ಫಡ್ನವಿಸ್ -ಪವಾರ್ ನಡುವೆ ತಡರಾತ್ರಿ ಚರ್ಚೆ ನಡೆದಿದ್ದೇಕೆ?
ಮುಂಬೈ, ನವೆಂಬರ್ 25: ಮಹಾರಾಷ್ಟ್ರದಲ್ಲಿ ಬಹುಮತ ಸಾಬೀತು ಪಡಿಸಲು ಹೊಸ ಸರ್ಕಾರ ಹರಸಾಹಸ ಪಡುತ್ತಿರುವ ಹೊತ್ತಲ್ಲಿ, ಭಾನುವಾರ ತಡರಾತ್ರಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಡುವೆ ನಡೆದ ಚರ್ಚೆ ಕುತೂಹಲ ಕೆರಳಿಸಿದೆ.
ಉಭಯ ನಾಯಕರ ಚರ್ಚೆಯ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿಯ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. " ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಇಂದು ಭೇಟಿಯಾಗಿ ಹೆಚ್ಚುವರಿ ಬೆಂಬಲ ಮತ್ತು ಅಕಾಲಿಕ ಮಳೆಯಿಂದ ಆದ ಹಾನಿಯ ಪರಿಹಾರೋಪಾಯದ ಬಗ್ಗೆ ಚರ್ಚೆ ನಡೆಸಿದರು. ನಾಳೆ ಈ ಕುರಿತು ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸು ಕಾರ್ದರ್ಶಿಯ ಜೊತೆ ಚರ್ಚೆ ನಡೆಸಲಾಗುವುದು" ಎಂದು ಟ್ವೀಟ್ ಮಾಡಲಾಗಿದೆ.
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಎತ್ತು ಏರಿಗೆ, ಕೋಣ ನೀರಿಗೆ!
ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್ ಸಿಪಿಯ ಅಜಿತ್ ಪವಾರ್ ನೇತೃತ್ವದಲ್ಲಿ ರಚನೆಯಾದ ಸರ್ಕಾರದ ವಿರುದ್ಧ ಎನ್ ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಭಾನುವಾರ ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ, ದೇವೆಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರಿಗೆ ನೋಟಿಸ್ ನೀಡಿದೆ. ರಾಜ್ಯಪಾಲರು ದೇವೇಂದ್ರ ಫಡ್ನವಿಸ್ ಅವರನ್ನು ಸರ್ಕಾರ ರಚನೆಗೆ ಆಮಂತ್ರಿಸಿದ ಪತ್ರ ಮತ್ತು ಸರ್ಕಾರ ರಚಿಸುವುದಾಗಿ ರಾಜ್ಯಪಾಲರ ಬಳಿ ದೇವೇಂದ್ರ ಫಡ್ನವಿಸ್ ವಿನಂತಿ ಮಾಡಿಕೊಂಡ ಪತ್ರವನ್ನು ತನಗೆ ನೀಡುವಂತೆ ಅದು ಕೇಳಿದೆ.
ಬಹುಮತ ಸಾಬೀತಿಗೆ ನೀಡಿರುವ ನವೆಂಬರ್ 30 ರ ಗಡುವನ್ನು ರದ್ದುಗೊಳಿಸಿ, ಕೂಡಲೆ ಬಹುಮತ ಸಾಬೀತುಪಡಿಸುವಂತೆ ಸುಪ್ರೀ ಕೋರ್ಟ್ ಆದೇಶ ನೀಡಬೇಕು ಎಂಬ ಬೇಡಿಕೆಯನ್ನೂ ಶಿವಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಪಕ್ಷಗಳು ಮನವಿ ಮಾಡಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಆದೇಶ ನೀಡುವ ಸಾಧ್ಯತೆ ಇದೆ.