ಶಾಸಕರಿಗೆ ಕೋಟ್ಯಂತರ ಹಣದ ಆಮೀಷ ಒಡ್ಡುತ್ತಿದೆ ಬಿಜೆಪಿ: ಸಿದ್ದರಾಮಯ್ಯ
ಮೈಸೂರು, ಡಿಸೆಂಬರ್ 30: ನಮ್ಮ ಶಾಸಕರಿಗೆ ಬಿಜೆಪಿಯು 20-30 ಕೋಟಿ ಹಣದ ಆಮೀಷ ಒಡ್ಡಿ ಪಕ್ಷಾಂತರ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದ ದುರಾಸೆಯಿಂದ ಬಿಜೆಪಿಯು ಶಾಸಕರ ಖರೀದಿಯ ವಾಮಮಾರ್ಗ ಹಿಡಿದಿದೆ ಎಂದು ಹೇಳಿದರು.
ಬಿಜೆಪಿಯು ಕುದುರೆ ವ್ಯಾಪಾರಕ್ಕೆ ಇಳಿದಿದೆ. ಶಾಸಕರಿಗೆ 20-30 ಕೋಟಿ ನೀಡುವುದಾಗಿ ಆಮೀಷ ಒಡ್ಡಲಾಗುತ್ತಿದೆ. ಈ ಹಣ ಎಲ್ಲಿಂದ ಬರುತ್ತಿದೆ ಇದು ಭ್ರಷ್ಟಾಚಾರದ ಹಣವಲ್ಲವೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
104 ಶಾಸಕರನ್ನಿಟ್ಟುಕೊಂಡು ಬಿಜೆಪಿ ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ? ಪ್ರಜಾಪ್ರಭುತ್ವದಲ್ಲಿ ಬಹುಮತ ಇದ್ದರಷ್ಟೆ ಸರ್ಕಾರ ರಚಿಸಲು ಸಾಧ್ಯ ಅದರ ಅರಿವು ಆ ಪಕ್ಷಕ್ಕೆ ಇರಬೇಕು. ಬಿಜೆಪಿ ಯಾವ ಕಾರಣಕ್ಕೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಯಾವ ಶಾಸಕರೂ ಬಿಜೆಪಿಯ ಆಮೀಷಕ್ಕೆ ಬಲಿ ಆಗುವುದಿಲ್ಲ ಎಂದರು.
|
'ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಯಾರಿಗೂ ಗೊತ್ತಿಲ್ಲ'
ರಮೇಶ್ ಜಾರಕಿಹೊಳಿ ಕುರಿತಾದ ಪ್ರಶ್ನೆಗಳಿಗೆ ತೀಕ್ಷ್ಣ ಉತ್ತರಗಳನ್ನು ನೀಡಿದ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ದೆಹಲಿಯಲ್ಲಿದ್ದಾರೆ ಎಂದು ನಿಮಗೆ ಗೊತ್ತಾ, ಅವರು ನಿಮಗೆ ಹೇಳಿದ್ದಾರಾ, ಅವರು ಎಲ್ಲಿದ್ದಾರೋ ನನಗೂ ತಿಳಿಯದು, ಈ ರೀತಿಯ ಊಹಾ-ಪೋಹದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಗರಂ ಆಗಿ ಉತ್ತರಿಸಿದರು.

ಪರಮೇಶ್ವರ್ ಗೃಹ ಖಾತೆ ಬಗ್ಗೆ ಮಾತಿಲ್ಲ
ಪರಮೇಶ್ವರ್ ಅವರಿಂದ ಗೃಹ ಖಾತೆ ಕಿತ್ತುಕೊಂಡ ಬಗ್ಗೆ ರೇವಣ್ಣ ಅವರು ನೀಡಿರುವ ಪ್ರತಿಕ್ರಿಯೆ ಬಗ್ಗೆ ಕೇಳಿದಾಗ ಈಗಾಗಲೇ ಇದರ ಬಗ್ಗೆ ನಾನು ಮತ್ತು ಆರ್.ವಿ.ದೇಶಪಾಂಡೆ ಉತ್ತರ ನೀಡಿದ್ದೇವೆ ಮತ್ತೆ ಆ ಬಗ್ಗೆ ಮಾತನಾಡುವುದಿಲ್ಲ ಎಂದರು.

ನಿಗಮ ಮಂಡಳಿ ಕೆಲವೇ ದಿನಗಳಲ್ಲಿ ನೇಮಕ
ಮೈತ್ರಿ ಸರ್ಕಾರ ಸರಿಯಾದ ಹಳಿಯಲ್ಲಿಯೇ ಇದೆ. ನಿಗಮ ಮಂಡಳಿಗೆ 20 ಮಂದಿ ಕಾಂಗ್ರೆಸ್ಸಿಗರ ಪಟ್ಟಿಯನ್ನು ಸಿಎಂಗೆ ನೀಡಲಾಗಿದೆ. ಅದಕ್ಕೆ ಜೆಡಿಎಸ್ನ 10 ಜನರ ಹೆಸರು ಸೇರಿಸಿ ನೇಮಕ ಮಾಡಲಾಗುವುದು ಎಂದು ಹೇಳಿದರು.
|
'ಇಂಗ್ಲಿಷ್ ಶಾಲೆ: ಸಿಎಂ ಜೊತೆ ಚರ್ಚೆ'
ಇಂಗ್ಲಿಷ್ ಭಾಷಾ ಶಾಲೆಗಳನ್ನು ತೆರೆಯುವ ಬಗ್ಗೆ ವಿರೋಧ ವ್ಯಕ್ತವಾಗಿದೆ. ಕನ್ನಡ ಭಾಷೆಗೆ ಹೆಚ್ಚು ಒತ್ತು ನೀಡುವ ದೃಷ್ಟಿಯಿಂದ ಸಾಹಿತ್ಯ ವಲಯದ ದಿಗ್ಗಜರು ಕೂಡ ಇಂಗ್ಲಿಷ್ ಶಾಲೆ ತೆರೆಯಲು ವಿರೋಧಿಸಿದ್ದಾರೆ. ಹಾಗಾಗಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ ಎಂದರು.












Click it and Unblock the Notifications