ಯು.ಟಿ ಖಾದರ್ ತವರು ಕ್ಷೇತ್ರದಲ್ಲಿ ಕಸದ ವಾಹನದ ದುಸ್ಥಿತಿ: ನಗರಸಭೆ ವಿರುದ್ಧ ವ್ಯಾಪಕ ಟೀಕೆ
ಮಂಗಳೂರು, ಡಿಸೆಂಬರ್ 01: ಡಕೋಟಾ ವಾಹನಗಳನ್ನು ನೋಡಬೇಕಾದರೆ ದೂರದ ಆಫ್ರೀಕಾಗೆ ಹೋಗಬೇಕಾಗಿಲ್ಲ. ಮಂಗಳೂರಿನ ಉಳ್ಳಾಲದಲ್ಲೇ ಡಕೋಟಾ ವಾಹನಗಳಿವೆ. ಬಾಗಿಲನ್ನು ಹಗ್ಗದಿಂದ ಕಟ್ಟಿ, ಚಾಲಕ ಕಿಟಕಿ ಮೂಲಕ ನುಸುಳಿ ವಾಹನಕ್ಕೆ ಹೋಗುತ್ತಾನೆ. ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಪ್ರತಿನಿಧಿಸುವ ಉಳ್ಳಾಲ ವಿಧಾನಸಭಾ ಕ್ಷೇತ್ರದ ಉಳ್ಳಾಲ ನಗರಸಭೆಯ ಕಸ ಸಂಗ್ರಹ ವಾಹನದ ದುಸ್ಥಿತಿಯ ವಿಡಿಯೋ ಕಂಡ ಜನರ ಈಗ ನಗರಸಭೆ ಆಡಳಿತಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಕಸದ ವಾಹನದ ಚಾಲಕ ಹಗ್ಗ ಕಟ್ಟಿ ಡೋರ್ ಮುಚ್ಚಿದ ಬಳಿಕ ವಾಹನದೊಳಗೆ ನುಸುಳಿಕೊಂಡು ಚಾಲಕನ ಸೀಟಿನಲ್ಲಿ ಕುಳಿತು ವಾಹನ ಚಲಾಯಿಸಬೇಕಾದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ.

ಉಳ್ಳಾಲ ವ್ಯಾಪ್ತಿಯ ಕಲ್ಲಾಪಿನಲ್ಲಿ ಕಸ ಸಂಗ್ರಹಕ್ಕೆಂದು ಬಂದಿದ್ದ ವಾಹನದ ದುಸ್ಥಿತಿ ಯ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಸಲಾಂ ಎಂಬುವವರು ವಿಡಿಯೋ ಮಾಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಾಯಕಾರಿ ಸ್ಥಿತಿಯಲ್ಲಿ ವಾಹನವಿದ್ದು ಅದೇ ವಾಹನದಲ್ಲಿ ಕಸ ಸಂಗ್ರಹಕ್ಕೆ ಕಾರ್ಮಿಕರು ತೆರಳುತ್ತಾರೆ. ಈ ರೀತಿಯ ಅಪಾಯಕಾರಿ ವಾಹನಕ್ಕೆ ಅಫಘಾತವಾದರೆ ಯಾರು ಹೊಣೆ, ಕಾರ್ಮಿಕರ ಪ್ರಾಣಕ್ಕೆ ಬೆಲೆ ಇಲ್ಲವೇ..? ಅಧಿಕಾರಿಗಳು, ಶಾಸಕ ಯು.ಟಿ ಖಾದರ್ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತೆ ವಾಣಿ ವಿ ಆಳ್ವ ಪ್ರತಿಕ್ರಿಯೆ ನೀಡಿದ್ದು, ಈ ವಾಹನ ಏಳು ವರ್ಷ ಹಳೆಯದ್ದಾಗಿದ್ದು, ದುರಸ್ಥಿ ಮಾಡಲು ಅಸಾಧ್ಯವಾಗಿದೆ. ಹೊಸ ಆಟೋ ಟಿಪ್ಪರ್ ವಾಹನ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಬಗ್ಗೆ ಶಾಸಕ ಖಾದರ್ ಗಮನಕ್ಕೂ ತರಲಾಗಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ವಿಧಾನಸಭೆಯ ಸಭಾಧ್ಯಕ್ಷರ ತವರು ಕ್ಷೇತ್ರದಲ್ಲೇ ಆಡಳಿತ ವ್ಯವಸ್ಥೆ ಅವ್ಯವಸ್ಥೆಯ ಗೂಡಾಗಿದ್ದು, ಜನ ಛೀಮಾರಿ ಹಾಕುತ್ತಿದ್ದಾರೆ.












Click it and Unblock the Notifications