ರಾಮ ಮರ್ಯಾದಾ ಪುರುಷೋತ್ತಮನೇ ಅಲ್ಲ ಎಂದ ಭಗವಾನ್ ಸಂದರ್ಶನ
ಮೈಸೂರು, ಜನವರಿ 1: ಆ ವ್ಯಕ್ತಿ ಬಗ್ಗೆ ಹಲವರಿಗೆ ಆಕ್ಷೇಪ ಇದೆ. ಪ್ರಗತಿಪರರಲ್ಲೇ ಅಸಮಾಧಾನ ಇದೆ. "ಇಂಥವರಿಗೆಲ್ಲ್..." ಅಂತಲೇ ಮಾತು ಆರಂಭಿಸುವ, ಟೀಕಿಸುವ ಮಂದಿಗೆ ಉತ್ತರವಾಗಿ ಅವರು ನೀಡುವುದು ಪುಸ್ತಕಗಳನ್ನೇ. ಆ ವ್ಯಕ್ತಿ ಪೊ.ಕೆ.ಎಸ್.ಭಗವಾನ್ ಯಥಾಪ್ರಕಾರ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈಚೆಗೆ ಬಿಡುಗಡೆಯಾದ ಅವರ ಮರು ಮುದ್ರಣವಾದ ಪುಸ್ತಕ ಭಾರೀ ಸದ್ದು ಮಾಡಿದೆ.
'ರಾಮಮಂದಿರ ಏಕೆ ಬೇಡ?' ಎಂಬುದು ಪುಸ್ತಕದ ಹೆಸರು. ಈ ವರೆಗೆ ಮಾಧ್ಯಮಗಳ ಮುಂದೆ ರಾಮನ ಬಗ್ಗೆ ಹೇಳಿದ ವಿಚಾರವನ್ನೇ ಪುಸ್ತಕದಲ್ಲೂ ಬರೆದಿದ್ದಾರೆ. ರಾಮನು ಮದ್ಯಪಾನ ಮಾಡುತ್ತಿದ್ದ. ಆತ ಮಾಂಸಾಹಾರ ಸೇವನೆ ಮಾಡುತ್ತಿದ್ದ. ಮಾನಿನಿಯರ ಜತೆಗೆ ನೃತ್ಯ ಮಾಡುತ್ತಾ ಕಾಲ ಕಳೆಯುತ್ತಿದ್ದ ಎಂಬ ವಿಚಾರವು ಪುಸ್ತಕದಲ್ಲಿದೆ.
ಅಯೋಧ್ಯೆಯಲ್ಲಿ ಮಂದಿರವೂ ಬೇಡ, ಮಸೀದಿಯೂ ಬೇಡ:ಪ್ರೊ.ಕೆ.ಎಸ್. ಭಗವಾನ್
ಇಂಥ ಅಂಶವೆಲ್ಲ ಒಳಗೊಂಡ ಪುಸ್ತಕ ಸದ್ಯಕ್ಕೆ ಬಹಳ ಚರ್ಚೆಯ ವಿಷಯವಾಗಿದೆ. ಭಗವಾನ್ ಪ್ರತಿ ಸಲ ಹಿಂದೂಗಳ ಧಾರ್ಮಿಕ ನಂಬಿಕೆ ಮೇಲೆ ಮಾತ್ರ ಏಕೆ ಕಲ್ಲು ಒಗೆಯುತ್ತಾರೆ ಅನ್ನೋದರಿಂದ ಮೊದಲುಗೊಂಡು ನಾನಾ ಬಗೆಯ ಪ್ರಶ್ನೆಗಳು, ಆಕ್ಷೇಪಗಳು ಅವರ ಬಗ್ಗೆ ಇದೆ. ಅದನ್ನು ನೇರಾನೇರ ಅವರನ್ನೇ ಕೇಳಲಾಗಿದೆ. ಪ್ರೊ.ಕೆ.ಎಸ್.ಭಗವಾನ್ ಅವರನ್ನು ಒನ್ಇಂಡಿಯಾ ಕನ್ನಡ ಸಂದರ್ಶನ ಮಾಡಿದ್ದು, ಪ್ರಶ್ನೋತ್ತರಗಳು ಹೀಗಿವೆ.
1. ನೀವು ಬರೆದಿರುವ ಈ ಪುಸ್ತಕದ ಸಾರಾಂಶವೇನು ? ಏನು ಹೇಳಲು ಹೊರಟಿದ್ದೀರಿ ?
ಭಗವಾನ್: ವಾಲ್ಮೀಕಿ ರಾಮಾಯಣ ಪುಸ್ತಕವನ್ನು ಹಲವು ವರ್ಷಗಳಿಂದ ಅಧ್ಯಯನ ಮಾಡಿದ್ದೇನೆ. ಅಲ್ಲದೇ ನಿಜವಾದ ರಾಮ ಯಾರು ಎಂಬುದನ್ನು ಪತ್ತೆ ಹಚ್ಚಿದ್ದೇನೆ. ವಾಲ್ಮೀಕಿ ರಾಮಾಯಣದಲ್ಲಿ ಜನ ತಿಳಿದುಕೊಂಡ ಹಾಗೇ ರಾಮ ದೇವರಲ್ಲ. ಅವನು ಕೇವಲ ಮನುಷ್ಯನಷ್ಟೇ. ರಾಮ ಎಂಬ ವ್ಯಕ್ತಿಯದು ಅವತಾರ ಎಂಬುದನ್ನು ಮೊದಲು ಆ ವಾಲ್ಮೀಕಿ ರಚಿತ ರಾಮಾಯಣದ ಅಧ್ಯಾಯದಲ್ಲೇಲೂ ಉಲ್ಲೇಖ ಮಾಡಿಲ್ಲ.
ಆ ನಂತರದಲ್ಲಿ ದೇವರೆಂದು ಬಿಂಬಿಸಲು ಮುಂದಿನ ಅಧ್ಯಾಯದಲ್ಲಿ ಸೇರಿಸಲಾಗಿದೆ. ಸ್ವತಃ ರಾಮ - ರಾವಣರ ಯುದ್ಧದ ವೇಳೆಯಲ್ಲೂ ರಾಮನೂ ನಾನು ಅವತಾರವಲ್ಲ ಎಂದಿದ್ದಾನೆ. ಅಹಂ ಮಾನುಷಂ ಮನ್ಯೆ ಹಾಗೂ ನಾನು ದಶರಥನ ಮಗ ಎನ್ನುತ್ತಾನೆ.
ವಾಲ್ಮೀಕಿ ರಾಮಾಯಣ ಸಂಪೂರ್ಣವಾಗಿ ಓದಿದರೆ ರಾಮ ಆದರ್ಶ ವ್ಯಕ್ತಿಯಾಗಿರಲು ಸಾಧ್ಯವೇ ಇಲ್ಲ. ಸೀತೆಗೆ ಆದರ್ಶ ಪತಿಯೂ ಅಲ್ಲ.
ಏಕೆಂದರೆ ಗರ್ಭಿಣಿ ಪತ್ನಿಯನ್ನೇ ಆತ 14 ವರ್ಷ ಕಾಡಿಗೆ ಅಟ್ಟುತ್ತಾನೆ. ವಾಲ್ಮೀಕಿ ಮಹರ್ಷಿ ಸಿಗದೇ ಇದ್ದರೆ ಸೀತೆ ಹೇಳಹೆಸರಿಲ್ಲದಂತೆ ಆಗುತ್ತಿದ್ದಳು. ಇದನ್ನೇ ನಾನು ಪುಸ್ತಕದಲ್ಲಿ ಉಲ್ಲೇಖಿಸಿದ್ದೇನೆ ಅಷ್ಟೇ.
2. ರಾಮನು ಕೊಲೆಗಡುಕ, ಮಾನಿನಿಯರ ಜತೆಗೆ ಸರಸವಾಡುತ್ತಿದ್ದ ಎನ್ನುವುದಕ್ಕೆ ಏನಿದೆ ನಿಮ್ಮ ಬಳಿ ಸಾಕ್ಷ್ಯ ?
ಭಗವಾನ್: ಇವೆಲ್ಲ ನಾನು ಹೇಳಲು ಹೊರಟಿರುವುದಲ್ಲ. ಸ್ವತಃ ವಾಲ್ಮೀಕಿ ರಾಮಾಯಣದಲ್ಲೇ ವಾಲ್ಮೀಕಿಯೇ ಹೇಳಿರುವ ಅಂಶಗಳು. ರಾಮ ರಮಿಸುವುದರಲ್ಲಿ ಶ್ರೇಷ್ಠನಾಗಿದ್ದ. ಮದ್ಯವನ್ನು ಸೀತೆಗೆ ಕುಡಿಸುತ್ತಿದ್ದ. ಮಾಂಸವನ್ನು ಸಹ ಸೇವಿಸುತ್ತಿದ್ದ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ರಾಮ ರಾಜ್ಯಭಾರ ಮಾಡಲಿಲ್ಲ. ಅವನ ಪರವಾಗಿ ಭರತ ರಾಜ್ಯಭಾರ ಮಾಡಿದ್ದ ಎಂದು ಆ ಮಹಾನ್ ಗ್ರಂಥದಲ್ಲಿಯೇ ಉಲ್ಲೇಖಿಸಲಾಗಿದೆ. ಇದ್ಯಾವುದೂ ನನ್ನ ಸ್ವಂತ ಮಾತಲ್ಲ ನೆನಪಿರಲಿ.
ಈ ಎಲ್ಲಾ ದೃಷ್ಟಿಯಿಂದ ಆತ ಮರ್ಯಾದಾ ಪುರುಷೋತ್ತಮನಲ್ಲ. ರಾಮರಾಜ್ಯ ಎಂಬುದೇ ಸುಳ್ಳು. 11 ಸಾವಿರ ವರ್ಷಗಳಲ್ಲ. ಮನುಷ್ಯ ಬದುಕುವುದೇ 100 ವರ್ಷ. ಸಂಸ್ಕೃತದಲ್ಲಿ ವರ್ಷ ಎಂದರೆ ದಿವಸ ಎಂಬ ಮಾತಿದೆ. ಅಂದರೆ 11 ವರ್ಷ ಎಂದಿಟ್ಟುಕೊಳ್ಳೋಣ ಅಷ್ಟೇ. ಆಗ ಬ್ರಾಹ್ಮಣರ ಮಾತು ಕೇಳಿ ಶೂದ್ರನ ತಲೆ ಕತ್ತರಿಸುತ್ತಾನೆ. ಹಾಗಾದರೆ ಇದು ರಾಜನು ಮಾಡುವ ಕೆಲಸವೇ? ಮಾರೀಚ, ಸುಭಾಹು ಹತ್ಯೆ ಮಾಡುತ್ತಾನೆ. ಹಾಗಾಗಿ ರಾಮ ಕೊಲೆಗಡುಕ.
ಉಪನಿಷತ್, ವೇದಾಂತ ಮೆಚ್ಚುವ ನನ್ನ ಮೇಲೇಕೆ ಸಿಟ್ಟು?: ಭಗವಾನ್ ಸಂದರ್ಶನ
3. ನಿಮ್ಮ ಪ್ರಕಾರ ಯಾವ ಧರ್ಮ ಸರಿ ?
ಭಗವಾನ್: ಎಲ್ಲ ಧರ್ಮದಲ್ಲೂ ದೋಷವಿದೆ. ಇದ್ದುದರಲ್ಲಿ ಬೌದ್ಧ ಧರ್ಮದಲ್ಲಿ ಮಾತ್ರ ಸರ್ವ ಸಮಾನತೆ, ಸ್ವಾತಂತ್ರ್ಯ ಇದೆ. ಬುದ್ಧ ತನ್ನ ಅನುಯಾಯಿಗಳಿಗೆ ತಾನು ಮಾಡಿದ್ದನ್ನು ಅನುಸರಿಸಿ ಎಂದಿಲ್ಲ. ಎಲ್ಲರಿಗೂ ಪ್ರಶ್ನಿಸುವ ಅಧಿಕಾರ ನೀಡಿದ.
ರಾಮನು ದೇವರಾ ಎಂದು ಪ್ರಶ್ನಿಸುವ ಪ್ರೊ ಕೆಎಸ್ ಭಗವಾನ್ ಸಂದರ್ಶನ
4. ನಿಮ್ಮ ಗುರಿ ಹಿಂದೂ ಧರ್ಮ ಮಾತ್ರ ಏಕೆ ? ಮುಸ್ಲಿಂ, ಕ್ರಿಶ್ಚಿಯನ್ ಧರ್ಮದೊಳಗಿನ ಲೋಪ ಏಕೆ ಹೇಳಲ್ಲ ?
ಭಗವಾನ್: ಅರೇ ನನಗೆ ಪ್ರಶ್ನಿಸುವ ಹಕ್ಕಿಲ್ಲವೇ? ಇದನ್ನೇ ಪ್ರಶ್ನಿಸಿ, ಅದನ್ನೇ ಪ್ರಶ್ನಿಸಿ ಎಂದು ಏಕೆ ಹೇಳ್ತೀರಿ? ನಾನು ಹಿಂದೂ ಸಮಾಜದಲ್ಲಿ ಇದ್ದೀನಿ ಅಂತೀರಾ. ಹಾಗಾದರೆ ಇಲ್ಲಿ ತಾನೇ ನಾನು ಪ್ರಶ್ನಿಸಬೇಕು. ಇಲ್ಲಿರುವ ಕಸ, ಕೊಳೆಯನ್ನು ತೊಳೆಯಲು ಪ್ರಯತ್ನಿಸುತ್ತಿದ್ದೇನೆ. ಹಾಗಂತಾ ನಾನು ಹಿಂದೂ ಅಂತಿಲ್ಲ. ನೀವು ಇದನ್ನು ಹಿಂದೂ ದೇಶ ಎಂದರಲ್ಲ, ಹಾಗಾಗಿ ನಮ್ಮ ಮನೆಯ ಕ್ಲೀನಿಂಗ್ ಕೆಲಸ ಮಾಡುತ್ತಿದ್ದೇನೆ ಅಷ್ಟೇ.
5. ಹಿಂದೂ ದೇಶ ಪದಕ್ಕೆ ಸಮ್ಮತಿ ಇದೆಯಾ ?
ಭಗವಾನ್: ಖಂಡಿತಾ ಇಲ್ಲ. ಹಿಂದೂ ಎಂಬ ಶಬ್ದ ನಾಲ್ಕು ವೇದಗಳಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ. 18 ಪುರಾಣಗಳಲ್ಲಿಯೂ ಇಲ್ಲ. ರಾಮಾಯಣ- ಮಹಾಭಾರತದಲ್ಲೂ ಇಲ್ಲ. ಸಂಸ್ಕೃತದ ಯಾವುದೇ ಗ್ರಂಥದಲ್ಲಿಯೂ ಇಲ್ಲ. 10ನೇ ಶತಮಾನದಲ್ಲಿ ಪರ್ಷಿಯಾದ ವಿದ್ವಾಂಸನೊಬ್ಬ ಪುಸ್ತಕ ಬರೆಯುವಾಗ ಸಿಂಧೂ ನದಿಯ ಭಾಗದವರನ್ನು ಹಿಂದೂ ಎಂದ. ಅದು ಕೇವಲ ಭೌಗೋಳಿಕ ಅರ್ಥವಷ್ಟೇ. ಅದು ವಿಶೇಷ ಉಕ್ತಿಯಷ್ಟೇ. ನಾನು ಪೂಜಿಸುವ ವಿವೇಕಾನಂದರು ಸಹ 'ನಾನು ಹಿಂದೂ' ಎಂದಿಲ್ಲ. ನಾನು ಮಾನವ ಜಾತಿಗೆ ಸೇರಿದವನು ಎಂದಿದ್ದಾರೆ.
ವಿವೇಕಾನಂದ, ಬಸವಣ್ಣನವರನ್ನು ಕೊಲೆ ಮಾಡಲಾಗಿದೆ: ಪ್ರೊ.ಕೆ ಎಸ್ ಭಗವಾನ್
6. ವಾಲ್ಮೀಕಿ ರಾಮಾಯಣ ಟೀಕೆ ಮಾಡಲು 2500 ವರ್ಷದಿಂದ ಯಾರೂ ಇರಲಿಲ್ಲವೇ ?
ಭಗವಾನ್: ಹಾಗೇ ಅಂದುಕೊಳ್ಳಿ, ತಪ್ಪೇನಿದೆ? ಸಂತ ಪೆರಿಯಾರ್, ಬಾಬಾ ಸಾಹೇಬ್ ಅಂಬೇಡ್ಕರ್ ಸಹ ವಾಲ್ಮೀಕಿ ರಾಮಾಯಣದ ಬಗ್ಗೆ ಟೀಕೆ ಮಾಡಿದ್ದಾರೆ. ಆದರೆ ನಾನು ನನ್ನ angleನಲ್ಲಿ ಟೀಕೆ ಮಾಡಿದ್ದೇನೆ. ಉದಾ: ರಾಮ ಬುದ್ಧನನ್ನು ಕಳ್ಳನೆಂದು ಹೇಳಿದ್ದಾರೆ. ಇದನ್ನು ಯಾರೂ ಹೇಳಿಲ್ಲ.
7. ಚುನಾವಣೆ ವೇಳೆ ಬಿಜೆಪಿ ವಿರುದ್ಧ ಜನ ತಿರುಗೇಳಲು ನಿಮಗೆ ಇದೊಂದು Strategy ಅನ್ನಬಹುದೇ?
ಭಗವಾನ್: ಇದು ಸುಳ್ಳು. ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಯಾವ ಪಕ್ಷ, ಚುನಾವಣೆ, ಜಾತಿ ವ್ಯವಸ್ಥೆ ಏನೂ ಬೇಡ.
8. ನಿಮ್ಮ ಪ್ರಕಾರ ರಾಮ, ಕ್ರಿಸ್ತ, ಅಲ್ಲಾಹ್ ಯಾರೂ ದೇವರಲ್ಲ ಎನ್ನುವುದಾದರೆ ಭಗವಂತ ಯಾರು ?
ಭಗವಾನ್: ಯಾರು ನಿಮಗೆ ಬೆಳಕು ನೀಡುತ್ತಾರೋ ಅವರೇ ದೇವರು. ಹೀಗೆ ಅಜ್ಞಾನವನ್ನು ತೊಡೆದು ಹಾಕಿ, ಜ್ಞಾನದ ದೇವರನ್ನು ಹುಡುಕ ಬನ್ನಿ ಎಂದು ಹೇಳಲು ಹೊರಟ್ಟಿದ್ದೇನೆ. ನಾನು ಯಾವ ಧರ್ವವನ್ನೂ ದ್ವೇಷಿಸಲ್ಲ. ಈ ಹಿಂದೂ ಎನ್ನುವ ಧರ್ಮದಲ್ಲಿ ಇರುವಷ್ಟು ಮೌಢ್ಯತೆ ಇಸ್ಲಾಂ, ಕ್ರಿಶ್ಚಿಯಾನಿಟಿಯಲ್ಲಿ ಇಲ್ಲ.
9.ನಿಮ್ಮ ಪ್ರಕಾರ ರಾಮ ಮಂದಿರ ಏಕೆ ಬೇಡ ?
ಭಗವಾನ್: 40 ವರ್ಷದಿಂದ ಈ ವಿಚಾರವಾಗಿಯೇ ಸುದೀರ್ಘ ಚರ್ಚೆ ನಡೆಯುತ್ತಿದೆ. ಇದು ಕೋಮು- ಕೋಮಿನ ನಡುವಿನ ಘರ್ಷಣೆ. ಆ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಿ ಎಂಬುದು ನನ್ನ ಅಪೇಕ್ಷೆ. ಹಾಗಾಗಿ ರಾಮ ಮಂದಿರ ಬೇಡ. ನಾನು ಬರೆದಿರುವ ಪುಸ್ತಕದಲ್ಲಿ ಸ್ವಂತಿಕೆಯಿಲ್ಲ. ಇದು ಕೇವಲ ಪುಸ್ತಕದ ವಿಮರ್ಶೆಯಷ್ಟೇ.