ಜಯ ತರುತ್ತಾ ಗ್ರಾಮ ಸ್ವರಾಜ್ ಕಾಂಗ್ರೆಸ್ ಸಮಾವೇಶ?
ಬೆಂಗಳೂರು, ಫೆಬ್ರವರಿ 7 : ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿನ ಗೆಲುವಿಗೆ ಕಾಂಗ್ರೆಸ್ ರಣಕಹಳೆ ಊದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಕ್ಷೇತ್ರದಲ್ಲಿ 'ಗ್ರಾಮ ಸ್ವರಾಜ್' ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಎಲ್ಲಾ ನಾಯಕರು ಸಮಾವೇಶದ ವೇದಿಕೆಯಲ್ಲಿ ಕೈ ಹಿಡಿದು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 'ಗ್ರಾಮ ಸ್ವರಾಜ್' ಕಾಂಗ್ರೆಸ್ ಸಮಾವೇಶದಲ್ಲಿ, ಕೆಪಿಸಿಸಿ ಅಧ್ಯಕ್ಷರು, ಸಚಿವರು, ಹಿರಿಯ ಮುಖಂಡರನ್ನು ಒಂದು ಕಡೆ ಸೇರಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ಗೆ ಚುರುಕು ಮುಟ್ಟಿಸಿದ್ದಾರೆ. ರಾಜ್ಯದಲ್ಲಿ ಎಂದೂ ಬಿಜೆಪಿ ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂಬ ಸಂದೇಶ ಸಾರಿದ್ದಾರೆ. [ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯ ವೇಳಾಪಟ್ಟಿ]
ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆ ತರುವುದರೊಂದಿಗೆ ತಮ್ಮ ಶಕ್ತಿ ಏನು ಎಂಬುದನ್ನು ಪರೋಕ್ಷವಾಗಿ ಜೆಡಿಎಸ್ ಮತ್ತು ಬಿಜೆಪಿಗೆ ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್ನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಮಂತ್ರವನ್ನು ಪಠಿಸುವ ಪ್ರಯತ್ನ ಮಾಡಿದ್ದಾರೆ. [112 ಭರವಸೆಗಳ ಕಾಂಗ್ರೆಸ್ ಪ್ರಣಾಳಿಕೆಯ ಮುಖ್ಯಾಂಶಗಳು]
ರಾಜ್ಯದ 30 ಜಿಲ್ಲಾ ಪಂಚಾಯಿತಿಗಳು ಮತ್ತು 175 ತಾಲೂಕು ಪಂಚಾಯಿತಿಗಳ 3,884 ಕ್ಷೇತ್ರಗಳಿಗೆ ಫೆಬ್ರವರಿ 13 ಮತ್ತು 20ರಂದು ಒಟ್ಟು ಎರಡು ಹಂತದಲ್ಲಿ ಚುನಾವಣೆಗಳು ನಡೆಯಲಿವೆ. ಫೆಬ್ರವರಿ 23ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. 'ಗ್ರಾಮ ಸ್ವರಾಜ್' ಸಮಾವೇಶದ ಮುಖ್ಯಾಂಶಗಳು ಚಿತ್ರಗಳಲ್ಲಿ ನೋಡಿ..... [ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ : ಬಿಜೆಪಿ ಪ್ರಣಾಳಿಕೆ]

'ನಮಗೆ ಅದರ ಬಗ್ಗೆ ಗೊತ್ತಿರಲಿಲ್ಲ'
ಸಮಾವೇಶದ ಭಾಷಣದ ತುಂಬಾ ಬಿಜೆಪಿಯನ್ನು ಜರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಚಿವರು ವಿಧಾನಸೌಧ ಕಾರ್ಯಕಲಾಪದಲ್ಲಿ ನೋಡಿದ ಬ್ಲೂ ಫಿಲಂ ಬಗ್ಗೆ ಹೇಳಿದರು. ಅವರು ನೋಡೋ ತನಕ ನಮಗೆ ಅದರ ಬಗ್ಗೆ ಗೊತ್ತಿರಲಿಲ್ಲ ಎಂದು ಹೇಳಿ ಎಲ್ಲರನ್ನು ಹುಬ್ಬೇರಿಸುವಂತೆ' ಮಾಡಿದರು.

'ಜೆಡಿಎಸ್ ಅಳಿವಿನಂಚಿನಲ್ಲಿದೆ'
'ಕಾಂಗ್ರೆಸ್ ದೇಶ ಮತ್ತು ರಾಜ್ಯದಲ್ಲಿ ಬಲಾಢ್ಯವಾಗಿ ಬೆಳೆದು ನಿಂತಿದೆ. ಜೆಡಿಎಸ್ ಮತ್ತು ಬಿಜೆಪಿ ಅಳಿವಿನಂಚಿನಲ್ಲಿದೆ' ಎಂದು ಹೇಳಿದ ಸಿದ್ದರಾಮಯ್ಯ ಅವರು, 'ಬಿಜೆಪಿ ಗೆಲುವಿಗೆ ಕಾರ್ಯಕರ್ತರು ಅವಕಾಶ ಮಾಡಿಕೊಡಬಾರದು ಎಂದರು ಮತ್ತು ಕಾಂಗ್ರೆಸ್ ಪಕ್ಷವನ್ನು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಿಸಿ' ಎಂದು ಕರೆ ನೀಡಿದರು.

ಸರ್ಕಾರಕ್ಕೆ ಗುದ್ದು ಕೊಟ್ಟ ಪೂಜಾರಿ
ಸಮಾವೇಶದಲ್ಲಿ ಎಲ್ಲರೂ ವಿರೋಧ ಪಕ್ಷಗಳನ್ನು ಬೈಯ್ಯುತ್ತಾ ಚಪ್ಪಾಳೆ ಗಿಟ್ಟಿಸಿಕೊಂಡರೆ ಮಾಜಿ ಸಚಿವ, ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರು ಸರ್ಕಾರಕ್ಕೆ ಗುದ್ದು ಕೊಟ್ಟರು. 'ಕಾರ್ಯಕರ್ತರಿಂದ ಕಾಂಗ್ರೆಸ್ ಉಳಿದಿದೆ' ಎನ್ನುವ ಮೂಲಕ ಸಚಿವರಿಗೆ ಟಾಂಗ್ ಕೊಟ್ಟರು.

'ಸಚಿವರನ್ನು ಸಂಪುಟದಿಂದ ತೆಗೆದುಹಾಕಿ'
ಸಮಾವೇಶದಲ್ಲಿ ಮಾತನಾಡಿದ ಜನಾರ್ದನ ಪೂಜಾರಿ ಅವರು, 'ಸಮರ್ಪಕವಾಗಿ ಕೆಲಸ ಮಾಡದ ಸಚಿವರನ್ನು ಸಂಪುಟದಿಂದ ತೆಗೆದು ಹಾಕಿ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು. ನಾನು ವೇದಿಕೆಗೆ ಬಂದಾಗ ಸಮಾವೇಶ ಖಾಲಿಇತ್ತು ಕಾರ್ಯಕರ್ತರು ಬಂದ ನಂತರ ಕಳೆ ಬಂದಿದೆ. ನೀವಿಲ್ಲದಿದ್ದರೆ ಕಾಂಗ್ರೆಸ್ ಇದೆಯಾ?' ಎಂದು ಕೇಳುವ ಮೂಲಕ ಕಾರ್ಯಕರ್ತರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ಸಚಿವರುಗಳಿಗೆ ಮಾತಿನಲ್ಲೇ ಚುಚ್ಚಿದರು
'ಎಲ್ಲ ಭಾಗ್ಯಗಳನ್ನು ನೀಡುವ ನೀವು ಕಾರ್ಯಕರ್ತರು ಸಚಿವರ ಮನೆಗೆ ಹೋದರೆ ಮಾತನಾಡಲು ತಯಾರಿಲ್ಲ ಅವರನ್ನು ತಿರಸ್ಕಾರದಿಂದ ನೋಡುತ್ತೀರಿ' ಎಂದು ಸಚಿವರುಗಳಿಗೆ ಮಾತಿನಲ್ಲೇ ಚುಚ್ಚಿದ ಪೂಜಾರಿ ಅವರು, ಕೆಲವು ಸಚಿವರಿಗೆ ಇರಿಸು ಮುರಿಸು ಉಂಟು ಮಾಡಿದರು.

5 ಸಮಾವೇಶ ನಡೆಯಲಿದೆ
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಪ್ರಚಾರ ನಡೆಸಲು ಕರ್ನಾಟಕ ಕಾಂಗ್ರೆಸ್ 5 ಬೃಹತ್ ಸಮಾವೇಶಗಳನ್ನು ಆಯೋಜಿಸಲು ನಿರ್ಧರಿಸಿದೆ. ಕಲಬುರಗಿ, ಬಾಗಲಕೋಟೆ, ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಸಮಾವೇಶ ನಡೆಯಲಿದೆ.












Click it and Unblock the Notifications