ್ ಮಾಡಿ ಅಂತ ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಆದಾಯ ತೆರಿಗೆ ಅಧಿಕಾರಿಗಳು ಯಾವುದೇ ವ್ಯಕ್ತಿ ಐಟಿ ರಿಟರ್ನ್ ಸಲ್ಲಿಸಿದ್ದಾರೆಯೇ ಎಂದು ಪರಿಶೀಲನೆ ಮಾಡ್ತಾರೆ. ಅದನ್ನೇ ದೊಡ್ಡ ವಿಚಾರ ಅಂತ ಬಿಂಬಿಸಲಾಗುತ್ತಿದೆ. ಎಲ್ಲ ಕಾಲದಲ್ಲೂ ದಾಳಿಗಳು ನಡೆಯುತ್ತಲೇ ಬಂದಿವೆ. ಆದರೆ ಬಿಜೆಪಿ ಅವರು ಕಾಂಗ್ರೆಸ್ ಮಂದಿಯನ್ನು ಗುರಿ ಮಾಡಿ ಐಟಿ ದಾಳಿ ಮಾಡಿಸ್ತಿದ್ದಾರೆ. ಇದು ಬೇಸರದ ಸಂಗತಿ ಎಂದರು.
ನಾವು ಐಟಿ ದಾಳಿಗೆ ಹೆದರೋದಿಲ್ಲ. ಆದಾಯ ತೆರಿಗೆ ದಾಳಿಯು ಗುಜರಾತ್ ರಾಜಕಾರಣಕ್ಕೆ ಸಂಬಂಧಿಸಿದ್ದು, ಕರ್ನಾಟಕದ ಮೇಲೆ ಯಾವುದೇ ಪ್ರಭಾವ ಬೀರಲ್ಲ. ಡಿ.ಕೆ.ಶಿವಕುಮಾರ್ ಜತೆ ನಾನು ಅಂತರ ಕಾಯ್ದುಕೊಂಡಿಲ್ಲ. ಇದು ಮಾಧ್ಯಮಗಳ ಸೃಷ್ಟಿ ಎಂದು ಹೇಳಿದರು.
ಸಚಿವ ಸಂಪುಟ ಪುನರ್ ರಚನೆ ಅತಿ ಶೀಘ್ರದಲ್ಲಿ ನಡೆಯಲಿದೆ ಎಂದ ಅವರು, ವೀರಶೈವ ಮಹಾಸಭಾ ವತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವ ಬಗ್ಗೆ ಮನವಿ ಸಲ್ಲಿಸಿದ್ದರು. ಆದರೆ ಲಿಂಗಾಯತ ಹಾಗೂ ವೀರಶೈವದಲ್ಲಿ ಭಿನ್ನಾಭಿಪ್ರಾಯ ಇರುವ ಕಾರಣಕ್ಕೆ ಒಟ್ಟಾಗಿ ಬನ್ನಿ ಅಂದಿದ್ದೆ ಅಷ್ಟೇ ಎಂದರು.

ಲಿಂಗಾಯತ ಧರ್ಮ ಮಾಡ್ತೀನಿ ಅಂತ ನಾನು ಹೇಳಿಲ್ಲ. ಆದರೆ ಬಿಜೆಪಿಯವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟಕರ ಹೆಸರನ್ನು ಆಗಸ್ಟ್ 12ರಂದು ಘೋಷಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕಾಯಂಗೊಳಿಸುವ ಬಗ್ಗೆ ಭರವಸೆ ನೀಡುವವರೆಗೂ ಸ್ಥಳ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದರು.
ಮೃಗಾಲಯದ 125ನೇ ವರ್ಷಾಚರಣೆ
ಇಲ್ಲಿನ ಮೃಗಾಲಯದ 125ನೇ ವರ್ಷಾಚರಣೆಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೃಗಾಲಯದ ಹೆಬ್ಬಾಗಿಲಲ್ಲಿ ನಿರ್ಮಿಸಿರುವ ಬೃಹತ್ ಶಿಲಾ ಗೋಪುರ ಉದ್ಘಾಟಿಸಿದರು. 125 ವರ್ಷದ ನೆನಪಿಗಾಗಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮುಖ್ಯಮಂತ್ರಿಗೆ ಸಚಿವರು ಹಾಗೂ ಸ್ಥಳೀಯ ಶಾಸಕರು ಸಾಥ್ ನೀಡಿದರು. 1892ರಲ್ಲಿ ಆರಂಭವಾಗಿದ್ದ ಮೃಗಾಲಯಕ್ಕೆ 2017ಕ್ಕೆ 125 ವರ್ಷಗಳು ತುಂಬಿದೆ.












Click it and Unblock the Notifications