ಬಾಲಿವುಡ್ಅನ್ನು ಮುಗಿಸುವ ಪ್ರಯತ್ನಗಳನ್ನು ಸಹಿಸುವುದಿಲ್ಲ: ಉದ್ಧವ್ ಠಾಕ್ರೆ
ಮುಂಬೈ, ಅಕ್ಟೋಬರ್ 15: ಬಾಲಿವುಡ್ಗೆ ಕೆಟ್ಟ ಹೆಸರು ತರುವ, ಅದನ್ನು ಮುಗಿಸಿಬಿಡುವ ಅಥವಾ ಅದನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಯತ್ನಗಳನ್ನು ಸಹಿಸುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳು ತನಿಖೆ ನಡೆಸುತ್ತಿರುವ ಹಾಗೂ ಬಾಲಿವುಡ್ಅನ್ನು ಉದ್ದೇಶಪೂರ್ವಕವಾಗಿ ಗುರಿಯನ್ನಾಗಿರಿಸಿದಂತೆ ಕಾಣುವ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ.
'ಹಿಂದಿ ಚಿತ್ರರಂಗವನ್ನು ಮುಗಿಸಿಬಿಡುವ ಅಥವಾ ಅದನ್ನು ಬೇರೆಲ್ಲಿಗೋ ವರ್ಗಾಯಿಸುವ ನಡೆಗಳನ್ನು ಎಂದಿಗೂ ಸಹಿಸುವುದಿಲ್ಲ. ಮುಂಬೈ ದೇಶದ ಹಣಕಾಸು ರಾಜಧಾನಿ ಮಾತ್ರವಲ್ಲ, ಅದು ಮನರಂಜನೆಯ ರಾಜಧಾನಿಯೂ ಹೌದು' ಎಂದು ಅವರು ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರ ಮಾಲೀಕರ ಜತೆ ಸಭೆ ನಡೆಸಿದ ಬಳಿಕ ಹೇಳಿದ್ದಾರೆ.

'ಜಗತ್ತಿನಾದ್ಯಂತ ಬಾಲಿವುಡ್ಗೆ ಅನುಯಾಯಿಗಳಿದ್ದಾರೆ. ಚಿತ್ರೋದ್ಯಮದ ಭಾರಿ ಪ್ರಮಾಣದ ಉದ್ಯೋಗ ಸೃಷ್ಟಿಸುತ್ತದೆ. ಕಳೆದ ಕೆಲವು ದಿನಗಳಿಂದ ಕೆಲವು ವಿಭಾಗಗಳಿಂದ ಚಿತ್ರರಂಗಕ್ಕೆ ಕಪ್ಪು ಮಸಿ ಬಳಿಯುವ ಪ್ರಯತ್ನಗಳು ನಡೆಯುತ್ತಿರುವುದು ನೋವುಂಟು ಮಾಡುತ್ತಿದೆ' ಎಂದಿದ್ದಾರೆ.
ನಿರ್ದಿಷ್ಟ ಕಾರ್ಯಾಚರಣೆ ಪ್ರಕ್ರಿಯೆಗಳ ನಿಯಮಗಳನ್ನು ಅಂತಿಮಗೊಳಿಸುವ ಕೆಲಸವನ್ನು ಸಂಸ್ಕೃತಿ ಇಲಾಖೆ ಮಾಡುತ್ತಿದೆ. ಅದು ಪೂರ್ಣಗೊಂಡ ಬಳಿಕ ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳನ್ನು ತೆರೆಯುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications