ಮೈಸೂರು: ರೈತ ವಿರೋಧಿ ನಡೆ ಖಂಡಿಸಿ ಪ್ರಧಾನಿ ಪ್ರತಿಕೃತಿ ದಹನ ಚಳುವಳಿ
ಮೈಸೂರು, ಜನವರಿ 09: ರಾಷ್ಟ್ರೀಯ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲ ಅವರ ಹೋರಾಟ ನಿರ್ಲಕ್ಷಿಸುತ್ತಿರುವ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಜನವರಿ 13ರಂದು ಪ್ರಧಾನ ಮಂತ್ರಿ, ಕೇಂದ್ರ ಕೃಷಿ ಮಂತ್ರಿಯ ಪ್ರತಿಕೃತಿ ದಹನ ಚಳುವಳಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೆಹಲಿ ಗಡಿ ಕನೂರಿಯಲ್ಲಿ ಜಗಜಿತ್ ಸಿಂಗ್ ದಲೈವಾಲ 45 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ, ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇದನ್ನು ಖಂಡಿಸಿ ರಾಜ್ಯಾದ್ಯಂತ ರೈತ ಸಂಘಟನೆಗಳಿಂದ ಪ್ರಧಾನಿ ಮೋದಿ ಹಾಗೂ ಕೃಷಿ ಮಂತ್ರಿ ಪ್ರತಿಕೃತಿ ದಹನ ಚಳವಳಿ ನಡೆಸಲಾಗುವುದು ಎಂದರು.

ಜ.14ರಿಂದ 16ರವರೆಗೆ ಹಳ್ಳಿ ಹಳ್ಳಿಗಳಲ್ಲಿ ತಾಲೂಕು ಮಟ್ಟದಲ್ಲಿ ಪಂಜಿನ ಪ್ರತಿಭಟನೆ ಮೂಲಕ ಪ್ರಧಾನಿ ಪ್ರತಿಕೃತಿ ಸುಡಲಾಗುವುದು. ಜ.26ರಂದು ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಎಂಎಸ್ಪಿ ಗ್ಯಾರಂಟಿ ಕಾನೂನು ಜಾರಿ, ರೈತರ ಸಂಪೂರ್ಣ ಸಾಲಮನ್ನಾ, ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ತಾಲೂಕು, ಜಿಲ್ಲಾ ಗ್ರಾಮೀಣ ಕೇಂದ್ರಗಳಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗಂಭೀರ ಎಚ್ಚರಿಕೆ ನೀಡಬೇಕು. ದೇಶದ ರೈತರ ಶಕ್ತಿ ತೋರಿಸಬೇಕು. ದೇಶದ ರೈತರ ಒಳಿತಿಗಾಗಿ ಉಪವಾಸ ಸತ್ಯಾಗ್ರಹದ ಮೂಲಕ ತಮ್ಮ ಪ್ರಾಣ ತ್ಯಾಗ ಮಾಡುತ್ತಿರುವ ದಲೈವಾಲ ಬೆಂಬಲಕ್ಕೆ ನಾವೆಲ್ಲ ರೈತರಾಗಿ ನಿಲ್ಲಬೇಕು ಎಂದು ರೈತರಲ್ಲಿ ಮನವಿ ಮಾಡಲಾಗುವುದು. ಕೃಷಿ ಉತ್ಪನ್ನಗಳಿಗೆ ಎಂಎಸ್ಪಿ ಗ್ಯಾರಂಟಿ ಕಾನೂನು ಜಾರಿ ತರಬೇಕು ಎಂದು ಒತ್ತಾಯಿಸಲು ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಎಂಎಸ್ಪಿ ಖಾತ್ರಿ ಕಾನೂನು ಜಾರಿ ಅವಶ್ಯ ಎಂದು 31 ಜನ ಸಂಸದರ ಸಂಸದೀಯ ಮಂಡಳಿ ನ.18ರಂದು ಎಂಎಸ್ಪಿ ಖಾತ್ರಿ ಕಾನೂನು ಜಾರಿ ಅವಶ್ಯಕ ಎಂದು ವರದಿ ನೀಡಿದೆ.

ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನವಾಬ್ಸಿಂಗ್ ಸಮಿತಿ ನ.22ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಕೃಷಿ ಉತ್ಪನ್ನಗಳಿಗೆ ಎಂಎಸ್ಪಿ ಖಾತ್ರಿ ಕಾನೂನು ಜಾರಿ ಮಾಡುವುದು ಅವಶ್ಯಕ ಎಂದು ವರದಿ ಸಲ್ಲಿಸಿದೆ. ಗುಜರಾತ್ ಮುಖ್ಯಮಂತ್ರಿಯಾಗಿದ ನರೇಂದ್ರ ಮೋದಿ ಅಧ್ಯಕ್ಷತೆಯ ಸಮಿತಿ 2011ರಲ್ಲಿ ಎಂಎಸ್ಪಿ ಗ್ಯಾರಂಟಿ ಕಾನೂನು ರೈತರಿಗೆ ಅತ್ಯವಶ್ಯಕ ಎಂದು ವರದಿ ನೀಡಿದ್ದಾರೆ ಆದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದು ರೈತ ವಿರೋಧಿ ಧೋರಣೆಯಾಗಿದೆ ಎಂದು ಕಿಡಿ ಕಾರಿದರು.












Click it and Unblock the Notifications