ಬಿಜೆಪಿ ಶಾಸಕರು ಸಿಂಹರೂಪಿಗಳು, ಧಂ ಇದ್ದರೆ ಮುಟ್ಟಿ ನೋಡೋಣ: ಈಶ್ವರಪ್ಪ ಸವಾಲು
ಮೈಸೂರು, ಆಗಸ್ಟ್ 9 : ಬಿಜೆಪಿಯ ಶಾಸಕರು ಸಿಂಹ ರೂಪದವರು. ಅವರು ಕಾಂಗ್ರೆಸ್ನ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂದು ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲೇ ವರ್ಗಾವಣೆಯಲ್ಲಿ ಇಷ್ಟೊಂದು ಭ್ರಷ್ಟಾಚಾರ ನಡೆದಿರಲಿಲ್ಲ. ಮಂತ್ರಿಗಳು ವರ್ಗಾವಣೆಯ ಕಮೀಷನ್ ಏಜೆಂಟ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವರ್ಗಾವಣೆಯ ವಿಚಾರದಲ್ಲಿ ಮುಖ್ಯಮಂತ್ರಿ ಕಣ್ಮುಚ್ಚಿ ಕುಳಿತು ಕೊಂಡಿರುವುದು ಒಳ್ಳೆಯದಲ್ಲ. ಎಲ್ಲಾ ಹಂತದ ಅಧಿಕಾರಿಗಳ ವರ್ಗಾವಣೆಗೆ ಹಣ ಪಡೆಯಲಾಗುತ್ತಿದೆ. ಹೀಗಾಗಿ ಅಧಿಕಾರಿಗಳಿಗೆ ಯಾವ ಕ್ಷಣದಲ್ಲಿ ಈ ಸರ್ಕಾರ ಬೀಳುತ್ತೋ, ಯಾವ ಕ್ಷಣದಲ್ಲಿ ನಮ್ಮ ವರ್ಗಾವಣೆ ಆಗುತ್ತೋ ಎಂಬ ಆತಂಕದಲ್ಲಿದ್ದಾರೆ ಎಂದರು.

ಆಪರೇಷನ್ ಕಮಲ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾವಾಗಿ ನಾವು ಕಾಂಗ್ರೆಸ್ ಶಾಸಕರನ್ನು ಸರ್ಕಾರ ಬೀಳಿಸೋಣ ಬನ್ನಿ ಎಂದು ಕರೆಯುವುದಿಲ್ಲ. ಬಿಜೆಪಿ ಕರೆದ ಕೂಡಲೇ ನಮ್ಮ ಜೊತೆ ಬರುವಷ್ಟು ಕಾಂಗ್ರೆಸ್ ಶಾಸಕರು ದುರ್ಬಲರೇ ಎಂದು ಪ್ರಶ್ನಿಸಿದರು.
ನೀವು ನಮ್ಮ ಒಬ್ಬ ಶಾಸರಕರನ್ನು ಮುಟ್ಟಿ ನೋಡೋಣ. ನಮ್ಮ ಶಾಸಕರುಗಳು ಸಿಂಹ ರೂಪದವರು ಎಂದು ಹೇಳಿದರು.

ಕಾಂಗ್ರೆಸ್ ಶಾಸಕರ ಬಗ್ಗೆ ಅವರ ಅಧ್ಯಕ್ಷರಿಗೇ ನಂಬಿಕೆ ಇಲ್ಲ. ರಾಜ್ಯದ ಜೆಡಿಎಸ್-ಕಾಂಗ್ರೆಸ್ ಶಾಸಕರು ದುರ್ಬಲರು. ಇಂತಹ ಶಾಸಕರು ರಚಿಸಿರುವ ಸರ್ಕಾರ ಉಳಿಯುತ್ತಾ ಎಂದು ವ್ಯಂಗ್ಯವಾಗಿ ಕೇಳಿದರು.

ಬಿಜೆಪಿಯ ಶಾಸಕರು ಸಿಂಹ ರೂಪದ ಶಾಸಕರು. ಅವರು ಕಾಂಗ್ರೆಸ್ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂದು ಹೇಳಿದ ಅವರು, ರಾಜ್ಯದಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಅಲೆ ಇದೆ. ಈ ಅಲೆಯಿಂದಾಗಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ 104 ಸ್ಥಾನಗಳನ್ನು ಪಡೆಯಲು ಸಾಧ್ಯವಾಗಿದೆ. ಆಡಳಿತದಲ್ಲಿದ್ದ ಕಾಂಗ್ರೆಸ್ ಕೇವಲ 78 ಸ್ಥಾನಗಳನ್ನು ಪಡೆದು 38 ಸ್ಥಾನಗಳನ್ನು ಪಡೆದ ಜೆಡಿಎಸ್ಗೆ ಬೆಂಬಲ ನೀಡುವಂತಹ ದುಸ್ಥಿತಿಗೆ ಬಂದಿದೆ ಎಂದು ಲೇವಡಿ ಮಾಡಿದರು.












Click it and Unblock the Notifications