ಹನುಮ ಜಯಂತಿಯ ನಿರ್ಬಂಧ ಈದ್ ಮಿಲಾದ್ ಗೂ ಇರಲಿ: ಪ್ರತಾಪ್ ಸಿಂಹ
ಮೈಸೂರು, ಜನವರಿ 27 : "ರೀ ಓಡಿ ಹೋಗುವುದಕ್ಕೆ ಇದೇನು ಮ್ಯಾರಥಾನಾ? ನೀವೇನು ಭಿಕ್ಷೆ ಬೇಡಿ ಮೆರವಣಿಗೆಗೆ ಅವಕಾಶ ನೀಡಿದ್ದೀರಾ?" ಹೀಗೆ ಪೊಲೀಸ್ ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ತರಾಟೆಗೆ ತೆಗೆದುಕೊಂಡ ಘಟನೆ ಹುಣಸೂರಿನಲ್ಲಿ ಶನಿವಾರ ಹನುಮ ಜಯಂತಿ ಕಾರ್ಯಕ್ರಮದಲ್ಲಿ ನಡೆಯಿತು.
ಹನುಮನ ಮೆರವಣಿಗೆ ವೇಳೆ ಮಾಧ್ಯಮದವರನ್ನು ನಿಯಂತ್ರಿಸಲು ಮುಂದಾದ ಪೊಲೀಸರನ್ನು ಸಂಸದ ಪ್ರತಾಪ್ ಸಿಂಹ ತರಾಟೆಗೆ ತೆಗೆದುಕೊಂಡರು. ಮೆರವಣಿಗೆಯಲ್ಲಿ ಓಡಿಕೊಂಡು ಹೋಗಲು ಆಗುತ್ತಾ? ಇದೇನು ಮ್ಯಾರಥಾನಾ? ನೀವೇನು ಭಿಕ್ಷೆ ಬೇಡಿ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ನಮ್ಮ ಭಾವನೆಗೆ ಧಕ್ಕೆಯಾದಲ್ಲಿ ಕೋಪ ಬರುತ್ತದೆ. ಕೋಪ ಬಂದಲ್ಲಿ ಗಲಾಟೆ ನಡೆಯುವುದು ಸಹಜ. ಇದಕ್ಕೆ ಅವಕಾಶ ಕೊಡಬೇಡಿ. ನೀವು ತಿಳಿಸಿದ ಮಾರ್ಗದಲ್ಲೇ ಮೆರವಣಿಗೆ ಹೋಗುತ್ತಿದ್ದೇವೆ. ನಮ್ಮ ಮೇಲೆ ಒತ್ತಡ ಹಾಕಿದರೆ ರಸ್ತೆಯಲ್ಲೇ ಕೂರಬೇಕಾಗುತ್ತದೆ ಎಂದರು.

ಹುಣಸೂರಿನ ಹನುಮ ಜಯಂತಿ ಮೆರವಣಿಗೆಗೆ ಜಿಲ್ಲಾಡಳಿತ ಹಾಕಿದ ನಿರ್ಬಂಧಗಳನ್ನು ಈದ್ ಮಿಲಾದ್ ಮೆರವಣಿಗೆಗೂ ಹಾಕಬೇಕು. ಹಿಂದೂಗಳನ್ನು ಅದರಲ್ಲಿ ಬಳಸಿಕೊಳ್ಳಬೇಕು. ಹನುಮಜಯಂತಿಯಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಭಾಗವಹಿಸಿದ್ದೇನೆ ಎಂದು ಹೇಳಿದರು.
ಹನುಮ ಜಯಂತಿ ಆಚರಣೆಗೆ ವಿಧಿಸಿರುವ ನಿರ್ಬಂಧಗಳನ್ನು ಜಿಲ್ಲಾಡಳಿತವು ಮುಂದಿನ ಎಲ್ಲ ಆಚರಣೆ ವೇಳೆ ಪಾಲನೆ ಮಾಡುಬೇಕು ಹಾಗೂ ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿಯ ನೇತೃತ್ವದಲ್ಲೇ ಈದ್ ಮಿಲಾದ್ ಮೆರವಣಿಗೆ ನಡೆಸಬೇಕು ಎಂದು ಆಗ್ರಹಿಸಿದರು.
ಮೆರವಣಿಗೆಯಲ್ಲಿ ಶಾಸಕ ಪಿ ಮಂಜುನಾಥ್, ಮಾಜಿ ಸಚಿವ ಎಚ್. ವಿಶ್ವನಾಥ್ ಭಾಗಿಯಾದರು. ಸಂಸದ ಪ್ರತಾಪ್ ಸಿಂಹ ತಲೆಗೆ ಕೇಸರಿ ಪೇಟ ತೊಟ್ಟು, ನಂದಿಕಂಬ ಹೊತ್ತು ಕುಣಿದರು.












Click it and Unblock the Notifications