ಕರ್ನಾಟಕ ಬಂದ್ ಗೆಲ್ಲುತ್ತೋ ಅಮಿತ್ ಶಾ ಸಭೆ ನಿಲ್ಲುತ್ತೋ!
Recommended Video

ಮೈಸೂರು, ಜನವರಿ 22 : 'ನವ ಕರ್ನಾಟಕ ನಿರ್ಮಾಣ'ಕ್ಕಾಗಿ ಪರಿವರ್ತನಾ ಯಾತ್ರೆಯು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿದ್ದು, ಜನವರಿ 25ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಭಾರೀ ಶಕ್ತಿ ಪ್ರದರ್ಶನ ನೀಡಲು ಬಿಜೆಪಿ ಭಾರೀ ಸಿದ್ಧತೆ ನಡೆಸಿದೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ತಾಲೂಕು ಚಾಮುಂಡೇಶ್ವರಿ ಕ್ಷೇತ್ರ, ನಗರದ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತಗಳ ವ್ಯಾಪ್ತಿಯ ಕಾರ್ಯಕರ್ತರ ಮತ್ತು ಬಿಜೆಪಿ ಅಭಿಮಾನಿಗಳ ಸಮಾವೇಶ ನಡೆಯಲಿದ್ದು, 50 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಮಹಾರಾಜ ಕಾಲೇಜು ಮೈದಾನದಲ್ಲಿ ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಿ, ನಂತರ ಇದೇ ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಾಧ್ಯಕ್ಷ ಡಾ.ಬಿ.ಎಚ್. ಮಂಜುನಾಥ್, ಜನವರಿ 25ರಂದು ಮಧ್ಯಾಹ್ನ 3ಕ್ಕೆ ಬೃಹತ್ ಪ್ರಮಾಣದಲ್ಲಿ ಸಮಾವೇಶ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗವಹಿಸುವರು ಎಂದರು.

ಎಸ್ಸೆಂ ಕೃಷ್ಣ ಸೇರಿ ಹಲವು ಮುಖಂಡರು ಭಾಗಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ, ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ವಿವಿಧ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೊದಲ ಬಾರಿಗೆ ಮೈಸೂರಿಗೆ ಆಗಮಿಸುತ್ತಿದ್ದಾರೆ. ಅದಕ್ಕಾಗಿ ಬೇಕಾದ ಸಿದ್ಧತೆ ಆರಂಭಿಸಲಾಗಿದೆ. ಅಂದು ಪಕ್ಷದ ಕಾರ್ಯಕರ್ತರು ನಗರದ ನಾನಾ ಭಾಗಗಳಿಂದ ಮೆರವಣಿಗೆ ಮೂಲಕ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಲಿದ್ದು, ಇದೇ ಸಂದರ್ಭದಲ್ಲಿ ವಿವಿಧ ಪಕ್ಷದ ಕಾರ್ಯಕರ್ತರು ಬಿಜೆಪಿ ಸೇರಲಿದ್ದಾರೆ ಎಂದರು.

ಮೈಸೂರಿನಲ್ಲಿ ಸಮಾರೋಪ
ಬಿಜೆಪಿ ಪರಿವರ್ತನಾ ಯಾತ್ರೆಯು ಈಗಾಗಲೇ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದ್ದು, ಮೈಸೂರಿನಲ್ಲಿ ನಡೆಯುವ ಸಮಾವೇಶ ಯಾತ್ರೆಯೇ ಸಮಾರೋಪವಾಗಲಿದೆ. ಜೆಡಿಎಸ್ ನಲ್ಲಿರುವ ಕೆ.ಹರೀಶ್ ಗೌಡ ಅವರು ಬಿಜೆಪಿಗೆ ಅನಿವಾರ್ಯವಲ್ಲ ಎನ್ನುವ ಮೂಲಕ, 'ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಭರವಸೆ ನೀಡಿದರೆ ಬಿಜೆಪಿಗೆ ಬರುವುದಾಗಿ ಹೇಳಿದ್ದೇನೆ' ಎಂಬ ಹರೀಶ್ ಗೌಡ ಹೇಳಿಕೆಗೆ ತಿರುಗೇಟು ನೀಡಿದರು.

ಪಕ್ಷದ ನಾಯಕರೇನೂ ಆಹ್ವಾನಿಸಿಲ್ಲ
ಬೇರೆ ಪಕ್ಷದವರನ್ನು ಆಹ್ವಾನಿಸುವ ಅನಿವಾರ್ಯ ಬಿಜೆಪಿಗಿಲ್ಲ. ಅವರಿಗೆ ಬಿಜೆಪಿ ಅನಿವಾರ್ಯ ಆಗಿರಬಹುದು. ಯಾವುದೇ ಷರತ್ತಿಲ್ಲದೆ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ. ಕೆ. ಹರೀಶ್ ಗೌಡ ಅವರೇ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ, ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರೆ ಹೊರತು ಪಕ್ಷದ ಯಾವ ನಾಯಕರೂ ಅವರನ್ನು ಆಹ್ವಾನಿಸಿಲ್ಲ ಎಂದು ಪ್ರತಿಕ್ರಿಯಿಸಿದರು.












Click it and Unblock the Notifications