CM Siddaramaiah: ವಿಪಕ್ಷಗಳ ಪಾದಯಾತ್ರೆಗೆ ಸಿಎಂ ಸಿದ್ದರಾಮಯ್ಯ ಡೋಂಟ್ಕೇರ್!
ಮುಡಾ ಸೈಟು ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷಗಳು ಪಾದಯಾತ್ರೆ ಹೆಸರಿನಲ್ಲಿ ಹೋರಾಟ ಮಾಡುತ್ತಿದ್ದು, ರಾಜೀನಾಮೆಗೆ ಒತ್ತಾಯಿಸಿದೆ. ಬಿಜೆಪಿ-ಜೆಡಿಎಸ್ ಪಾದಯಾತ್ರೆ ಬೆನ್ನಲ್ಲೇ ಕಾಂಗ್ರೆಸ್ ಜನಾಂದೋಲನ ಸಮಾವೇಶ ಮಾಡುತ್ತಾ ವಿಪಕ್ಷಗಳ ಹೋರಾಟವನ್ನು ವಿಫಲವಾಗಿಸಲು ಪ್ರಯತ್ನಿಸುತ್ತಿದೆ. ಇದೆಲ್ಲದರ ನಡುವೆ ಸಿಎಂ ಸಿದ್ದರಾಮಯ್ಯ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ!
ಮಂಗಳವಾರ ಮೈಸೂರಿಗೆ ಬಂದಿರುವ ಸಿಎಂ ಸಿದ್ದರಾಮಯ್ಯ ಯಾವ ರಾಜಕೀಯ ಹೋರಾಟಕ್ಕೂ ತಲೆಕೆಡಿಸಿಕೊಳ್ಳಲದೇ, ಅಂಗರಕ್ಷಕರೂ ಇಲ್ಲದೆ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದರು. ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದಲ್ಲಿ ಶಾಸಕ ನರೇಂದ್ರಸ್ವಾಮಿ ಅವರ ತಂದೆಯವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ನೇರ ಸರಕಾರಿ ಕಾರಿನಲ್ಲಿ ಮೈಸೂರಿಗೆ ಬಂದರು.

ಸಂಜೆ ಎಲ್ಲಾ ಶಿಷ್ಟಾಚಾರಗಳನ್ನು ಬದಿಗೊತ್ತಿ ಹುಣಸೂರಿನ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ ಕಾರು ಏರಿದರು. ಅಲ್ಲಿಂದ ಕುವೆಂಪುನಗರದಲ್ಲಿ ಕಟ್ಟುತ್ತಿರುವ ತಮ್ಮ ಮನೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಅಚ್ಚರಿಯೆಂದರೆ ಸ್ವತಃ ಎಚ್.ಪಿ.ಮಂಜುನಾಥ್ ಅವರೇ ಕಾರು ಚಲಾಯಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ನಗರ ಸಂಚಾರ ಮಾಡಿಸಿದರು.
ಮೈಸೂರಿನಲ್ಲಿ ಸಿದ್ದರಾಮಯ್ಯ ಮನೆ!
ನಾಲ್ಕು ದಶಕಗಳಿಂದ ಸಿದ್ದರಾಮಯ್ಯ ರಾಜಕಾರಣದಲ್ಲಿದ್ದರೂ ಅವರಿಗೆ ಮೈಸೂರಿನಲ್ಲಿ ಸ್ವಂತ ಮನೆ ಇರಲಿಲ್ಲ. ಅದಕ್ಕಾಗಿ ಕಳೆದ ಎರಡು ವರ್ಷದಿಂದ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮನೆ ನಿರ್ಮಾಣದ ಮಾಹಿತಿ ಪಡೆದು ಕಾಮಗಾರಿ ವೀಕ್ಷಿಸಿದರು.
ಬಳಿಕ ಅಲ್ಲಿಂದ ನಗರದ ಕೋರ್ಟ್ ಮುಂಭಾಗ ಇರುವ ಕಿಂಗ್ಸ್ ಕಾಫಿ ಹೋಟೆಲ್ಗೆ ಬಂದು ಕಾರಿನಲ್ಲೇ ಕುಳಿತು ಕಾಫಿ ಕುಡಿದರು. ಮಕ್ಕಳು, ಮಹಿಳೆಯರು ಸಿಎಂ ಜೊತೆ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು. ಯಾವುದೇ ಅಂಗರಕ್ಷಕರಿಲ್ಲದೆ ಸಿಎಂ ಸಹಜವಾಗಿಯೇ ಎಲ್ಲರ ಬಳಿ ಮಾತನಾಡಿ ಅಲ್ಲಿಂದ ಹೊರಟರು.
ಮೈಸೂರು ವಿಶ್ವವಿದ್ಯಾನಿಲಯ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ನಗರದ ಕ್ರಾರ್ಡ್ ಹಾಲ್ ಮುಂಭಾಗ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಮಾಹಿತಿ ಪಡೆದರು. ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ದರಾಮಯ್ಯ ಅವರಿಗೂ ಈ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡುವೆ ಎಂದು ಭರವಸೆ ನೀಡಿದ್ದಾರೆ.












Click it and Unblock the Notifications