Breaking: ಮಹಾರಾಷ್ಟ್ರ ಸರ್ಕಾರಕ್ಕೆ ಸಿಡಿಲು ಹೊಡೆಯುವ ಕಾಲದಲ್ಲಿ ಸಿಎಂಗೆ ಕೊರೊನಾ ವೈರಸ್!
ಮುಂಬೈ, ಜೂನ್ 22: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ರಾಜಕೀಯ ಬಿಕ್ಕಟ್ಟಿನ ನಡುವೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ರಾಜ್ಯದಲ್ಲಿ ಭುಗಿಲೆದ್ದ ರಾಜಕೀಯ ಬಿಕ್ಕಟ್ಟಿನ ನಡುವೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅನ್ನು ಭೇಟಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ, ಏಕೆಂದರೆ ಅವರಿಗೆ ಕೋವಿಡ್-19 ಸೋಂಕು ತಗುಲಿದೆ ಎಂದು ಕಾಂಗ್ರೆಸ್ ರಾಜ್ಯ ವೀಕ್ಷಕ ಕಮಲನಾಥ್ ತಿಳಿಸಿದ್ದಾರೆ.
Maharashtra Political Crisis : ಠಾಕ್ರೆ ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿದ್ದು ಹೇಗೆ ಏಕನಾಥ್ ಶಿಂಧೆ?
"ನಾವು ಉದ್ಧವ್ ಠಾಕ್ರೆ ಜೊತೆಗೆ ಸಭೆ ನಡೆಸಿದ್ದೇವೆ, ಆದರೆ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ನಾನು ಅವರನ್ನು ಭೇಟಿಯಾಗಲು ಸಾಧ್ಯವಿಲ್ಲ," ಎಂದು ಕಮಲನಾಥ್ ತಿಳಿಸಿದ್ದಾರೆ.
ರಾಜ್ಯಪಾಲರಿಗೂ ಅಂಟಿರುವ ಕೊರೊನಾ ವೈರಸ್
ಬುಧವಾರ ರಾಜ್ಯಪಾಲರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತು. ಈ ಹಿನ್ನೆಲೆ 80 ವರ್ಷದ ಭಗತ್ ಸಿಂಗ್ ಕೊಶ್ಯಾರಿ ಅನ್ನು ದಕ್ಷಿಣ ಮುಂಬೈನಲ್ಲಿ ಇರುವ ರಿಲಾಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸದಾ ಮಾಸ್ಕ್ ಧರಿಸಿಕೊಂಡು ಹಾಜರಾಗುತ್ತಿದ್ದ ಭಗತ್ ಸಿಂಗ್ ಕೊಶ್ಯಾರಿ ಕೋವಿಡ್ ಸೋಂಕಿನ ಬಗ್ಗೆ ಅತಿಹೆಚ್ಚು ಜಾಗೃತಿ ವಹಿಸಿದ್ದರು. ಅದಾಗ್ಯೂ, ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಈ ವೇಳೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಾತ್ರಿ ಆಯಿತು.
ಮಹಾರಾಷ್ಟ್ರದಲ್ಲಿ ಸರ್ಕಾರ ವಿಸರ್ಜನೆಯ ಹಂತಕ್ಕೆ ಬಿಕ್ಕಟ್ಟು
ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಶಿವಸೇನೆಯ ಹಿರಿಯ ನಾಯಕ ಏಕನಾಥ್ ಶಿಂಧೆ ಬಂಡಾಯ ಬಾವುಟ ಹಾರಿಸಿದ್ದು ಆಗಿದೆ. ಸರ್ಕಾರ ಇನ್ನೇನು ವಿಸರ್ಜನೆ ಆಗುತ್ತೆ ಎನ್ನುವ ಮಟ್ಟಕ್ಕೆ ಬಿಕ್ಕಟ್ಟು ತಲುಪಿದ್ದು, ಸ್ವತಃ ಶಿವಸೇನೆಯ ಮುಖಂಡ ಸಂಜಯ್ ರಾವತ್ ಸುಳಿವು ನೀಡಿದ್ದಾರೆ. ಬುಧವಾರ ಸಂಜೆಯೇ ಸಿಎಂ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವ ಕುರಿತು ಗುಲ್ಲಾಗಿದೆ. ಇದರ ಮಧ್ಯೆ ಕೊರೊನಾವೈರಸ್ ಸೋಂಕಿನ ಸುದ್ದಿ ಕೆಲಸ ಮಾಡುತ್ತಿದೆ.
ಸರ್ಕಾರಕ್ಕೆ ಸಿಡಿಲು ಹೊಡೆಯುವ ಕಾಲದಲ್ಲಿ ಸಿಎಂಗೆ ಕೊರೊನಾ
ಮಹಾರಾಷ್ಟ್ರ ಸರ್ಕಾರಕ್ಕೆ ಇನ್ನೇನು ಸಿಡಿಲು ಹೊಡೆಯುತ್ತೆ. ಏಕನಾಥ್ ಶಿಂಧೆ ಪರವಾಗಿ 40ಕ್ಕೂ ಹೆಚ್ಚು ಶಾಸಕರು ಸಹಿ ಮಾಡಿ ಕೊಟ್ಟಿರುವುದು ಸುದ್ದಿ ಆಗಿದೆ. ಈ ರಾಜಕೀಯ ಬೆಳವಣಿಗೆಯ ಮಧ್ಯೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿರುವ ಬಗ್ಗೆ ಸುದ್ದಿ ಹೊರ ಬಿದ್ದಿದೆ. ಇನ್ನೊಂದು ಮಗ್ಗಲಿನಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಗೂ ಕೋವಿಡ್-19 ಸೋಂಕು ಅಂಟಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದು ಸುದ್ದಿಯಾಗಿದೆ. ರಾಜಕೀಯದ ಮಧ್ಯೆ ಕೊರೊನಾ ವೈರಸ್ ನುಗ್ಗಿ ಬಂದಿರುವುದು ಹೊಸ ತಿರುವಿನ ಲೆಕ್ಕಾಚಾರಗಳನ್ನು ಹಾಕಿಕೊಳ್ಳುವಂತೆ ಮಾಡಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಅಂಕಿ-ಸಂಖ್ಯೆ
ಕಳೆದ ಮಂಗಳವಾರ ಮಹಾರಾಷ್ಟ್ರದಲ್ಲಿ 3,659 ಮಂದಿಗೆ ಕೋವಿಡ್ -19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿತ್ತು. ಈ ಪೈಕಿ ಮುಂಬೈನಲ್ಲೇ 1,781 ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಒಂದು ಸಾವಿನ ಪ್ರಕರಣ ಪತ್ತೆಯಾಗಿತ್ತು. ರಾಜ್ಯದಲ್ಲಿ ಇದುವರೆಗೂ ಒಟ್ಟು 79,41,762 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸಾವಿನ ಪ್ರಕರಣಗಳ ಸಂಖ್ಯೆ 1,47,889ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.