ಯಾರಿಗೂ ಜೀವ ಬೆದರಿಕೆ ಹಾಕಿಲ್ಲ: ಸಚಿವ ಮಹದೇವಪ್ಪ ಸ್ಪಷ್ಟನೆ
ಮೈಸೂರು, ಫೆಬ್ರವರಿ 28 : ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮಗನ ವಿರುದ್ಧ ದೂರು ನೀಡಿದ್ದ ದೂರುದಾರನಿಗೆ ಜೀವ ಬೆದರಿಕೆ ಹಾಕಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಮಂಗಳವಾರ, ಕೆ.ಆರ್.ಕ್ಷೇತ್ರದ ನಂಜನಗೂಡು ಮುಖ್ಯರಸ್ತೆಯ ಕುವೆಂಪು ವಿಶ್ವಮಾನವ ಉದ್ಯಾನವನ (ಗನ್ ಹೌಸ್) ವೃತ್ತ ರಸ್ತೆಯ ಪರಿಶೀಲನೆ ನಡೆಸಿದ ಅವರು ಆನಂತರ ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ವಿಚಾರ ತಿಳಿಸಿದರು.[ಲಂಚ ಪ್ರಕರಣದಲ್ಲಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಗೆ ಕಂಟಕ]

''ಜೀವ ಬೆದರಿಕೆ ಹಾಕಿರುವುದಾಗಿ ತನ್ನ ವಿರುದ್ಧ ವದಂತಿ ಎಬ್ಬಿಸಲಾಗಿದೆ. ನನ್ನ ವಿರುದ್ಧ ಆರೋಪ ಮಾಡುತ್ತಿರುವ ವ್ಯಕ್ತಿ ಯಾರು ಎಂಬುದೇ ನನಗೆ ತಿಳಿದಿಲ್ಲ. ನಾನು ಅಂತಹ ಕೆಲಸ ಮಾಡಲ್ಲ. ಆದರೂ ಜೀವ ಬೆದರಿಕೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರ ಇತಿಹಾಸವನ್ನು ಪರಿಶೀಲಿಸಬೇಕಿದೆ'' ಎಂದರು.
ರಸ್ತೆ ಪರಿಶೀಲನೆ ನಂತರ ಮಾತನಾಡಿದ ಸಚಿವರು ರಸ್ತೆ ಅಭಿವೃದ್ಧಿ ಕಾಮಗಾರಿಗೆ 50ಕೋಟಿ ರೂ.ಬಿಡುಗಡೆಯಾಗಿದೆ. ಶಾಶ್ವತವಾದ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದರು. ಯಾವ ರೀತಿ ಕಾಮಗಾರಿಗಳು ನಡೆಯುತ್ತಿವೆ ಎನ್ನುವುದನ್ನು ಕೂಲಂಕಶವಾಗಿ ಪರಿಶೀಲಿಸಿದ ಸಚಿವರು ಮಾಧ್ಯಮದೊಂದಿಗೆ ಮಾತನಾಡಿದರು.
''ಆರು ಮುಕ್ಕಾಲು ಕಿ.ಮೀ.ರಸ್ತೆಯನ್ನು ಕಾಂಕ್ರೀಟ್ ಮಾಡಲಾಗುತ್ತಿದೆ. ಈವರೆಗೆ ಆರು ಕಿ.ಮೀ. ಕಾಂಕ್ರೀಟ್ ರಸ್ತೆ ಮುಗಿದಿದೆ. ಮುಕ್ಕಾಲು ಕಿ.ಮೀ ಬಾಕಿ ಇದೆ. ರಸ್ತೆ ಎಪ್ರಿಲ್ ಒಳಗೆ ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತವಾಗಲಿದೆ. ರಾಮಸ್ವಾಮಿ ವೃತ್ತದಿಂದ ಹಾರ್ಡಿಂಜ್ ವೃತ್ತದವರೆಗೂ ಕಾಮಗಾರಿ ನಡೆಯುತ್ತಿದೆ. ಫುಟ್ ಪಾತ್ ನ್ನು ನಿರ್ಮಿಸಲಾಗುತ್ತಿದೆ ಎಂದರು.












Click it and Unblock the Notifications